ಸಾಯಿಬಾಬಾ ಅನಾರೋಗ್ಯ: ಗ್ರಾಮದೇವತೆಯ ಶಾಪ?
ಒಂದು ವಾರದ ಹಿಂದೆ ಏನಾಯಿತೆಂದರೆ ... ಅದಕ್ಕೂ ಮುನ್ನ, ವಿಭೂತಿ ಪುರುಷ ಸತ್ಯ ಸಾಯಿ ಬಾಬಾ ಎಂದೇ ಹೆಸರುವಾಸಿಯಾದ ಬಾಲಕ ಸತ್ಯಾನಾರಾಯಣನಿಗೂ ಪುಟ್ಟಪರ್ತಿಗೂ ನಿಕಟ ಸಂಬಂಧವಿದೆ. ಪುಟ್ಟಪರ್ತಿ ಎಂಬ ಕುಗ್ರಾಮವನ್ನು ಪ್ರಗತಿಯತ್ತ ಕೊಂಡೊಯ್ದು ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿಕೊಟ್ಟ ಪುಣ್ಯಾತ್ಮ ಆತ. ಅದರಂತೆ ಇಲ್ಲಿನ ಜನ ದೇವ ಮಾನವ ಸಾಯಿಬಾಬಾ ಜತೆಜತೆಗೆ ಗ್ರಾಮದ ಅಧಿದೇವತೆಯನ್ನೂ ಆರಾಧಿಸತೊಡಗಿದರು.
ಇಂತಿಪ್ಪ ಜನ ತಿಳಿದೋ, ತಿಳಿಯದೆಯೋ ಪುಟ್ಟಪರ್ತಿ ಗ್ರಾಮ ದೇವಿ ಸತ್ಯಮ್ಮದೇವಿಯ ವಿಗ್ರಹವನ್ನು ಊರಿನ ಸಮೀಪವಿರುವ ಬುಕ್ಕಾಪಟ್ಟಣ ಕೆರೆಯಲ್ಲಿ ಇತ್ತೀಚೆಗೆ ವಿಸರ್ಜನೆ ಮಾಡಿಬಿಟ್ಟರು. ಸರಿ ಅದೇ ವೇಳೆಗೆ ಆಸ್ಪತ್ರೆ ಸೇರಿದ್ದ ಪವಾಡ ಪುರುಷ ಸಾಯಿಬಾಬಾ ಅವರ ಆರೋಗ್ಯ ತೀರಾ ಹದಗೆಟ್ಟಿದೆ. ಕಂಗಾಲಾದ ಗ್ರಾಮದ ಹಿರಿಯರು ಸಭೆ ಸೇರಿ ವಿಚಾರ ಮಾಡಿದಾಗ ಗ್ರಾಮ ದೇವತೆಯನ್ನು ಕೆರೆಯಲ್ಲಿ ವಿಸರ್ಜನೆ ಮಾಡಿರುವುದೇ ಅನಾಹುತಕ್ಕೆ ಕಾರಣ ಎಂಬುದನ್ನು ಪತ್ತೆಹಚ್ಚಿದ್ದಾರೆ. ಸರಿ ತಡಮಾಡದೆ, ಸೋಮವಾರ ಸಂಜೆಯೇ ಹತ್ತಾರು ಮಂದಿ ಕೆರೆಗೆ ಧುಮುಕಿ ಗ್ರಾಮದೇವತೆಯ ವಿಗ್ರಹಕ್ಕಾಗಿ ಹುಡುಕಾಟ ನಡೆಸಿದ್ದಾರೆ.
ಕೊನೆಗೆ ಮಂಗಳವಾರ ಬೆಳಗ್ಗೆ ವಿಗ್ರಹವನ್ನು ಪತ್ತೆಹಚ್ಚಲಾಗಿದ್ದು, ನೀರಿನಿಂದ ಹೊರತೆಗೆಯಲಾಗಿದೆ. ಸುಮಾರು ಎರಡು ಅಡಿ ಎತ್ತರದ ವಿಗ್ರಹವನ್ನು ಊರಿನಲ್ಲಿರುವ ದೊಡ್ಡ ಮರದ ಕೆಳಗೆ ಇಡಲಾಗಿದೆ. ವಿಗ್ರಹಕ್ಕೆ ಪೂಜೆ ಪುನಸ್ಕಾರಗಳು ಭರದಿಂದ ಸಾಗಿವೆ. ಇದೇ ವೇಳೆ, ಸಾಯಿಬಾಬಾ ಆರೋಗ್ಯ ವಿಚಾರಿಸಿ, ಪುಟ್ಟಪರ್ತಿಗೆ ಆಗಮಿಸಿದ್ದ ಭಕ್ತಾದಿಗಳೂ ದೊಡ್ಡ ಮರದ ಕೆಳೆಗೆ ಸೇರಿ, ದೇವತೆಯನ್ನು ಪೂಜಿಸತೊಡಗಿದ್ದಾರೆ. ಈ ಮಧ್ಯೆ ಗ್ರಾಮದ ಹಿರಿಯರು ವಿಶೇಷ ಪೂಜೆ ನೆರವೇರಿಸಿ, ವಿಗ್ರಹವನ್ನು ಪ್ರತಿಷ್ಠಾಪಿಸುವುದಕ್ಕೆನಿರ್ಧರಿಸಿದ್ದಾರೆ.