ಬಳ್ಳಾರಿ ಪೊಲೀಸರಿಂದ ಆಂಧ್ರದ ಐವರು ನಕ್ಸಲರ ಬೇಟೆ
ಬಂಧಿತರು ವಾರಂಗಲ್ ಜಿಲ್ಲೆಯ ನಲ್ಲಿಕೂಡೂರು ಮಂಡಲಂನ ಬಡ್ಲಡ ಗ್ರಾಮ ನಿವಾಸಿಗಳಾದ ರಾಪಾಕ ಶ್ರೀರಾಮುಲು (42), ರಾಜು (20), ಪಿಯುಸಿ ವಿದ್ಯಾರ್ಥಿ ಯಾಕಣ್ಣ (20), ರಾಪಾಕು ಯಾಕಣ್ಣ (37) ಮತ್ತು ಬುಲುಗು ಮಂಡಲಂನ ಮದನಪಲ್ಲಿ ಗ್ರಾಮ ನಿವಾಸಿ, ಆಂಧ್ರಪ್ರದೇಶ ಹೌಸಿಂಗ್ ಬೋರ್ಡ್ ಕಾರ್ಪೊರೇಷನ್ನ ವರ್ಕ್ಇನ್ಸಪೆಕ್ಟರ್ ಪಿ. ಚಂದ್ರಪಾಲ್ (43).
ಬಂಧಿತ ಆರೋಪಿಗಳು ಓಬಳಾಪುರಂ ಮೈನಿಂಗ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಬಿ.ವಿ. ಶ್ರೀನಿವಾಸರೆಡ್ಡಿ ಅವರಿಗೆ ದೂರವಾಣಿ ಮೂಲಕ ಏಪ್ರಿಲ್ 14ರಿಂದ 21ರ ಅವಧಿಯಲ್ಲಿ ವಿವಿಧ ಸಂದರ್ಭಗಳಲ್ಲಿ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಸಲ್ಲಿಸಿದ್ದರು. ಅಲ್ಲದೇ, ಹಣ ನೀಡದೇ ಇದ್ದಲ್ಲಿ ಸಿಬ್ಬಂದಿ ಸಮೇತ ಪ್ರಾಣ ತೆಗೆಯುವುದಾಗಿ ಬೆದರಿಕೆ ಹಾಕಿದ್ದರು.
ಈ ಕುರಿತು ಕೌಲ್ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆದು, ಐವರು ಆರೋಪಿಗಳನ್ನು ತಿರುಪತಿಯಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರ ಪೈಕಿ ರಾಪಾಕು ಶ್ರೀರಾಮುಲು ತಂಡದ ನಾಯಕನಾಗಿದ್ದು, ಮೃತ ಮಾಜಿ ನಕ್ಸಲ್ ನಾಯಕ ಈಶಂ ಶ್ರೀರಾಮುಲು ಜೊತೆ ನಿಕಟ ಸಂಕಪರ್ಕ ಹೊಂದಿದ್ದನು ಎನ್ನಲಾಗಿದೆ.
ಬಂಧಿತ ಆರೋಪಿಗಳಿಂದ ಐದು ಮೊಬೈಲ್ ಫೋನ್ಗಳು, ಸಿಪಿಐ (ಎಂಎಲ್) ಪ್ರಜಾ ಪ್ರತಿಭಟನ ಪಾರ್ಟಿ ಚಂದ್ರಾಪುಲ್ಲಾರೆಡ್ಡಿ ಗ್ರೂಪ್ ಎನ್ನುವ ಕೆಂಪಕ್ಷರದ ಇಂಗ್ಲಿಷ್ ಲೆಟರ್ಹೆಡ್ನ 20 ಪ್ಯಾಡ್ಗಳು, ಏರ್ಟೆಲ್ನ 3 ಸಿಮ್ಗಳು, ರಜಕ ಜನ ಐಕ್ಯ ವೇದಿಕೆಯ ವಿಸಿಟಿಂಗ್ ಕಾರ್ಡ್ಗಳು, ವಿವಿಧ ಬ್ಯಾಂಕ್ಗಳ ಐದು ಎಟಿಎಂ ಕಾರ್ಡ್ಗಳು, 1 ಪಾನ್ ಕಾರ್ಡ್ ವಶವಡಿಸಿಕೊಳ್ಳಲಾಗಿದೆ.