ನ್ಯಾಯ ಹೀಗೂ ಉಂಟು: ಎಚ್ಚರ ಹಾಲಪ್ಪಗಳಿರಾ!
ದುಬೈ ಪ್ರಕರಣ: ಕಳೆದ ವರ್ಷ ನವೆಂಬರ್ 11ರಂದು 4 ವರ್ಷದ ಮಗುವಿನ ಮೇಲೆ ಶಾಲಾ ಬಸ್ಸಿನಲ್ಲಿ ಅತ್ಯಾಚಾರವೆಸಗಿದ ಆರೋಪವನ್ನು ಮೂವರು ಭಾರತೀಯ ಸಂಜಾತರ ಮೇಲೆ ಹೊರಿಸಲಾಗಿತ್ತು. ಆದರೆ ಸೂಕ್ತ ಸಾಕ್ಷ್ಯ ದೊರೆಯದ ಕಾರಣ ದುಬೈ ನ್ಯಾಯಾಲಯ ಮೂವರನ್ನೂ ಖುಲಾಸೆ ಮಾಡಿದೆ. ಬಹುತೇಕ ಅತ್ಯಾಚಾರ ಪ್ರಕರಣಗಳಿಗೆ ಹಳ್ಳ ಹಿಡಿಯುವುದು ಹೀಗೇಯೇ. ಆದರೆ... ನಡೆಯದೇ ಇರುವ ಅತ್ಯಾಚಾರಕ್ಕಾಗಿ ನಿರಪರಾಧಿಗಳಿಗೆ ಶಿಕ್ಷೆ ವಿಧಿಸಲಾಗದು ಎಂದು ನ್ಯಾಯಾಲಯ ನ್ಯಾಯವನ್ನು ಎತ್ತಿ ಹಿಡಿದಿದೆ.
ವಿಧಿವಿಜ್ಞಾನ ವರದಿಯ ಪ್ರಕಾರ ಮಗುವಿನ ಮೇಲೆ ಅತ್ಯಾಚಾರ ನಡೆದಿರುವ ಕುರುಹುಗಳು ಪತ್ತೆಯಾಗಿಲ್ಲ. ಪೋಷಕರ ಆರೋಪ ಸುಳ್ಳಿನ ಕಂತೆಯಾಗಿದೆ. ಇನ್ನು ಆರೋಪಿಗಳು ಒತ್ತಡಕ್ಕೆ ಸಿಲುಕಿ ತಪ್ಪೊಪ್ಪಿಗೆ ಹೇಳಿಕೆಗಳನ್ನು ನೀಡಿದ್ದಾರೆ. ಆರೋಪಿಗಳು ಉತ್ತಮ ಹಿನ್ನೆಲೆಯವರಿದ್ದಾರೆ. ಅವರಿಗೂ ಮಕ್ಕಳಿವೆ. ಇಂಥವರಿಂದ ಅತ್ಯಾಚಾರ ನಡೆದಿದೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಸಮಾಜ ಮತ್ತು ಮಾಧ್ಯಮಗಳು ಮಾಡಿರುವ ದಾಳಿಯಿಂದಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಪಿಗಳು ಕುಗ್ಗಿದ್ದಾರೆ ಎಂದು ನ್ಯಾಯಾಲಯ ಸಹಾನುಭೂತಿ ವ್ಯಕ್ತಪಡಿಸಿದೆ. ಆರೋಪ ಸಾಬೀತಾಗುವವರೆಗೂ ಎಲ್ಲರೂ ನಿರಪರಾಧಿಗಳೆ. ತನಿಖೆ ಮತ್ತು ವಿಚಾರಣೆ ಮುಗಿಯುವುರೆಗೆ ಸಾರ್ವಜನಿಕರು ಮತ್ತು ಮಾಧ್ಯಮಗಳು ಸಹನೆಯಿಂದ ವರ್ತಿಸಬೇಕು ಎಂದು ನ್ಯಾಯಮೂರ್ತಿಗಳು ಕಿವಿಹಿಂಡಿದ್ದಾರೆ.
ಶೈನಿ ಕೇಸಿಗ್ : ಇನ್ನು, ಬಾಲಿವುಡ್ ನಟ ಶೈನಿ ಅಹುಜಾ ಪ್ರಕರಣ ಇದಕ್ಕೆ ತದ್ವಿರುದ್ಧವಾದದ್ದು. ಶೈನಿ ತನ್ನ ಮೇಲೆ ಅತ್ಯಾಚಾರವೆಸಗಿಲ್ಲ ಎಂದು ಆತನ ವಿರುದ್ಧ ಅತ್ಯಾಚಾರ ದೂರು ನೀಡಿದ್ದ 20 ವರ್ಷದ ಮನೆಕೆಲಸದ ಯುವತಿ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಉಲ್ಟಾ ಹೊಡೆದಿದ್ದಳು. ಕೋರ್ಟ್ ಸುಮ್ಮನೆ ಬಿಡಲಿಲ್ಲ. ನಿನ್ನ ಉಡುಪಿನ ಮೇಲೆ ಕಾಣಿಸಿಕೊಂಡ ವೀರ್ಯ ಶೈನಿಯದ್ದೇ ಎಂದು ಡಿಎನ್ಎ ವರದಿ ಸ್ಪಷ್ಟಪಡಿಸಿದೆ. ಜತೆಗೆ ನಿನ್ನ ಮೇಲೆ ದೈಹಿಕ ಹಲ್ಲೆಯಾಗಿರುವುದೂ ಸಾಬೀತಾಗಿದೆ. ಇನ್ನು, ನಿಮ್ಮಾಟ ನಡೆಯದು. ಶೈನಿಗೆ 7 ವರ್ಷ ಕಠಿಣ ಶಿಕ್ಷೆ ವ್ಯತಿರಿಕ್ತ ಹೇಳಿಕೆ ನೀಡಿದ್ದಕ್ಕಾಗಿ ನಿನಗ ಶಿಕ್ಷೆ ಕಾದಿದೆ ಎಂದು ಇತ್ತೀಚೆಗೆ ಮುಂಬೈ ಸೆಷನ್ಸ್ ನ್ಯಾಯಾಲಯ ಸಾರಿದೆ.
ಹಾಲಾಹಲ: ಈ ಎರಡೂ ಪ್ರಕರಣಗಳ ಸಮ್ಮುಖದಲ್ಲಿ ಸ್ನೇಹಿತನ ಪತ್ನಿಯ ಮೇಲೆ ಮಾನಭಂಗ ಮಾಡಿದ ಆರೋಪ ಹೊತ್ತಿರುವ ಹಾಲಪ್ಪ ಪ್ರಕರಣವನ್ನು ವಿಶ್ಲೇಷಿಸಿದಾಗ ...ಬಾಧಿತೆ ಚಂದ್ರಾವತಿ ಒಳ ಉಡುಪಿನ ಮೇಲೆ ಬಿದ್ದಿರುವ ವೀರ್ಯವು ಆರೋಪಿ ಹಾಲಪ್ಪನದೇ ಎಂದು ಡಿಎನ್ಎ ವರದಿಯಿಂದ ಸ್ಪಷ್ಟವಾಗಿರುವುದಾಗಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ರಾಜ್ಯ ಸಿಐಡಿ ಹೇಳಿದೆ. ಅಲ್ಲಿಗೆ ಪ್ರಕರಣ ಹಳ್ಳ ಹಿಡಿಯದೆ ಆರೋಪಿಗೆ ತಕ್ಕ ಶಿಕ್ಷೆಯಾಗುವುದು ಬಹುತೇಕ ಖಾತ್ರಿಯಾಗಿದೆ.