ಸಾಯಿಬಾಬಾ ಬೆನ್ನತ್ತಿರುವ ಪವಾಡ ಮತ್ತು ವಿವಾದ
ಭಗವಾನ್ ರನ್ನು ಕಳೆದುಕೊಂಡು ದುಃಖತಪ್ತರಾಗಿದ್ದ ಭಕ್ತರಿಗೆ ಈ ಅಚ್ಚರಿಯ ವಿದ್ಯಮಾನ ತಂಗಾಳಿಯಂತೆ ತೂರಿಬಂದಿತು. ಆ ಒಂದು ಕ್ಷಣ ನೆತ್ತಿಯ ಮೇಲೆ ಸೆರಗು ಹೊದ್ದುವುದನ್ನು ಮರೆತು, ಸಿಕ್ಕ ವಸ್ತುವಿನಿಂದ ಗಾಳಿ ಹಾಕಿಕೊಳ್ಳುವುದನ್ನು ಬದಿಗಿಟ್ಟು ಎಲ್ಲರೂ ಆಕಾಶದತ್ತ ಕತ್ತು ಎತ್ತಿದರು. ಅಲ್ಲಿ ಅರ್ಧ ಚಂದ್ರಾಮ ನಗುತ್ತಿದ್ದ. ಭಕ್ತರೆಲ್ಲ ಓಂ ಸಾಯಿರಾಂ, ಓಂ ಸಾಯಿರಾಂ ಎಂಬ ಘೋಷಣೆಗಳನ್ನೆಲ್ಲ ಕೂಗಲು ಪ್ರಾರಂಭಿಸಿದರು. [ಗ್ಯಾಲರಿ ನೋಡಿರಿ]
ಮತ್ತೊಂದು ವಿವಾದ : ಸಾಯಿಬಾಬಾ ಮಣ್ಣಾಗುವ ಹೊತ್ತಿನಲ್ಲಿಯೇ ಮತ್ತೊಂದು ವಿವಾದ ಭುಗಿಲೆದ್ದಿದೆ. ಬಾಬಾ ಅವರು ತೀರಿಕೊಂಡಿದ್ದು ಏ.24 ಆದರೂ ಏ.4ರಂದೇ ಅವರಿಗಾಗಿ ಶವವನ್ನು ಕೆಡದಂತೆ ಇಡುವ ಪೆಟ್ಟಿಗೆಯನ್ನು ಬೆಂಗಳೂರಿನಿಂದ ತರಿಸಿಕೊಂಡಿದ್ದೇಕೆ? ಎಂಬ ಪ್ರಶ್ನೆ ಆವರಿಸಿಕೊಂಡಿದೆ. ಈ ಪ್ರಶ್ನೆಗೆ ಸದ್ಯಕ್ಕೆ ಯಾರೂ ಉತ್ತರ ನೀಡುವ ಪರಿಸ್ಥಿತಿಯಲ್ಲಿಲ್ಲ.
ದೇಹಸ್ಥಿತಿ ವಿಷಮಿಸಿ ಮಾರ್ಚ್ 28ರಂದು ಶ್ರೀ ಸತ್ಯ ಸಾಯಿ ಆಸ್ಪತ್ರೆಗೆ ಬಾಬಾ ಅವರನ್ನು ದಾಖಲಿಸಲಾಯಿತು. ಅವರು ಅಸ್ತಂಗತರಾಗಿದ್ದಾರೆ ಎಂದು ಅಧಿಕೃತವಾಗಿ ಸಾಯಿ ಟ್ರಸ್ಟ್ ಪ್ರಕಟಿಸುವ ಮುನ್ನವೇ ಏ.4ರಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜೇಂದ್ರನಾಥ್ ರೆಡ್ಡಿ ಎಂಬುವವರಿಂದ ಶವಪೆಟ್ಟಿಗೆ ಪುಟ್ಟಪರ್ತಿಗೆ ರವಾನೆಯಾಗಿದೆ. ಬಾಬಾ ಸಾಯುವ ಮೊದಲೇ ಸುಮಾರು 1 ಲಕ್ಷದಷ್ಟು ಹಣ ತೆತ್ತು ಶವಪೆಟ್ಟಿಗೆಯನ್ನು ಸಾಯಿ ಟ್ರಸ್ಟ್ ಆರ್ಡರ್ ಮಾಡಿದ್ದೇಕೆ ಎಂಬ ಸಂಶಯ ಎಲ್ಲರನ್ನು ಕಾಡುತ್ತಿದೆ.
ಬಾಬಾ ಇಹಲೋಕ ತ್ಯಜಿಸುವ ಮೊದಲೇ ಅವರ ಪ್ರಾಣಪಕ್ಷಿ ಹಾರಿಹೋಗಿದೆ, ಅದನ್ನು ಟ್ರಸ್ಟ್ ಮುಚ್ಚಿಟ್ಟಿದೆ ಎಂಬ ನಾನಾ ಊಹಾಪೋಹಗಳು ಗರಿಗೆದರಿದ್ದವು. ಈ ಗಾಳಿಸುದ್ದಿಯನ್ನು ಟ್ರಸ್ಟ್ ನ ಸದಸ್ಯರು ಮತ್ತು ಬಾಬಾ ಅವರನ್ನು ನೋಡಿಕೊಳ್ಳುತ್ತಿದ್ದ ವೈದ್ಯರು ತಳ್ಳಿಹಾಕುತ್ತಲೇ ಬಂದಿದ್ದರು. ಬಾಬಾ ಅವರು ತಮ್ಮ ಸಂಧ್ಯಾಕಾಲದಲ್ಲಿ ಪವಾಡ ಮತ್ತು ವಿವಾದಗಳಿಂದ ದೂರವಿದ್ದರೂ, ಅವರು ಸತ್ತ ನಂತರವೂ ಪವಾಡ ಮತ್ತು ವಿವಾದಗಳು ಅವರನ್ನು ಬೆನ್ನತ್ತಿಕೊಂಡು ಬರುತ್ತಿವೆ. ಇನ್ನೂ ಏನೇನು ಕಾದಿದೆಯೊ?