ಮಳೆ ಹಾವಳಿ : ನಾಯಂಡಹಳ್ಳಿ ಕೆರೆಯಲ್ಲಿ ಮುಳುಗಿದ ಬಾಲಕ
ಕೆರೆಯ ದಡದಲ್ಲಿ ಇಂದು ಬೆಳಿಗ್ಗೆ ಮಣಿಕಂಠ ಆಟವಾಡುತ್ತಿದ್ದಾಗ ಕೆರೆಯಲ್ಲಿ ತೇಲಿಬಂದ ಚೆಂಡನ್ನು ತೆಗೆದುಕೊಳ್ಳಲು ಹೋಗಿ ಕಾಲುಜಾರಿ ನೀರಿನಲ್ಲಿ ಬಿದ್ದಿದ್ದಾನೆ. ಕಲ್ಲಿನ ಮೇಲೆ ಕುಳಿತು ಚೆಂಡಿಗಾಗಿ ಕೈಚಾಚಿದಾಗ ಆಯತಪ್ಪಿ ನೀರಿಗೆ ಜಾರಿದ್ದಾನೆ. ಹತ್ತಿರದಲ್ಲಿಯೇ ಇದ್ದ ಶ್ರೀನಿವಾಸ ಎಂಬ ಗೆಳೆಯ ಮಣಿಕಂಠ ನೀರಿನಿಂದ ಎದ್ದು ಬರುತ್ತಾನೆಂದು ಕೆಲ ಹೊತ್ತು ಕಾದಿದ್ದಾನೆ. ಆದರೆ ಆತ ಬರದಿದ್ದಾಗ ಗಾಬರಿಯಾಗಿ ಮಣಿಕಂಠನ ಮನೆಯವರಿಗೆ ತಿಳಿಸಿದ್ದಾನೆ.
ಕೂಡಲೆ ಅಗ್ನಿಶಾಮಕ ದಳದವರು ಮತ್ತು ಈಜುಪಟುಗಳು ಸ್ಥಳಕ್ಕೆ ಧಾವಿಸಿದ್ದು ಬಾಲಕನ ಹುಡುಕಾಟದಲ್ಲಿ ತೊಡಗಿದ್ದಾರೆ. ನೀರಿನಲ್ಲಿ ಬಾಲಕ ಕೊಚ್ಚಿ ಹೋಗಿರಬಹುದೆಂದು ಶಂಕಿಸಲಾಗಿದೆ. ಕೆರೆಯಲ್ಲಿರುವ ಮಣ್ಣು ಮತ್ತು ತ್ಯಾಜ್ಯವಸ್ತುಗಳ ಹೂಳಿನಲ್ಲಿ ಸಿಲುಕಿಕೊಂಡು ಬಾಲಕ ಮೃತನಾಗಿರಬಹುದೆಂದು ಅಗ್ನಿಶಾಮಕ ದಳದವರು ಶಂಕಿಸಿದ್ದಾರೆ.
ನಾಯಂಡಹಳ್ಳಿ ಕೆರೆ ಕೊಚ್ಚೆಯಿಂದ ತುಂಬಿಕೊಂಡಿದೆ. ಸುತ್ತಲಿನ ವಾಸಿಗಳೆಲ್ಲ ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯ ವಸ್ತುಗಳನ್ನೆಲ್ಲ ಕೆರೆಯಲ್ಲಿಯೇ ಹಾಕುತ್ತಾರೆ. ಕೆರೆ ಮಾತ್ರವಲ್ಲ ಆ ಪ್ರದೇಶದಲ್ಲಿರುವ ಚರಂಡಿಗಳು ಕೂಡ ಕೊಚ್ಚೆಯಿಂದ ತುಂಬಿಕೊಂಡಿದ್ದರಿಂದ ಮಳೆನೀರು ಮನೆ, ದೇವಸ್ಥಾನಗಳಿಗೆಲ್ಲ ನುಗ್ಗುತ್ತಿದೆ. ಗಾಳಿ ಆಂಜನೇಯ ಕೂಡ ಇದಕ್ಕೆ ಸಾಕ್ಷಿಯಾಗಿದ್ದಾನೆ.
ಮಹಾನಗರ ಪಾಲಿಕೆಯವರು ಕೂಡಲೆ ಕೆರೆಯನ್ನು ಸ್ವಚ್ಛಗೊಳಿಸದಿದ್ದರೆ ಅಥವಾ ನೆರೆಹೊರೆಯವರು ಕೆರೆಗೆ ತ್ಯಾಜ್ಯಗಳನ್ನೆಲ್ಲ ಹಾಕುವುದನ್ನು ನಿಲ್ಲಿಸದಿದ್ದರೆ ಇನ್ನಷ್ಟು ಅವಘಡಗಳು ಸಂಭವಿಸುವುದರಲ್ಲಿ ಸಂಶಯವಿಲ್ಲ. ಇಂಥ ಘಟನೆ ಸಂಭವಿಸಿದಾಗ ಆಪತ್ತು ನಿರ್ವಹಣೆಯ ಬಗ್ಗೆ ಕೂಡ ಜನರಿಗೆ ತಿಳಿವಳಿಕೆಯಿಲ್ಲ. ತಮ್ಮ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಜನತೆಗೆ ತಿಳಿ ಹೇಳುವ ಬಗೆಯಾದರೂ ಹೇಗೆ?
ಹುನಗುಂದದಲ್ಲಿ ಇಬ್ಬರು ಮುಂಡರಗಿಯಲ್ಲೊಬ್ಬ : ಗೋವಾಕ್ಕೆ ಬೇಸಿಗೆ ಪ್ರವಾಸಕ್ಕೆಂದು ಹೊರಟಿದ್ದ ಯುವಕರ ತಂಡದಲ್ಲಿನ ಇಬ್ಬರು ಹುಬ್ಬಳ್ಳಿಯಿಂದ 150 ಕಿ.ಮೀ. ದೂರದಲ್ಲಿರುವ ಹುನಗುಂದದಲ್ಲಿ ಮಲಪ್ರಭಾ ನದಿಯಲ್ಲಿ ಈಜಲು ಹೋಗಿ ಮುಳುಗಿ ಸತ್ತಿದ್ದಾರೆ. ಮೃತರನ್ನು ಆಂಧ್ರ ಪ್ರದೇಶದ ಡಿಇ ಅರವಿಂದ್ ಮತ್ತು ಶ್ರೀಕಾಂತ್ ಯಾದವ್ ಎಂದು ಗುರುತಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ, ಗದಗ ಜಿಲ್ಲೆಯ ಮುಂಡರಗಿಯಲ್ಲಿ ಬಾವಿಯಲ್ಲಿ ಈಜಲು ಹೋಗಿದ್ದ ಬಸವರಾಜ ಹನದಿ ಎಂಬಾತ ಮುಳುಗಿ ಸಾವನ್ನಪ್ಪಿದ್ದಾನೆ.