ಅಕ್ರಮ ಗಣಿಗಾರಿಕೆ : ಕೋರ್ಟಿಗೆ ಸಿಇಸಿ ವರದಿ ಸಲ್ಲಿಕೆ
ಸಿಇಸಿ ಸಲ್ಲಿಸಿದ ಐದು ವಾಲ್ಯೂಮ್ಗಳಲ್ಲಿ ಮೊದಲನೆಯದ್ದು ದಾಲ್ಮಿಯ ಗಣಿ ಪ್ರದೇಶಕ್ಕೆ ಸಂಬಂಧಿಸಿದ್ದು, ಎರಡನೆಯದ್ದು ರಾಮಘಡ ಗಣಿ ಪ್ರದೇಶಕ್ಕೆ ಸಂಬಂಧಿಸಿದ್ದು, ಮೂರನೆಯದ್ದು ಲಕ್ಷ್ಮೀನಾರಾಯಣ ಗಣಿ ಕಂಪನಿಗೆ ಸಂಬಂಧಿಸಿದ್ದು, ನಾಲ್ಕನೆಯದ್ದು ಲೋಕಾಯುಕ್ತ ಮತ್ತು ಇನ್ನಿತರೆ ತನಿಖಾ ಸಂಸ್ಥೆಗಳ ಪೂರಕ ಮಾಹಿತಿ ಹಾಗೂ ಐದನೇ ವಾಲ್ಯೂಮ್ ಇತರೆ ಗಣಿಗಳ ಹಾಗೂ ಗಣಿ ಪ್ರದೇಶಗಳ ಸಮಗ್ರ ಮಾಹಿತಿ ಒಳಗೊಂಡಿದೆ. ಒಟ್ಟಾರೆ 840ಕ್ಕೂ ಹೆಚ್ಚಿನ ಪುಟಗಳನ್ನು ಈ ಎಲ್ಲಾ ವಾಲ್ಯೂಮ್ಗಳು ಹೊಂದಿವೆ.
ಈ ಕುರಿತು ಏಪ್ರಿಲ್ 22ರ ಶುಕ್ರವಾರ ಈ ವರದಿ ಕುರಿತು ವಿಚಾರಣೆ ನಡೆಯಲಿದೆ. ಆದರೆ, ಈ ವರದಿ ಅದೆಷ್ಟು ಗಣಿಗಳ ಮೇಲೆ ಪರಿಣಾಮ ಬೀರಲಿದೆ ಎನ್ನುವುದು ಇನ್ನೂ ಖಚಿತವಾಗಿಲ್ಲ. ಈಗಾಗಲೇ ಆತಂಕಕ್ಕೀಡಾಗಿರುವ ಗಣಿ ಧಣಿಗಳು ಕಾನೂನು ಸಮರಕ್ಕಾಗಿ ಸಿದ್ಧತೆ ನಡೆಸಿದ್ದು, ಸಿಇಸಿ ವರದಿಯ ಅಧಿಕೃತ ಪ್ರತಿಗಾಗಿ ಅರ್ಜಿ ಸಲ್ಲಿಸಲು ಸರತಿಯಲ್ಲಿ ನಿಂತಿದ್ದಾರೆ.
ಅಕ್ರಮ ಗಣಿಗಾರಿಕೆ ನಡೆಸುತ್ತಿರುವ 64 ಗಣಿ ಕಂಪನಿಗಳ ವಿರುದ್ಧದ ತನಿಖೆಗೆ ಜಂಟಿ ಸಮಿತಿ ರಚಿಸಬೇಕು. ರಾಮಘಡ ಮತ್ತು ಸ್ವಾಮಿಮಲೈಗಳ 15 ಪ್ರದೇಶದಲ್ಲಿ ನಡೆಯುತ್ತಿರುವ ಗಣಿಗಾರಿಕೆಯನ್ನು ನಿಲ್ಲಿಸಬೇಕು. ಲಕ್ಷ್ಮಿನಾರಾಯಣ ಗಣಿ ಕಂಪನಿಯಿಂದಾಗಿ ಆಗಿರುವ ನಷ್ಟವನ್ನು ಗಣಿ ಕಂಪನಿ ಭರ್ತಿ ಮಾಡಿಕೊಡಬೇಕು ಮುಂತಾದ ಶಿಫಾರಸುಗಳನ್ನು ಸಿಇಸಿ ಮಾಡಿದೆ.