ಹಿಂದೂ ಕ್ರೈಸ್ತ ಜಗಳದಲ್ಲಿ ಪಶುಪತಿನಾಥ ಅನಾಥ
ತಮ್ಮ ಸಮುದಾಯಕ್ಕೆ ಅಧಿಕೃತ ಸ್ಮಶಾನವೊಂದರ ನಿರ್ಮಾಣಕ್ಕೆ ಭೂಮಿ ನೀಡುವಂತೆ ಸರ್ಕಾರವನ್ನು ಆಗ್ರಹಿಸಿ ಕಳೆದ 15 ದಿನಗಳಿಂದ ನೇಪಾಳದ ಕ್ರೈಸ್ತರು ಉಪವಾಸ ಮುಷ್ಕರ ನಡೆಸುತ್ತಿದ್ದಾರೆ. ಕ್ರೈಸ್ತರು ನ್ಯಾಯಾಲಯದ ಮೆಟ್ಟಿಲೇರಿರುವುದನ್ನು ಹಿಂದೂ ಕಾರ್ಯಕರ್ತರು ವಿರೋಧಿಸಿದ್ದಾರೆ. ರಿಟ್ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಲರಾಮ್ ಕೇಸಿ ಹಾಗೂ ಭರತ್ ಬಹಾದ್ದೂರ್ ಕರ್ಕಿ ಕೈಗೆತ್ತಿಕೊಂಡು ಏ.12 ರಂದು ತೀರ್ಪು ನೀಡುವುದಾಗಿ ಹೇಳಿದ್ದಾರೆ.
ಮಾರ್ಚ್ 13ರಂದು ಚಾರಿ ಬಹಾದ್ದೂರ್ ಗಹತ್ರಾಜ್ ಎಂಬ ಪ್ರೊಟೆಸ್ಟೆಂಟ್ ಪಾದ್ರಿ ಹಾಗೂ ಸಮುದಾಯದ ಪ್ರಭಾವಿ ಸದಸ್ಯ ಮನ್ಬಹಾದ್ದೂರ್ ಖತ್ರಿ ಎಂಬ ಕ್ರೈಸ್ತ ಮುಖಂಡ ರಿಟ್ ಅರ್ಜಿಯೊಂದನ್ನು ಸಲ್ಲಿಸಿದ್ದರು. ಪಶುಪತಿನಾಥ ದೇವಾಲಯ ಸಂಕೀರ್ಣದ ಸಮೀಪದ ಶ್ಲೇಷ್ಮಂಟಕ್ ಅರಣ್ಯದಲ್ಲಿ ಅಲ್ಲಲ್ಲಿ ಚದುರಿರುವ ನೂರಾರು ಕ್ರೈಸ್ತರ ಸಮಾಧಿಗಳನ್ನು ನಾಶಗೊಳಿಸದಂತೆ ದೇವಾಲಯದ ಆಡಳಿತ ನೋಡಿಕೊಳ್ಳುತ್ತಿರುವ ಪಶುಪತಿನಾಥ ಪ್ರದೇಶಾಭಿವೃದ್ಧಿ ಪ್ರತಿಷ್ಠಾನಕ್ಕೆ ಆದೇಶ ನೀಡುವಂತೆ ಕೋರಿದ್ದರು.
ಅರಣ್ಯ ಭೂಮಿಯಲ್ಲಿ ಕ್ರೈಸ್ತರು ತಮ್ಮ ಮೃತದೇಹಗಳನ್ನು ಸಮಾಧಿ ಮಾಡಲು ಈ ಹಿಂದೆ ಅನುಮತಿಸಲಾಗಿತ್ತು ಹಾಗೂ ಸರ್ಕಾರ ಪರ್ಯಾಯ ಭೂಮಿ ಒದಗಿಸುವವರೆಗೂ ಇದೇ ಸ್ಥಳವನ್ನು ಬಳಸುವಂತೆ ಈ ಹಿಂದೆ ಸೂಚಿಸಲಾಗಿತ್ತು ಎಂದು ಇಬ್ಬರು ಅರ್ಜಿದಾರರು ಹೇಳಿದ್ದಾರೆ. ಹಿಂದೂಗಳಿಗೆ ಪವಿತ್ರವಾದ ಅರಣ್ಯ ಪ್ರದೇಶದಲ್ಲಿ ಹಿಂದುಗಳಲ್ಲದವರು ಅತಿಕ್ರಮಣ ಪ್ರವೇಶ ಮಾಡಲು ಅವಕಾಶ ನೀಡಬಾರದು ಎಂದು ಹಿಂದೂ ಕಾರ್ಯಕರ್ತ ಭರತ್ ಜಂಗಮ್ ಪ್ರತಿ ದೂರು ಸಲ್ಲಿಸಿದ್ದಾರೆ.