ಇನ್ಫಿಗೆ ಪೈ ರಾಜೀನಾಮೆ ರಹಸ್ಯ ಬಯಲು
ಸಂಪ್ರದಾಯ ಪ್ರಕಾರ ಹಿರಿಯ ಅನುಭವಿಗಳಿಗೆ ಆದ್ಯತೆ ನೀಡಲು ಐಟಿ ಸಂಸ್ಥೆಯಲ್ಲಿ ಸಾಧ್ಯವಿಲ್ಲ ಎಂಬುದು ಬೋರ್ಡ್ ನಲ್ಲಿದ್ದ ಹಲವರಿಗೆ ಮನವರಿಕೆ ಆಗಿಲ್ಲದಿರುವುದು ದುರದೃಷ್ಟದ ಸಂಗತಿ ಎಂದು ಎನ್ಡಿಟಿವಿಗೆ ಮಂಗಳವಾರ ನೀಡಿರುವ ಸಂದರ್ಶನದಲ್ಲಿ ಸಂಸ್ಥೆಯ ನಿರ್ದೇಶಕ ಮಂಡಳಿಯ ಧೋರಣೆಗಳ ವಿರುದ್ಧ ಕಟು ಟೀಕಾ ಪ್ರಹಾರ ಮಾಡಿದ್ದಾರೆ.
ಸಂಸ್ಥೆಯ ಸ್ಥಾಪಕರಾಗಿರುವ ಎನ್ ಆರ್ ನಾರಾಯಣಮೂರ್ತಿ ಮತ್ತವರ ತಂಡದ ಸದಸ್ಯರ ಸಂಪ್ರದಾಯಶೀಲತೆಯ ಕಾರಣ ಇನ್ಫೋಸಿಸ್ ಜಾಗತಿಕ ಸ್ಪರ್ಧೆಯಲ್ಲಿ ಹಿಂದೆ ಬೀಳಬೇಕಾಯಿತು. ತೀವ್ರ ಪೈಪೋಟಿಯಿಂದಾಗಿ ಕಳೆದ ಮೂರು ವರ್ಷಗಳಲ್ಲಿ ಹಲವು ರಂಗಗಳಲ್ಲಿ ಸಂಸ್ಥೆಯು ಹಿಂದೆ ಬೀಳಬೇಕಾಯಿತು ಎಂದು ಹೇಳಿದ್ದಾರೆ.
ಯವ ನೇತಾರರು ಬೇಕು:ಯಥಾಸ್ಥಿತಿ ಬದಲಿಗೆ ಹೊಸ ಆಲೋಚನೆ, ಬೆಳವಣಿಗೆಗಳು ನಡೆಯಲು ಮತ್ತು ಆಡಳಿತ ಮಂಡಳಿಗೆ ಹೊಸ ಬಿಸಿ ರಕ್ತ ತುಂಬಲು ಅವಕಾಶ ಮಾಡಿಕೊಡಬೇಕಾಗಿತ್ತು. ಯುವಕರು ಬಂಡಾಯಗಾರರಾಗಿರುತ್ತಾರೆ. ವ್ಯಕ್ತಿಗೆ ವಯಸ್ಸಾಗುತ್ತಿದ್ದಂತೆ ಸಂಪ್ರದಾಯಕ್ಕೆ ಮೊರೆ ಹೋಗುತ್ತಾನೆ. ಇದು ಮಾನವ ಸ್ವಭಾವ ಎಂದು ಪೈ ಅಭಿಪ್ರಾಯಪಟ್ಟಿದ್ದಾರೆ.
ಸಂಸ್ಥೆಯನ್ನು ಮುನ್ನಡೆಸಲು ಯುವ ಪೀಳಿಗೆಗೆ ಅವಕಾಶ ಕಲ್ಪಿಸಲು ತಾವು ತಮ್ಮ ಹುದ್ದೆ ತ್ಯಜಿಸುತ್ತಿರುವುದಾಗಿ ಪೈ ಕಳೆದ ಶುಕ್ರವಾರವಷ್ಟೇ ಹೇಳಿಕೊಂಡಿದ್ದರು. ಆದರೆ, ಹೊಸ ಸಿಇಒ ಆಗಿ ನೇಮಕಗೊಳ್ಳಲಿರುವ ಎಸ್ ಡಿ ಶಿಬುಲಾಲ್ ಅವರ ಕೈಕೆಳಗೆ ಕೆಲಸ ಮಾಡಲು ಇಚ್ಛೆ ಇರದ ಕಾರಣಕ್ಕೆ ಸಂಸ್ಥೆ ತೊರೆಯಲು ನಿರ್ಧರಿಸಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಕಾರ್ಪೊರೇಟ್ ಜಗತ್ತಿನಲ್ಲಿ ಹೊಸ ಸಿಇಒಗಳ ನೇಮಕ ಪ್ರಕ್ರಿಯೆಯಲ್ಲಿಯೇ ಪಾರದರ್ಶಕತೆ ಅಳವಡಿಸಿಕೊಳ್ಳಬೇಕಾದ ಅಗತ್ಯ ಇದೆ ಎಂದು ಪೈ ಪ್ರತಿಪಾದಿಸಿದ್ದಾರೆ.