ಅಣ್ಣಾ ಹಜಾರೆ ಕ್ಲೀನ್ ಮನುಷ್ಯ ಏನಲ್ಲ :ಶಿವಸೇನೆ
ಭ್ರಷ್ಟಾಚಾರ ವಿರೋಧಿ ಸಮಿತಿ ಸಚಿವರ ಸಮೂಹದಿಂದ ಶರದ್ ಪವಾರ್ ಹಿಂದೆ ಸರಿದ ಮೇಲೆ ಮಹಾರಾಷ್ಟ ವಿಧಾನಸಭೆಯಲ್ಲಿ ಅಣ್ಣಾ ಹಜಾರೆ ನಿರಶನದ ಬಗ್ಗೆ ಭಾರಿ ಚರ್ಚೆ ನಡೆದಿದೆ. ನ್ಯಾಯಾಂಗ ಹಾಗೂ ಸಂಸತ್ತಿಗೆ ಅದರದೇ ಆದ ಗೌರವವಿದೆ. ಅಣ್ಣಾ ಅದನ್ನು ಧಿಕ್ಕರಿಸುತ್ತಿದ್ದಾರೆ. ಭ್ರಷ್ಟಾಚಾರ ಆರೋಪ ಹೊತ್ತು ಚಳವಳಿಯಿಂದ ಹಿಂದೆ ಸರಿದಿದ್ದ ಹಜಾರೆ ಈಗ ಇದ್ದಕ್ಕಿದ್ದ ಹಾಗೆ ಸರ್ಕಾರದ ವಿರುದ್ಧ ತಿರುಗಿಬಿದ್ದಿರುವುದು ಹಾಸ್ಯಾಸ್ಪದವಾಗಿದೆ ಎಂದು ಶಿವಸೇನೆ ಎಂಎಲ್ ಎ ಸುರೇಶ್ ಜೈನ್ ಹೇಳಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ ಹಾಗೂ ನ್ಯಾಯಾಂಗ ವ್ಯವಸ್ಥೆಯ ಗೌರವವನ್ನು ಕಾಪಾಡಬೇಕು. ಅದರ ಬದಲಿಗೆ ಜವಾಬ್ದಾರಿಯುತ ಸಂಸ್ಥೆಗಳಿಗೆ ನಿರ್ದೇಶನ ನೀಡುವ ದುಸ್ಸಾಹಸ ಮಾಡಬಾರದು. ಭ್ರಷ್ಟಾಚಾರ ತೊಲಗಬೇಕು ನಿಜ ಆದರೆ, ಅದಕ್ಕೆ ಬೇರೆಯದೆ ಮಾರ್ಗಗಳಿವೆ. ಬ್ಲ್ಯಾಕ್ ಮೇಲ್ ರೀತಿ ಈ ಕೆಲಸ ಆಗಲೇ ಬೇಕು ಎಂದು ನಿರ್ದೇಶನ ನೀಡುವುದು ಸರಿಯಲ್ಲ ಎಂದು ಜೈನ್ ಹೇಳಿದ್ದಾರೆ.
72 ವರ್ಷದ ಕಿಸನ್ ಬಾಬುರಾವ್ ಹಜಾರೆ ತಮ್ಮ ಟ್ರಸ್ಟ್ ಗೆ ಸರ್ಕಾರದಿಂದ ಸಿಕ್ಕಿದ್ದ 22 ಕೋಟಿ ರು ದೇಣಿಗೆ ಹಣ ದುರುಪಯೋಗಪಡಿಸಿಕೊಂಡ ಆರೋಪವನ್ನು ಹೊತ್ತಿದ್ದರು. ಮಾಧ್ಯಮಗಳು ಚುನಾಯಿತ ಪ್ರತಿನಿಧಿಗಳನ್ನು ಕಳ್ಳರು, ಭ್ರಷ್ಟರು ಎಂಬಂತೆ ಬಿಂಬಿಸುತ್ತಿದ್ದಾರೆ. ನ್ಯಾಯಾಂಗ, ಶಾಸಕಾಂಗ ಹಾಗೂ ಕಾರ್ಯಾಂಗ ವ್ಯವಸ್ಥೆಯ ಬಗ್ಗೆ ಮಾಧ್ಯಮಗಳಿಗೆ ಸರಿಯಾದ ಪಾಠ ಆಗಬೇಕಿದೆ ಎಂದು ಸುರೇಶ್ ಕಿಡಿಕಾರಿದ್ದಾರೆ.