ನಂಬಿ, ಸಾಯಿಬಾಬಾ ಇನ್ನೂ 10 ವರ್ಷ ಬದುಕಿರ್ತಾರೆ!
ಭಗವಾನ್ ಸಾಯಿಬಾಬಾ 'ಎಲ್ಲವೂ ಮಗಿಯಿತು' ಎಂದು ಸಾವಿನತ್ತ ಮುಖ ಮಾಡಿರುವುದನ್ನು ಜೀರ್ಣಿಸಿಕೊಳ್ಳಲು ಅವರ ಭಕ್ತವೃಂದಕ್ಕೆ ಸಾಧ್ಯವಾಗುತ್ತಿಲ್ಲ. ಸಾಯಿಬಾಬಾ ಅವರೇ ಹಿಂದೊಮ್ಮೆ ಹೇಳಿದಂತೆ 96ನೇ ವಯಸ್ಸಿನವರೆಗೂ ಅಂದರೆ ಇನ್ನೂ 10 ವರ್ಷ ಬದುಕಿರ್ತಾರೆ ಎಂದು ಅಚಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾಜಿ ನ್ಯಾಯಮೂರ್ತಿಗಳು, ಹಿರಿಯ ಪೊಲೀಸ್ ಆಧಿಕಾರಿಗಳು, ವೈದ್ಯ ಲೋಕದ ತಜ್ಞರು ಸೇರಿದಂತೆ ಬಾಬಾರ ಹಲವು ಕಟ್ಟರ್ ಅನುಯಾಯಿಗಳು ಹೇಳುವಂತೆ ಕಷ್ಟಗಳನ್ನು ಸ್ವಯಂ ಅನುಭವಿಸಲು ದೀಕ್ಷೆ ತೊಟ್ಟವರಂತೆ ಪ್ರಸ್ತುತ ಅನಾರೋಗ್ಯ ಪೀಡಿತರಾಗಿದ್ದಾರಂತೆ. ಅವರು ಖಂಡಿತ ಚೇತರಿಸಿಕೊಳ್ಳುತ್ತಾರೆ. ನಮ್ಮ ನಂಬಿಕೆ, ಭಾವನೆಗಳನ್ನು ಗೌರವಿಸಿ ಎಂದು ಭಕ್ತರು ಮಾಧ್ಯಮಗಳ ಮೂಲಕ ಅಲವತ್ತುಕೊಂಡಿದ್ದಾರೆ.
ನಾರಾಯಣ ಹೃದಯಾಲಯದ ಮಾಜಿ ಉಪಾಧ್ಯಕ್ಷ, ಖ್ಯಾತ ಹೃದ್ರೋಗತಜ್ಞ ಅನಿಲ್ ಕುಮಾರ್ ಹೇಳುವಂತೆ ಗುರು ಬಾಬಾ ಅವರ ನಾಲ್ಕು ಪ್ರಧಾನ ಅಂಗಗಳು ಮಾತ್ರವೇ ನಿಷ್ಕ್ರಿಯವಾಗಿವೆ. ಆದರೆ ಇಂತಹ ರೋಗಿಗಳು 25 ವರ್ಷಕ್ಕೂ ಅಧಿಕ ಕಾಲ ಬದುಕಿರುವ ನೂರಾರು ಉದಾಹರಣೆಗಳು ವೈದ್ಯಲೋಕದಲ್ಲಿವೆ. ಸೋ, ಬಾಬಾ ಬಗ್ಗೆ ಗಾಬರಿಪಡುವಂಥದ್ದೇನಿಲ್ಲ. ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರ ಪ್ರಕಾರ ಬಾಬಾ ಕೋಮಾ ಸ್ಥಿತಿಯಲ್ಲಿಲ್ಲ. ಅವರಿಗೆ ಅಂಗ ದಾನ ಮಾಡಲು ಸಾವಿರಾರು ಭಕ್ತರು ಸರದಿಯಲ್ಲಿ ನಿಂತಿದ್ದಾರೆ. ಆದರೆ ಅಂಗ ಕಸಿ ಸಾಧ್ಯವಿಲ್ಲ ಎಂದು ವೈದ್ಯರು ಸುಮ್ಮನಾಗಿದ್ದಾರಂತೆ.
'ಅವರು ದೇವರ ಅವತಾರ ಸ್ವರೂಪಿ. ಅವರು 96 ವರ್ಷ ಬದುಕಿರ್ತಾರೆ. ಏನೂ ಯೋಚನೆ ಮಾಡ್ಬೇಡಿ' ಎಂದು ಆಂಧ್ರ ಪ್ರದೇಶದ ಮಾಜಿ ಪೊಲೀಸ್ ವರಿಷ್ಠ ಆರ್. ಪ್ರಭಾಕರ್ ರಾವ್, ಆಂಧ್ರ ಕೃಷಿ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಎಂ.ವಿ. ರಾವ್, ಹೈದರಾಬಾದಿನ ಮಾಜಿ ಪೊಲೀಸ್ ಆಯುಕ್ತ ಅಪ್ಪಾ ರಾವ್ ಮುಂತಾದವರು ಭರವಸೆ ತುಂಬಿದ್ದಾರೆ. '20 ದಿನಗಳ ಹಿಂದೆಯೇ ಅವರು ಸಾವನ್ನಪ್ಪಿದ್ದಾರೆ. ಆದರೆ ಅವರ ಸಾವಿನ ಸುದ್ದಿಯನ್ನು ಇನ್ನೂ ನಿಗೂಢವಾಗಿಟ್ಟಿದ್ದಾರೆ ಎಂದೆಲ್ಲ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳು ಆಧಾರರಹಿತ. ಶೀಘ್ರವೇ ಬಾಬಾ ಅವರೇ ನಿಮಗೆ ದರ್ಶನ ನೀಡಲಿದ್ದಾರೆ' ಎಂದು ಗಣ್ಯರು ಆಶಿಸಿದ್ದಾರೆ.
'ನನಗೆ ಬಾಲ್ಯದಿಂದ ಬಂದಿದ್ದ ಪಾರ್ಶ್ವವಾಯುವನ್ನು ಆ ದೇವ ಮಾನವನೇ ವಾಸಿ ಮಾಡಿದ್ದು. ವೈದ್ಯಲೋಕ ನನ್ನ ಕಾಯಿಲೆಗೆ ಚಿಕಿತ್ಸೆ ನೀಡಲಾಗದು ಎಂದು ಕೈಚೆಲ್ಲಿದ್ದಾಗ ಬಾಬಾ ನನ್ನನ್ನು ಗುಣಪಡಿಸಿದರು. ಕೆಲವು ಸಂದರ್ಭಗಳಲ್ಲಿ ನನಗೆ ಜೀವಬೆದರಿಕೆಯಿದ್ದಾಗ ನಾನು ಅದರ ಬಗ್ಗೆ ತಲೆಕೆಡಿಕೊಳ್ಳಲಿಲ್ಲ. ಅವರೇ ನನ್ನನ್ನು ರಕ್ಷಿಸಿದರು' ಎಂದು ಆಂಧ್ರ ಹೈಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ಜೆ. ಈಶ್ವರ ಪ್ರಸಾದ್ ಭರವಸೆಯ ಮಾತುಗಳನ್ನಾಡಿದ್ದಾರೆ.