ತಮಿಳ್ನಾಡು ಕನ್ನಡಿಗರು ಯಾರಿಗೆ ಓಟು ಹಾಕ್ತಾರೆ?
ತಮಿಳುನಾಡಿನಲ್ಲಿ ಬೀಡುಬಿಟ್ಟಿರುವ ಮತಚಲಾಯಿಸುವ ಕನ್ನಡಿಗರ ಬೇಡಿಕೆಗಳೇನು? ಕನ್ನಡ ಶಾಲೆಗಳಿಲ್ಲದ (ಇದ್ದರೂ ಒಂದೋ ಎರಡೋ), ಕನ್ನಡ ಸಿನೆಮಾಗಳಿಲ್ಲದ, ಕನ್ನಡದ ಗಾಳಿ ಅಷ್ಟಾಗಿಲ್ಲದ, ಕನ್ನಡದ ಅಕ್ಷರಗಳನ್ನು ಎಲ್ಲೂ ಕಾಣದ ಕನ್ನಡಿಗರ ಜೀವನ ಹೇಗೆ ತಮಿಳುನಾಡಿನಲ್ಲಿ ಇದೆ? ಜೀವನದಮಟ್ಟ ಉತ್ತಮವಾಗಿದೆಯಾ, ಆಶೋತ್ತರಗಳು ಈಡೇರಿವೆಯಾ, ಆಸ್ತಿಪಾಸ್ತಿಗಳು ಅಚ್ಚುಕಟ್ಟಾಗಿವೆಯಾ? ಅಲ್ಲಿನ ಕನ್ನಡಿಗರೇ ಉತ್ತರಿಸಬೇಕು.
ಮೈತ್ರಿಕೂಟದ ಸರಕಾರ - ಕರುಣಾ : ದಶಕಗಳ ಕಾಲ ತಮಿಳುನಾಡಿನಲ್ಲಿ ಏಕಚಕ್ರಾಧಿಪತ್ಯ ನಡೆಸಿಕೊಂಡು ನಡೆಸಿಕೊಂಡು ಬಂದಿರುವ ಡಿಎಂಕೆ ನಾಯಕ ಮುತ್ತುವೇಲ್ ಕರುಣಾನಿಧಿ (87) ಮತ್ತು ಎಐಎಡಿಎಂಕೆ ನಾಯಕಿ ಕುಮಾರಿ ಜಯರಾಂ ಜಯಲಲಿತಾ (63) ಹಣಬರಹವನ್ನು ತಮಿಳುನಾಡಿನ ಜನತೆ ಇಂದು ನಿರ್ಧರಿಸಲಿದ್ದಾರೆ.
234 ವಿಧಾನಸಭೆ ಸ್ಥಾನಗಳಿಗಾಗಿ ಎರಡೂ ಪಕ್ಷಗಳ ನಡುವೆ ಭಾರೀ ಪೈಪೋಟಿ ನಡೆಯಲಿದೆ. ತಮ್ಮ ಬದ್ಧ ವೈರಿ ಕರುಣಾನಿಧಿಯವರನ್ನು ಸೋಲಿಸಿ ಜಯಲಲಿತಾ ಅಧಿಕಾರದ ಗದ್ದುಗೆ ಏರಲಿರುವರೆ? ಎಂಬ ಪ್ರಶ್ನೆಗೆ ಮೇ 30ರಂದು ಮತಎಣಿಕೆಯಲ್ಲಿ ಉತ್ತರ ದೊರೆಯಲಿದೆ. ಈ ನಡುವೆ, ಸೀಟಿ ಹಂಚಿಕೆಗಾಗಿ ಕಾಂಗ್ರೆಸ್ ಜೊತೆಗೆ ಗುದ್ದಾಡಿಕೊಂಡಿದ್ದ ಡಿಎಂಕೆ ನಾಯಕ ಕರುಣಾನಿಧಿ ಅವರು ತಮಿಳುನಾಡಿನಲ್ಲಿ ಮೈತ್ರಿಕೂಟ ರಚನೆಯಾಗುವುದು ಖಚಿತ ಎಂಬ ಬಗ್ಗೆ ಸೂಚನೆ ನೀಡಿದ್ದಾರೆ.
"ಉದಯಿಸುತ್ತಿರುವ ಸೂರ್ಯ(ಡಿಎಂಕೆ ಚಿಹ್ನೆ)ನಷ್ಟೇ ನಮ್ಮ ನಿರೀಕ್ಷೆಗಳು ಪ್ರಕಾಶಮಾನವಾಗಿವೆ. ಸರಕಾರ ರಚಿಸಲು ಬೇಕಾಗಿರುವ ಸ್ಥಾನಗಳನ್ನು ನಾವು ಗೆದ್ದೇ ಗೆಲ್ಲುತ್ತೇವೆ. ಏಕಾಂಗಿಯಾಗಲಿ ಅಥವಾ ಮೈತ್ರಿಕೂಟದ ಸಹಾಯದಿಂದ ಸರಕಾರ ರಚಿಸುವುದು ಖಚಿತ" ಎಂದು ಕರುಣಾನಿಧಿ ತಮ್ಮ ಮತ ಚಲಾಯಿಸಿದ ನಂತರ ಪತ್ರಕರ್ತರಿಗೆ ತಿಳಿಸಿದ್ದಾರೆ.
ಚುನಾವಣೆಗೂ ಮುನ್ನ ಸೀಟು ಹಂಚಿಕೆ ಕುರಿತಂತೆ ಕಾಂಗ್ರೆಸ್ ಜೊತೆ ಡಿಎಂಕೆ ಮುನಿಸಿಕೊಂಡಿತ್ತು. 2ಜಿ ತರಂಗಗುಚ್ಛ ಹಗರಣದ ತನಿಖೆಗೆ ಸಂಬಂಧಿಸಿದಂತೆ ಕೂಡ ಕಾಂಗ್ರೆಸ್ ಜತೆ ಕರುಣಾನಿಧಿ ಜಗಳವಾಡಿಕೊಂಡಿದ್ದರು. 1967ರ ನಂತರ ಕಾಂಗ್ರೆಸ್ ತಮಿಳುನಾಡಿನಲ್ಲಿ ಅಧಿಕಾರದ ರುಚಿ ಕಂಡೇ ಇಲ್ಲ. ಡಿಎಂಕೆ ಸಂಸ್ಥಾಪಕ ಸಿಎನ್ ಅಣ್ಣಾದೊರೈ ಅವರು ಕಾಂಗ್ರೆಸ್ ನಿಂದ ಅಧಿಕಾರ ಕಿತ್ತುಕೊಂಡಿದ್ದರು.
ಕರುಣಾನಿಧಿಯಿಂದ ಗದ್ದುಗೆ ಕಿತ್ತುಕೊಳ್ಳುವ ಆಶಾಭಾವನೆ ಹೊಂದಿರುವ ಜಯಲಲಿತಾ ಡಿಎಂಕೆ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಚುನಾವಣೆಯಲ್ಲಿ ಈಗಿನಂತೆ ಎಂದೂ ಭ್ರಷ್ಟಾಚಾರ ನಡೆದಿಲ್ಲ. ಡಿಎಂಕೆ ಸರಕಾರ ಭ್ರಷ್ಟತನದ ಪರಮಾವಧಿ ಮುಟ್ಟಿದೆ. ಡಿಎಂಕೆ ಏನಿಲ್ಲವೆಂದರೂ ಈ ಚುನಾವಣೆಯಲ್ಲಿ 5 ಸಾವಿರ ಕೋಟಿ ರು.ನಷ್ಟು ಹಣವನ್ನು ಚೆಲ್ಲಾಡಿದೆ. ಇದು ಜನರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮತದಾರರು ಡಿಎಂಕೆಗೆ ಪಾಠ ಕಲಿಸುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.