ಬಾಬಾ ಅನಾರೋಗ್ಯ ಮತ್ತು ಹರಿದ ಸುಗಂಧ ದ್ರವ್ಯ
ಸಾಯಿಬಾಬಾ ಅವರನ್ನು ಭಕ್ತಾದಿಗಳಿಂದ ಅವರ ಸುತ್ತಲಿನವರೇ ದೂರವಿಡುತ್ತಿದ್ದಾರೆ ಮತ್ತು ಅವರ ಆರೋಗ್ಯದ ನಿಖರತೆಯ ಬಗ್ಗೆ ವೈದ್ಯರೂ ಸೇರಿದಂತೆ ಸರಕಾರವೂ ಭಕ್ತರನ್ನು ಕತ್ತಲಲ್ಲಿ ಇಡಲಾಗುತ್ತಿದೆ ಎಂದು ಸಾಯಿಬಾಬಾ ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದೇವಮಾನವರ ಆರೋಗ್ಯದ ಸ್ಥಿತಿಗತಿಯ ಬಗ್ಗೆ ನಿಖರ ಮಾಹಿತಿ ನೀಡದಿದ್ದರೆ ಅದಕ್ಕೆ ಸರಕಾರವೇ ಹೊಣೆಯಾಗುತ್ತದೆ ಎಂದು ಬೆಂಗಳೂರಿನಲ್ಲಿನ ವೈಟ್ ಫೀಲ್ಡ್ ನಲ್ಲಿರುವ ಆಶ್ರಮದ ಎದುರಿಗೆ ಭಕ್ತರು ಪ್ರತಿಭಟನೆ ನಡೆಸಿದರು.
ಸತ್ಯ ಸಾಯಿ ಇನ್ ಸ್ಟಿಟ್ಯೂಟ್ ಆಫ್ ಹೈಯರ್ ಮೆಡಿಕಲ್ ಸೈನ್ಸ್ ನ ವೈದ್ಯಾಧಿಕಾರಿಗಳು ನೀಡಿರುವ ಸುತ್ತೋಲೆಯ ಪ್ರಕಾರ, ಯಕೃತ್ತು ಸೇರಿದಂತೆ ಅವರ ಬಹುತೇಕ ಅಂಗಳು ಚಿಕಿತ್ಸೆಗೆ ಪ್ರತಿಕ್ರಿಯಿಸುತ್ತಿಲ್ಲದಿರುವುದು ಚಿಂತೆಗೆ ಕಾರಣವಾಗಿದೆ ಎಂದು ಹೇಳಿದೆ. ಕೃತಕ ಉಸಿರಾಟದ ಸಾಧನವನ್ನು ಅವರಿಗೆ ಅಳವಡಿಸಲಾಗಿದ್ದು, ರಕ್ತದೊತ್ತಡ ಕಾಯ್ದುಕೊಳ್ಳಲು ಅವರಿಗೆ ಸೂಕ್ತವಾದ ಔಷಧಿಗಳನ್ನು ನೀಡಲಾಗುತ್ತಿದೆ.
ಹಣ ದುರುಪಯೋಗದ ಆರೋಪದ ಬಗ್ಗೆ ಸತ್ಯಸಾಯಿ ಸೆಂಟ್ರಲ್ ಟಸ್ಟ್ ಪ್ರತಿಕ್ರಿಯಿಸಿದ್ದು, ಪ್ರತಿಯೊಂದು ಹಣಕಾಸು ವ್ಯವಹಾರಕ್ಕೆ ಬಾಬಾ ಅವರೇ ಜವಾಬ್ದಾರರಾಗಿರುವುದರಿಂದ ಹಣ ದುರುಪಯೋಗವಾಗಲು ಸಾಧ್ಯವೇ ಇಲ್ಲ. ಎಲ್ಲ ಚೆಕ್ ಗಳಿಗೂ ಅವರೇ ಸಹಿ ಹಾಕುವ ಅಧಿಕಾರ ಅವರಿಗೆ ಮಾತ್ರವಿದೆ ಎಂದು ಹೇಳಿದೆ.
ಸುಗಂಧ ಪ್ರವಾಡ : ವಯಸ್ಸಾದ ನಂತರ ಪವಾಡಗಳನ್ನು ಮಾಡುವುದನ್ನು ಬಾಬಾ ನಿಲ್ಲಿಸಿದ್ದರೂ ಅವರ ಪ್ರಭಾವ ಮತ್ತು ಅದ್ಭುತ ಶಕ್ತಿಯಿಂದಾಗಿ ಪವಾಡವೊಂದು ಸಂಭವಿಸಿದೆ ಎಂಬ ವದಂತಿ ಅವರ ಭಕ್ತರಲ್ಲಿ ವಿದ್ಯುತ್ ಸಂಚಾರ ಮಾಡಿದೆ. ಅದೇನೆಂದರೆ, ಪುಟ್ಟಪರ್ತಿ ಸಮೀಪವಿರುವ ಎನಮುಲಪಲ್ಲಿ ಎಂಬಲ್ಲಿ ಬಾಬಾ ಅವರ ಭಕ್ತರ ಮನೆಯೊಂದರಲ್ಲಿ ಬಾಬಾ ಅವರ ಮೂರ್ತಿಯ ಕಾಲ ಬೆರಳ ತುದಿಯಿಂದ ಲೀಟರುಗಟ್ಟಲೆ ಸುಗಂಧ ದ್ರವ್ಯ ಹರಿಯುತ್ತಿದೆ ಎಂಬ ಸುದ್ದಿ ಹಬ್ಬಿದೆ.
ಇದನ್ನು ಸಾಕ್ಷಾತ್ ನೋಡಲು ಸಮ್ಮೋಹನಕ್ಕೊಳಗಾದಂತಿರುವ ಭಕ್ತರು ನಾರಾಯಣಸ್ವಾಮಿ ಎಂಬ ಬಾಬಾ ಭಕ್ತರ ಮನೆಯತ್ತ ದೌಡಾಯಿಸುತ್ತಿದ್ದಾರೆ. ತಮ್ಮ ಅಂತ್ಯದ ನಂತರ ಪವಾಡವೊಂದು ಸಂಭವಿಸಲಿದೆ ಎಂದು 23 ದಿನಗಳಿಂದ ಜೀವನ್ಮರಣದ ಮಧ್ಯೆ ಹುಯ್ದಾಡುತ್ತಿರುವ ದೇವಮಾನವ ಸಾಯಿಬಾಬಾ ಅವರೇ ಹೇಳಿದ್ದಾರೆ ಎಂದು ಭಕ್ತರು ಮಾತನಾಡಿಕೊಳ್ಳುತ್ತಿದ್ದಾರೆ.