ಸಾಯಿಬಾಬಾ ಸಾವು, ನಾನಾ ವ್ಯಾಖ್ಯಾನಗಳಿಗೆ ಹುಟ್ಟು
ಮೊದಲನೆಯದಾಗಿ, ಇಂದು ಕ್ರೈಸ್ತ ಬಾಂಧವರು ಆಚರಿಸುವ ಈಸ್ಟರ್ ಹಬ್ಬ. ಯೇಸು ಕ್ರಿಸ್ತನನ್ನು ಶಿಲುಬೆಗೇರಿಸಿದ ಮೂರು ದಿನಗಳ ನಂತರ ಮತ್ತೆ ಕಾಣಿಸಿಕೊಂಡ ದಿನ. ಅಂದರೆ, ಪುನರುತ್ಥಾನವಾದ ದಿನ. ಸಾಯಿಬಾಬಾ ಕೂಡ ಮತ್ತೆ ಅವತರಿಸುವುದಾಗಿ ಹೇಳಿದ್ದಾರೆ. ಭವಿಷ್ಯದಲ್ಲಿ ಮಂಡ್ಯದ ಸಾಯಿ ಭಕ್ತರ ಮನೆಯೊಂದರಲ್ಲಿ ಪ್ರೇಮ ಸಾಯಿಯಾಗಿ ಮರುಹುಟ್ಟು ಪಡೆಯುವುದಾಗಿ ಹೇಳಿದ್ದರು. ಬಾಬಾ ಮರುಜನ್ಮ ಪಡೆದೇ ಪಡೆಯುತ್ತಾರೆ ಎಂದು ಭಕ್ತರು ಅಪಾರವಾಗಿ ನಂಬಿದ್ದಾರೆ. ಸಾಯಿಬಾಬಾ ಮರುಜನ್ಮ ಪಡೆಯುವರೆ ಕಾಲವೇ ನಿರ್ಧರಿಸಲಿದೆ.
ಎರಡನೆಯದಾಗಿ, ದಕ್ಷಿಣ ಭಾರತ ದೊಡ್ಡ ಧಾರ್ಮಿಕ ಗುರುವೊಬ್ಬರು ಸದ್ಯದಲ್ಲಿಯೇ ಅಸ್ತಂಗತರಾಗಲಿದ್ದಾರೆ ಎಂದು ತಾಳೆಗರಿಗಳ ಮೂಲಕ ಭವಿಷ್ಯ ನುಡಿಯುವಲ್ಲಿ ಸಿದ್ಧಹಸ್ತರಾಗಿರುವ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ರಾಯಚೂರಿನಲ್ಲಿ ಇತ್ತೀಚೆಗೆ ಹೇಳಿದ್ದರು. ಅವರ ಭವಿಷ್ಯದಲ್ಲಿದ್ದ ವ್ಯಕ್ತಿ ಸಾಯಿಬಾಬಾ ಅವರಾ? ಹಾಸನ ಜಿಲ್ಲೆಯ ಹಾರೋಹಳ್ಳಿಯ ಕೋಡಿಮಠದ ಸ್ವಾಮೀಜಿಗಳೇ ಸ್ಪಷ್ಟೀಕರಣ ನೀಡಬೇಕು.
ಮೂರನೆಯದಾಗಿ, ಕೋಟಿ ಕೋಟಿ ಬಡವರ ಬಂಧುವಾಗಿ, ಶಿಕ್ಷಣ ಸಂಸ್ಥೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ, ಹಳ್ಳಿಹಳ್ಳಿಗಳಿಗೆ ನೀರು ಹರಿಯುವಂತೆ ಮಾಡಿ ಅಸಾಧಾರಣ ಸೇವೆ ಮಾಡಿ, ಪಡಾಡಗಳಿಂದಾಗಿಯೂ ಸಾಕಷ್ಟು ಹೆಸರು ಮಾಡಿದ್ದ ಬಾಬಾ ಖಂಡಿತವಾಗಿ ಚೇತರಿಸಿಕೊಳ್ಳುತ್ತಾರೆ ಎಂದು ನಂಬಿದ್ದ ಭಕ್ತರಿಗೆ ದ್ರೋಹವಾಗಿರುವುದು. ಪವಾಡದ ನಿರೀಕ್ಷೆಯಲ್ಲಿದ್ದ ಜನರಿಗೆ ಬಾಬಾ ಸಾವನ್ನು ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ. ಪುಟ್ಟಪರ್ತಿಯಲ್ಲಿ ಶೋಕದ ಸುನಾಮಿಯೇ ಅಪ್ಪಳಿಸಿದೆ. 'ವಿಧಿ' ಎನ್ನುವುದು ಎಲ್ಲವನ್ನೂ ಮೀರಿದ್ದೆ? ಈ ಕುರಿತು ಶ್ರೀಮಾನ್ಯರು ಮತ್ತು ಬುದ್ಧಿಜೀವಿಗಳು ಏನು ಹೇಳುತ್ತಾರೆ? [ಗ್ಯಾಲರಿ ನೋಡಿರಿ]
ಕರ್ನಾಟಕದಲ್ಲಿ ರಜಾ ಇಲ್ಲ : ಭಗವಾನ್ ಸತ್ಯ ಸಾಯಿಬಾಬಾ ಅವರ ನಿಧನದ ಪ್ರಯುಕ್ತ ಕರ್ನಾಟಕದಲ್ಲಿಯೂ ಎರಡು ದಿನ ಶೋಕಾಚರಣೆ ಮಾಡಲಾಗುತ್ತಿದ್ದು, ಶಿಕ್ಷಣ ಸಂಸ್ಥೆಗಳಿಗೆ ಮತ್ತು ಸರಕಾರಿ ಕಚೇರಿಗಳಿಗೆ ರಜಾ ಇರುವುದಿಲ್ಲ ಎಂದು ಯಡಿಯೂರಪ್ಪ ಸರಕಾರ ಸ್ಪಷ್ಟಪಡಿಸಿದೆ. ಕರ್ನಾಟಕದಲ್ಲಿಯೂ ಸಾಯಿಬಾಬಾ ಅವರ ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿದ್ದಾರೆ. ಬಾಬಾ ಅವರ ಗೌರವಾರ್ಥವಾಗಿ ರಜಾ ನೀಡಲಾಗುವುದೆ ಎಂಬ ಪ್ರಶ್ನೆ ಉದ್ಭವವಾಗಿತ್ತು.