ಐಸಿಐಸಿಐ ಮ್ಯಾನೇಜರ್ ಸಾವಿಗೆ ವೀಕೆಂಡ್ ಗೆಳತಿ ಕಾರಣ
ಆಂಧ್ರ ಪ್ರದೇಶದ ಅನಂತಪುರ ಮೂಲದ ಶ್ರೀಧರ್, ಮದುವೆಯಾಗಿದ್ದರೂ ಎಚ್ಎಸ್ಆರ್ ಬಡಾವಣೆಯಲ್ಲಿ ಒಂಟಿಯಾಗಿ ಜೀವಿಸುತ್ತಿದ್ದರು. ಎರಡು ದಿನಗಳಿಂದ ಅವರ ಮನೆಗೆ ಬೀಗ ಹಾಕಲಾಗಿತ್ತು. ಮನೆ ಕೆಲಸದಾಳು ಬಂದು ಮನೆಗೆ ಬೀಗ ಹಾಕಿರುವುದನ್ನು ನೋಡಿಕೊಂಡು ವಾಪಸ್ ಹೋಗುತ್ತಿದ್ದಳು. ಆದರೆ ಶನಿವಾರ ಮನೆ ಬಾಗಿತು ತೆರೆದಿತ್ತು. ಕೆಟ್ಟ ವಾಸನೆ ಬರುತ್ತಿದ್ದರಿಂದ ಒಳಹೋಗಿ ನೋಡಿದಾಗ ಶ್ರೀಧರ್ ಮಲಗಿದ್ದಲ್ಲೇ ಸಾವನ್ನಪ್ಪಿರುವುದು ಕಂಡುಬಂದಿದೆ.
ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ಡೆತ್ ನೋಟ್ ಸಿಕ್ಕಿದೆ. ಅದರಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂದು ಬರೆಯಲಾಗಿದೆ. ಆದರಲ್ಲಿ ಸಹಿ ಹಾಕಿರುವ ಜಾಗ ಹರಿದು ಹೋಗಿದ್ದು, ಅದರೆ ಪಕ್ಕದಲ್ಲಿಯೇ ಶ್ರೀಧರ್ ಎಂದು ಬರೆಯಲಾಗಿದೆ. ಆದ್ದರಿಂದ ಇದು ಕೊಲೆಯಾಗಿರಬಹುದಾ ಎಂಬ ಅನುಮಾನ ವ್ಯಕ್ತವಾಗಿದೆ.
ಕುತೂಹಲಕಾರಿ ಶೋಧ: ಶ್ರೀಧರ್ ಮನೆಯಲ್ಲಿ ಸಿಕ್ಕ ಆತನ ಮಗನ ಜನನ ಪ್ರಮಾಣ ಪತ್ರದಲ್ಲಿ ಪತ್ನಿ ಅನಿತಾ ಎಂದೂ, ಪುತ್ರ ಸಾಗರ್ ಎಂದು ನಮೂದಿಸಲಾಗಿದೆ. ಆದರೆ ಮಗು ಜನಿಸಿದ ಸ್ಥಳ ಪಶ್ಚಿಮ ಬಂಗಾಳ ಎಂದು ನಮೂದಿಸಲಾಗಿದೆ. ಮಗು ಸಾಗರ್ ವಿಸ್ಡಂ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ದಾಖಲೆಯೂ ದೊರೆತಿದೆ. ಆದರೆ ಇವರಿಬ್ಬರೂ ಈಗೆಲ್ಲಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿಲ್ಲ. ಬಂಗಾಳದ ಯುವತಿಯನ್ನು ಪ್ರೀತಿಸಿ ಮದುವೆಯಾಗಿರಬಹುದು. ಆದರೆ ಕೌಟುಂಬಿಕ ಕಲಹ ತಲೆದೂರಿ ಪತ್ನಿ, ಪುತ್ರ ದೂರವಾಗಿರಬಹುದು ಎಂಬ ಶಂಖೆ ವ್ಯಕ್ತವಾಗಿದೆ.
ವೀಕೆಂಡ್ ಗೆಳತೀ... ಶ್ರೀಧರ್ ಎರಡೂವರೆ ವರ್ಷದಿಂದ ಏಕಾಂಗಿಯಾಗಿದ್ದರು. ಅಕ್ಕಪಕ್ಕದವರು ಈತನ ಪತ್ನಿ, ಪುತ್ರನನ್ನು ಇದುವರೆಗೆ ನೋಡಿಲ್ಲ. ವೀಕೆಂಡ್ ಗಳಲ್ಲಿ ಒಬ್ಬ ಯುವತಿ ಬರುತ್ತಿದ್ದಳು. ಬರುವಾಗ ಊಟ ಸಹ ತರುತ್ತಿದ್ದಳು. ಈ ಯುವತಿಯೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಶ್ರೀಧರ್ ಏಪ್ರಿಲ್ 13ರಂದು ಕೊನೆಯ ಬಾರಿಗೆ ಪಕ್ಕದ ಮನೆಯವರಿಗೆ ಕಾಣಿಸಿದ್ದರು. ಬ್ಯಾಂಕ್ ಕೆಲಸದ ಜತೆಗೆ ಬಡ್ಡಿ ವ್ಯವಹಾರವನ್ನೂ ಮಾಡುತ್ತಿದ್ದರು ಎನ್ನುತ್ತಾರೆ ನೆರೆಹೊರೆಯವರು.