ಎಂಇಎಸ್ ಬೆಂಬಲಿತ ಮಂದಾ ಬೆಳಗಾವಿ ಮೇಯರ್
ಇಲ್ಲಿನ ಮಹಾಪೌರರ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು.ಈ ಜಾತಿಗೆ ಸೇರಿದ ಇಬ್ಬರು ಅಭ್ಯರ್ಥಿಗಳು ಮಾತ್ರ ಪಾಲಿಕೆಯಲ್ಲಿದ್ದರು. ಪ್ರತಿಸ್ಪರ್ಧಿಯಾಗಿ ನಾಮಪತ್ರ ಸಲ್ಲಿಸಿದ್ದ ವಾರ್ಡ್ ನಂ.45ರ ನಗರ ಸೇವಕಿ ವಂದನಾ ಬೀಳಗಿ ಕೊನೆ ಗಳಿಗೆಯಲ್ಲಿ ನಾಮಪತ್ರ ಹಿಂದಕ್ಕೆ ತೆಗೆದು ಕೊಂಡಿದ್ದು, ಮಂದಾ ಅವರ ಗೆಲುವಿಗೆ ಕಾರಣವಯಿತು.
ಯಾವುದೇ ಗೌಜು ಗದ್ದಲ ಗಲಾಟೆ ಗೊಂದಲ ಹೊಡೆದಾಟ ಬಡಿದಾಟವಿಲ್ಲದೆ ಶಾಂತವಾಗಿ, ಅವಿರೋಧವಾಗಿ ಮೇಯರ್ ಆಯ್ಕೆ ಪ್ರಕ್ರಿಯೆ ನಡೆದಿದ್ದು ಅಚ್ಚರಿಯ ಅಂಶ ಎನಿಸಿತ್ತು. ಚುನಾವಣೆ ಅಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತರಾಗಿದ್ದ ಸಿಎಂ ಶಿರೋಳ ಚುನಾವಣೆ ಫಲಿತಾಂಶ ಪ್ರಕಟಿಸಿ, ಮಂದಾ ಸುನೀಲ ಬಾಳೆಕುಂದ್ರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಹೇಳಿದರು.
ಕಳೆದ ಮೂರು ಅವಧಿಗೆ ಕನ್ನಡ ಅಭ್ಯರ್ಥಿಗಳು ಮೇಯರ್ ಆಗಿ ಆಯ್ಕೆಯಾಗಿದ್ದರು. ಈ ಬಾರಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಎಂಎ ಪದವೀಧರೆ ಮಂದಾ ಬಾಳೇಕುಂದ್ರಿ ಮೇಯರ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೇಯರ್ ಆಗಿ ಆಯ್ಕೆಯಾದ ಅನಂತರ ಸುದ್ದಿಗಾರರ ಜತೆ ಮಾತನಾಡಿದ ಮಂದಾ ಬಾಳೇ ಕುಂದ್ರಿ, ತಾವು ಯಾವುದೇ ಜಾತಿ, ಮತ, ಪಂಥಗಳ ಕುರಿತು ವಿವಾದಾತ್ಮಕ ನಿಲುವು ತೆಗೆದುಕೊಳ್ಳದೇ ಬೆಳಗಾವಿ ನಗರದ ಸರ್ವಾಂಗೀಣ ಅಭಿವೃದ್ಧಿಯ ಕಡೆಗೆ ಗಮನ ಹರಿಸುವುದಾಗಿ ತಿಳಿಸಿದರು.