ತಂದೆ ಕಾಮತೃಷೆಗೆ ಬಲಿಯಾದ ನತದೃಷ್ಟ ಮಗಳು
ಎರಡು ಕಾಲು ಸ್ವಾಧೀನ ಕಳೆದುಕೊಂಡು ತೆವಳುತ್ತಾ ಪೊಲೀಸ್ ಠಾಣೆಗೆ ಬಂದ ಆ ಹೆಣ್ಣು ಮಗು ಕಣ್ಣೀರು ಸುರಿಸುತ್ತಾ ತಂದೆ ತನ್ನ ಮೇಲೆ ನಡೆಸುತ್ತಿದ್ದ ಅತ್ಯಾಚಾರದ ಕಥೆಯನ್ನು ಎಳೆಎಳೆಯಾಗಿ ಹೇಳುತ್ತಿದ್ದರೆ ಅದನ್ನು ಕೇಳಿದ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಸತೀಶ್ಕುಮಾರ್ ಒಂದು ಕ್ಷಣ ದಂಗಾಗಿ ಹೋಗಿದ್ದರು. ಏಕೆಂದರೆ ಅದು ಎಲ್ಲರನ್ನೂ ಬೆಚ್ಚಿಬೀಳಿಸುವಂತಹ ಹೃದಯ ವಿದ್ರಾವಕ ಕಥೆಯಾಗಿತ್ತು.
ಅವಳು ನತದೃಷ್ಟ ಹೆಣ್ಣುಮಗಳು: ಜನ್ಮನೀಡಿದ ತಂದೆಯ ಕಾಮತೃಷೆಗೆ ಬಲಿಯಾಗಿ ಇವತ್ತು ಕಣ್ಣೀರಿಡುತ್ತಾ ದಿನ ನೂಕುತ್ತಿರುವ ಹದಿನಾರು ವರ್ಷದ ನತದೃಷ್ಟ ಹೆಣ್ಣುಮಗಳೇ ದಿವ್ಯಾ. ಮಡಿಕೇರಿಗೆ ಸುಮಾರು 4ಕಿ.ಮೀ. ದೂರದಲ್ಲಿರುವ ಕರ್ಣಂಗೇರಿ ಗ್ರಾಮದ ಮೂರನೇ ಮೈಲ್ ಬಳಿಯ ನಿವಾಸಿ ಕಾಮುಕ ಗುರುವ ಎಂಬಾತನ ಮಗಳು. ಹದಿನೇಳು ವರ್ಷದ ಹಿಂದೆ ಗುರುವ ನಿರ್ಮಲ ಅಲಿಯಾಸ್ ಬೇಬಿ ಎಂಬಾಕೆಯನ್ನು ಮದುವೆಯಾಗಿದ್ದು, ಈಕೆಗೆ ಎರಡು ಮಕ್ಕಳು ಹುಟ್ಟಿದ್ದವು. ಒಂದು ಗಂಡು ಒಂದು ಹೆಣ್ಣು ಆ ಹೆಣ್ಣು ಮಗುವೇ ದಿವ್ಯಾ. ಈಕೆ ಹುಟ್ಟುವಾಗಲೇ ಅಂಗವಿಕಲೆ. ಅಷ್ಟೇ ಅಲ್ಲ ಅಮ್ಮನ ಲಾಲನೆ ಪಾಲನೆಯಲ್ಲಿ ಬೆಳೆಯಬೇಕಾದ ಈಕೆ ಹುಟ್ಟಿದ ಕೆಲವೇ ವರ್ಷಗಳಲ್ಲಿ ಹೆತ್ತಾಕೆಯೂ ಕಣ್ಮುಚ್ಚಿದ್ದಳು.
ಹೆಂಡತಿಯನ್ನು ಕಳೆದುಕೊಂಡ ಗುರುವ ಕೆಲವೇ ಸಮಯದಲ್ಲಿ ಗಾಯತ್ರಿ ಎಂಬಾಕೆಯನ್ನು ಮದುವೆಯಾಗಿದ್ದನು. ಗಾಯತ್ರಿಗೆ ಮೇಲಿಂದ ಮೇಲೆ ಮೂರು ಮಕ್ಕಳಾಗಿದ್ದವು. ಆ ಮಕ್ಕಳ ಜೊತೆಯಲ್ಲಿಯೇ ದಿವ್ಯಾ ಕೂಡ ಗಾಯತ್ರಿಯನ್ನು ಅಮ್ಮ ಎಂದು ಕರೆಯುತ್ತಲೇ ಬೆಳೆದಿದ್ದಳು.
ದಿನಕಳೆಯುತ್ತಿದ್ದಂತೆಯೇ ದಿವ್ಯಾ ಕೂಡ ಪ್ರೌಢಾವಸ್ಥೆಗೆ ಬಂದಿದ್ದಳು. ತೆವಳಿಕೊಂಡೇ ಮನೆಯ ಕೆಲಸ ಮಾಡುತ್ತಿದ್ದ ಈಕೆ ಎಲ್ಲರಂತೆ ಕೈಕಾಲು ಸ್ವಾಧೀನದಲ್ಲಿದ್ದಿದ್ದರೆ ನಾನು ಕೂಡ ಕೆಲಸ ಮಾಡಿ ಚಿಕ್ಕಮ್ಮನಿಗೆ ಸಹಾಯ ಮಾಡಬಹುದಿತ್ತು ಎಂದು ಯೋಚಿಸುತ್ತಿದ್ದಳು. ಅದಕ್ಕೂ ಕಾರಣವಿತ್ತು ಜನ್ಮ ನೀಡಿದ ಅಪ್ಪ ಗುರುವ ಮಾಡಿದ ಸಂಪಾದನೆಯಲ್ಲಿ ಹೆಚ್ಚಿನ ಭಾಗವನ್ನು ಕುಡಿತಕ್ಕೆ ಹಾಕುತ್ತಿದ್ದನು. ಗಾಯತ್ರಿ ಮಾಡಿದ ಸಂಪಾದನೆಯಲ್ಲಿ ಸಂಸಾರ ನಡೆಯುತ್ತಿತ್ತು.
ಕುಡುಕ ಗುರುವ ಬೇರೇ ಏನೇ ಮಾಡಿದ್ದರೂ ಅದನ್ನು ಸಹಿಸಿಕೊಳ್ಳಬಹುದಿತ್ತು. ಆದರೆ ಗುರುವ ತಾನು ಕುಡುಕ ಮಾತ್ರವಲ್ಲ ಹೆಂಡ ಕುಡಿದರೆ ಹೆಂಡತಿ ಹಾಗೂ ಮಗಳಿಗೆ ಸಂಬಂಧವೇ ಗೊತ್ತಾಗದಷ್ಟು ಕಾಮುಕ ಎಂಬವುದನ್ನು ಕೂಡ ನಿರೂಪಿಸಿ ಬಿಟ್ಟಿದ್ದನು.
ಮೂರು ತಿಂಗಳ ಹಿಂದಿನ ಕಥೆ: ಅಂದು ದಿವ್ಯಾಳ ಪಾಲಿಗೆ ಕರಾಳ ದಿನ. ಚಿಕ್ಕಮ್ಮ ಕೆಲಸಕ್ಕೆ ಹೋಗಿದ್ದಳು. ತಮ್ಮಂದಿರು ಶಾಲೆಯಿಂದ ಬಂದಿರಲಿಲ್ಲ. ಹೀಗಾಗಿ ದಿವ್ಯಾ ಒಬ್ಬಳೇ ಮನೆಯಲ್ಲಿದ್ದಳು. ದಿನಾಲೂ ಸಂಜೆ ಮನೆಗೆ ಬರುತ್ತಿದ್ದ ಗುರುವ ಬೇಗನೇ ಮನೆಗೆ ಬಂದಿದ್ದನು. ಬರುವಾಗಲೇ ಕುಡಿದು ತೂರಾಡುತ್ತಾ ಬಂದಿದ್ದ ಆತನಿಗೆ ದಿವ್ಯಾ ಊಟ ಬಡಿಸಿಕೊಟ್ಟಿದ್ದಳು. ಊಟ ಮಾಡಿದ ಆತನಿಗೆ ಅದೇನಾಯಿತೋ ನೇರವಾಗಿ ದಿವ್ಯಾ ಕುಳಿತಲ್ಲಿಗೆ ಬಂದು ಆಕೆಯನ್ನು ಬಿಗಿಯಾಗಿ ಅಪ್ಪಿಕೊಂಡಿದ್ದನು.
ಅಪ್ಪ ನೀನು ಏನು ಮಾಡ್ತಾ ಇದ್ದಿಯಾ? ನನ್ನ ಬಿಡು ಎಂದು ಕೂಗಿಕೊಳ್ಳುತ್ತಾ ಅವನಿಂದ ತಪ್ಪಿಸಿಕೊಂಡು ತೆವಳುತ್ತಾ ಹೊರಗೆ ಹೋಗುವ ಪ್ರಯತ್ನ ಮಾಡಿದ್ದಳು. ಆದರೆ ಕಾಮುಕ ಗುರುವನಿಗೆ ಆಕೆ ನನ್ನ ಮಗಳು ಅವಳ ಜೀವನವನ್ನು ನಾನು ಹಾಳು ಮಾಡುತ್ತಿದ್ದೇನೆ ಎಂಬ ಪರಿವೆ ಇರಲಿಲ್ಲ. ಕಾಮದ ಮತ್ತಿನಲ್ಲಿ ತೇಲಾಡುತ್ತಿದ್ದ ಆತ ತೆವಳಿಕೊಂಡು ಓಡುತ್ತಿದ್ದ ಆಕೆಯನ್ನು ಎಳೆದು ಮನೆಯೊಳಗೆ ತಂದವನೇ ಆಕೆಯ ಬಟ್ಟೆಯನ್ನೆಲ್ಲಾ ಕಳಚಿ ಎಸೆದು ಅತ್ಯಾಚಾರ ಎಸಗಿದ್ದನು. ಹುಟ್ಟಿಸಿದ ತಂದೆಯಿಂದಲೇ ಶೀಲ ಕಳೆದುಕೊಂಡ ಆಕೆ ಕಣ್ಣೀರಿಡುತ್ತಿದ್ದರೆ, ಕಾಮತೃಷೆ ತೀರಿಸಿಕೊಂಡ ಕಾಮುಕ ಗುರುವ ಮನೆಯ ಮೂಲೆಯಲ್ಲಿದ್ದ ಮಚ್ಚು ತೋರಿಸಿ ಈಗ ನಡೆದಿರುವುದನ್ನು ಚಿಕ್ಕಮ್ಮನಿಗಾಗಲಿ, ಬೇರೆ ಯಾರಿಗಾದರು ಹೇಳಿದರೆ ಮಚ್ಚಿನಿಂದ ಕತ್ತರಿಸಿ ಸಾಯಿಸುವುದಾಗಿ ಬೆದರಿಕೆ ಹಾಕಿದ್ದನು.
ಹೀಗೆ ಮೂರು ತಿಂಗಳು ಕಳೆದು ಹೋಗಿತ್ತು. ಈ ನಡುವೆ ದಿವ್ಯಾಳ ಹೊಟ್ಟೆಯೂ ಹಿಗ್ಗತೊಡಗಿತ್ತು. ರಾತ್ರಿಯೆಲ್ಲಾ ಅಸಾಧ್ಯ ಹೊಟ್ಟೆ ನೋವು ಅವಳನ್ನು ಕಾಡತೊಡಗಿತ್ತು. ಏನಾಯ್ತು? ಏನು ತಿಂದಿದ್ದೀಯ? ಅಂತ ಚಿಕ್ಕಮ್ಮ ಗಾಯತ್ರಿ ಕೇಳಿದಾಗ ದಿವ್ಯಾ ಬೇರೆ ದಾರಿ ಕಾಣದೆ ತಂದೆ ತನ್ನ ಮೇಲೆ ನಡೆಸಿದ ಅತ್ಯಾಚಾರದ ವಿಷಯವನ್ನು ಹೇಳಿದ್ದಾಳೆ. ಇದನ್ನು ಕೇಳಿದ ಗಾಯತ್ರಿಗೆ ಶಾಕ್ ಆಗಿತ್ತು. ಆದರೆ ಆಕೆ ದಿವ್ಯಾಳ ಮಾತನ್ನು ಕೇಳಲು ತಯಾರಿರಲಿಲ್ಲ. ನೀನು ಹುಟ್ಟಿಸಿದ ಅಪ್ಪನಿಗೆ ಅಪವಾದ ತರ್ತೀಯಾ ಎಂದು ತದಕಿದ್ದಳು. ಆದರೆ ದಿವ್ಯಾ ಇಲ್ಲಮ್ಮ ನಾನು ನಿಮ್ಮಾಣೆಗೂ ಸುಳ್ಳು ಹೇಳ್ತ ಇಲ್ಲ. ಅಪ್ಪ ಈ ವಿಷಯ ಹೇಳಿದರೆ ನಿನ್ನನ್ನು ಕೊಲ್ಲುವುದಾಗಿ ಬೆದರಿಸಿದ್ದರು ಅದಕ್ಕೆ ಹೆದರಿ ಹೇಳಿಲ್ಲ ಎಂದು ಕಣ್ಣೀರಿಡುತ್ತಾ ಹೇಳಿದಾಗ ಚಿಕ್ಕಮ್ಮ ಗಾಯತ್ರಿ ಒಂದು ಕ್ಷಣ ಬೆಚ್ಚಿಬಿದ್ದಿದ್ದಳು.
ನಾನು ಮಾಡಿದ ವಿಷಯ ಮಗಳು ಹೇಳಿದ್ದಾಳೆ ಎಂದು ಗೊತ್ತಾದರೆ ಗಂಡ ಗುರುವ ನನ್ನನ್ನಾಗಲೀ, ಮಗಳು ದಿವ್ಯಾಳನ್ನಾಗಲೀ ಬದುಕಲು ಬಿಡುವುದಿಲ್ಲ ಎಂದು ತಿಳಿದ ಗಾಯತ್ರಿ ಗಂಡನಿಗೆ ಮಗಳನ್ನು ಶಾಲೆಗೆ ಕರೆದುಕೊಂಡು ಬರಲು ಹೇಳಿದ್ದಾರೆ ಎಂದು ಸುಳ್ಳು ಹೇಳಿ ದಿವ್ಯಾಳೊಂದಿಗೆ ನೇರವಾಗಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ಬಂದಿದ್ದಾಳೆ. ಅಲ್ಲಿ ಇನ್ಸ್ಪೆಕ್ಟರ್ ಸತೀಶ್ಕುಮಾರ್ ಅವರೊಂದಿಗೆ ನಡೆದ ವಿಚಾರ ಹೇಳಿದ್ದಾಳೆ. ತಕ್ಷಣ ಆಕೆಯನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ಪರೀಕ್ಷೆ ಮಾಡಿದಾಗ ನಿಜ ವಿಷಯ ಬಯಲಾಗಿದೆ. ಸದ್ಯಕ್ಕೀಗ ಕಾಮುಕ ಗುರುವ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ.