ಅಣ್ಣಾ ಚಳವಳಿ ಬೆಂಬಲಿಸಿ ಸುವರ್ಣ ನ್ಯೂಸ್ ರಥ
ಇಂದು ಬೆಂಗಳೂರಿನಲ್ಲಿ ಭ್ರಷ್ಟಾಚಾರದ ವಿರುದ್ಧ ಸುವರ್ಣ ನ್ಯೂಸ್ ರಥವನ್ನು ಹೊರಡಿಸಿದೆ. 'ಭ್ರಷ್ಟರ ಬೆನ್ನತ್ತಿ...' ಎಂಬ ಘೋಷಣೆಯುಳ್ಳ ವಾಹನ ನಗರದಾದ್ಯಂತ ಸಂಚರಿಸಿ ಜನರಲ್ಲಿ ಭ್ರಷ್ಟ ವ್ಯವಸ್ಥೆಯ ವಿರುದ್ಧ ಜಾಗೃತಿ ಮೂಡಿಸುತ್ತಿದೆ. ಇದರ ನೇತೃತ್ವ ವಹಿಸಿರುವ ಸುವರ್ಣ ನ್ಯೂಸ್ ನ ಗೌರೀಶ್ ಅಕ್ಕಿ ಜೊತೆ ನಾಡಿನ ಬಗ್ಗೆ ಕಳಕಳಿಯುಳ್ಳ ನೂರಾರು ಜನ ರಸ್ತೆಯುದ್ದಕ್ಕೂ ನಡಿಗೆಯಲ್ಲಿ ಸಾಗುತ್ತಿದ್ದಾರೆ. ಹಲವರು ದ್ವಿಚಕ್ರ, ನಾಲ್ಕುಚಕ್ರ ವಾಹನಗಳಲ್ಲಿ ಭಾರತೀಯ ಬಾವುಟವನ್ನು ಹಿಡಿದು ಭ್ರಷ್ಟಾಚಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಸಾಗುತ್ತಿದ್ದಾರೆ.
ಈ ಅಭಿಯಾನಕ್ಕೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಬೆಳಿಗ್ಗೆ 9ಗಂಟೆಗೆ ಜಯನಗರ 9ನೇ ಬಡಾವಣೆಯಿಂದ ಪ್ರಾರಂಭವಾದ ಯಾತ್ರೆ ಟೌನ್ ಹಾಲ್ ಮುಖಾಂತರ ಸಾಗಿ, ಕೋರಮಂಗಲ ಫೋರಂ ಮಾಲ್ ಮೂಲಕ ಸಾಗಿ 4 ಗಂಟೆಗೆ ಹಲಸೂರು ತಲುಪಲಿದೆ. ಸಂಜೆ 6 ಗಂಟೆಗೆ ಬ್ರಿಗೇಡ್ ರಸ್ತೆ ಮತ್ತು ಮಹಾತ್ಮಾ ಗಾಂಧಿ ರಸ್ತೆ ಚೌಕದಲ್ಲಿ ಮುಕ್ತಾಯವಾಗಲಿದೆ.
ದಿನದಿಂದ ದಿನಕ್ಕೆ ವಿರಾಟ್ ರೂಪ ಪಡೆಯುತ್ತಿರುವ ಅಣ್ಣಾ ಚಳವಳಿಗೆ ಬೆಂಗಳೂರು ಮಾತ್ರವಲ್ಲ, ಮೈಸೂರು, ಮಂಡ್ಯ, ಚನ್ನಪಟ್ಟಣ, ಧರ್ಮಸ್ಥಳ, ಹಾಸನ, ಬಳ್ಳಾರಿ ಸೇರಿದಂತೆ ರಾಜ್ಯಾದ್ಯಂತ ಭಾರೀ ಸಂಖ್ಯೆಯಲ್ಲಿ ಜನರು ಧುಮುಕುತ್ತಿದ್ದಾರೆ. ಬಳ್ಳಾರಿಯಲ್ಲಿ ಚೇಂಬರ್ ಆಫ್ ಕಾಮರ್ಸ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಮತ್ತು ಸಾರ್ವಜನಿಕರು ಏ.8ರಂದು ಪಾದಯಾತ್ರೆ ಕೈಗೊಳ್ಳುತ್ತಿದ್ದಾರೆ. ಪಾದಯಾತ್ರೆಯ ಕೊನೆಯಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುತ್ತಿದೆ.
ಚನ್ನಪಟ್ಟಣದಲ್ಲಿ ಒಗ್ಗೂಡಿರುವ ಮತದಾರರು ಇನ್ನು ಮುಂದೆ ಓಟು ಹಾಕಲು ನೋಟು ಪಡೆಯುವುದಿಲ್ಲ ಎಂದು ಪಣ ತೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಭ್ರಷ್ಟಾಚಾರಕ್ಕೆ ಬೆಂಬಲ ನೀಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.