ಶ್ರೀಲಂಕಾ 300 ಚಿಲ್ರೆ ಸ್ಕೋರು, ಭಾರತಕ್ಕೇ 'ಫೈನಲ್' ಗೆಲುವು
ನವದೆಹಲಿ, ಏಪ್ರಿಲ್ 1: ಪಾಕ್ ವಿರುದ್ಧ ಮೊಹಾಲಿಯಲ್ಲಿ ಭರ್ಜರಿ ಜಯ ದಾಖಲಿಸಿದ ಭಾರತದ ತಾರಾಬಲ ಅದ್ಭುತವಾಗಿದ್ದು, ಶನಿವಾರ ವಿಶ್ವ ಕಪ್ ಎತ್ತಿಹಿಡಿಯುವ ಅದೃಷ್ಟ ಭಾರತಕ್ಕೆ ಎಂದು ನಾಡಿನ ಜ್ಯೋತಿಷಿಗಳು ಭವಿಷ್ಯವಾಣಿ ನುಡಿದಿದ್ದಾರೆ. ಕ್ಯಾಪ್ಟನ್ ಎಂ.ಎಸ್. ಧೋನಿ ತಾರಾಮಂಡಲ ನಿಗಿನಿಗಿ ಹೊಳೆಯುತ್ತಿದೆ. ಆತನಿಗೆ 30ರ ವಯಸ್ಸು. ಇದು ನಿಜಕ್ಕೂ ಆತನಿಗೆ ಅದೃಷ್ಟ ತಂದುಕೊಡಲಿದೆ.
ಶನಿವಾರದ ಫೈನಲ್ ತಾರಾಲಯ ಹೀಗಿದೆ:
* ಟಾಸ್ ಗೆಲುವು: ಶ್ರೀಲಂಕಾ
* ಶ್ರೀಲಂಕಾದಿಂದ 300ರ ಗಡಿಪಾರು
* ಲಸಿತ್ ಮಾಲಿಂಗ ಮಾರಕ ಬೌಲಿಂಗ್
* ಭಾರತದ ಮಧ್ಯಮ ಕ್ರಮಾಂಕ ಅಧಮ
* ಸೆಹ್ವಾಗ್, ಸಚಿನ್ ಭದ್ರ ಅಡಿಪಾಯ
* ಫೈನಲ್ ಓವರ್ ನಲ್ಲಿ ಭಾರತಕ್ಕೆ 'ಫೈನಲ್' ಗೆಲುವು
ಧೋನಿದು ಕನ್ಯಾ ರಾಶಿ. ಈತನ ತಾರಾ ಮಂಡಲದಲ್ಲಿ ರಾಹು ಮತ್ತು ಬುಧ ಗ್ರಹಗಳು ಸಕ್ರಿಯವಾಗಿವೆ. ಯೋಗಕಾರಕ ಕೇತು ದಶೆ ಮಾರ್ಚ್ 29ರಂದೇ ಪ್ರವೇಶ ಪಡೆದಿದ್ದಾನೆ. ಇದರಿಂದಲೇ ಪಾಕ್ ವಿರುದ್ಧ ಆ ಪಾಟಿ ಅದೃಷ್ಟ ಒಲಿದಿದ್ದು. ಏಪ್ರಿಲ್ 2ರಂದು ಇಂತಹುದೇ ಪ್ರಭಾವಳಿ ಸೃಷ್ಟಿಯಗಾಲಿದೆ. ಶ್ರೀಲಂಕಾದ ನಾಯಕ ಸಂಗಕ್ಕಾರನ ತಾರಾ ಮಂಡಲಕ್ಕಿಂತ ನಮ್ಮ ಧೋನಿದು ನಿಗಿನಿಗಿ ಹೊಳೆಯುತ್ತಿದೆ. ಅಲ್ಲಿಗೆ ಭಾರತ ಜಯಶಾಲಿಯಾಗುವುದು ಖಚಿತ. ಪಂದ್ಯ ಸ್ಪರ್ಧಾತ್ಮಕವಾಗಿರುತ್ತದೆ, ಸಪ್ಪೆಯಾಗಿರುವುದಿಲ್ಲ ಎಂದು ಜ್ಯೋತಿಷಿ ಅಜಯ್ ಭಾಂಬಿ ದೆಹಲಿಯಲ್ಲಿ ಹೇಳಿದ್ದಾರೆ. ಶ್ರೀಲಂಕಾ ಟಾಸ್ ಗೆಲ್ಲಲಿದೆ. 300ಕ್ಕಿಂತ ಹೆಚ್ಚು ರನ್ ಸಹ ಮಾಡಲಿದೆ. ಆದರೆ ಭಾರತಕ್ಕೆ 300ರ ಗುರಿ ತಲುಪುವುದು ಕಷ್ಟವಾಗದು ಎಂದೂ ಅವರು ಹೇಳಿದ್ದಾರೆ.
ಇದಕ್ಕೆ ಪುಷ್ಠಿ ನೀಡುವಂತೆ ಖಗೋಳ-ಸಂಖ್ಯಾಶಾಸ್ತ್ರಜ್ಞ ಅನುಪಮ್ ಕಪಿಲ್ ಅವರು ಹೀಗೆ ಭವಿಷ್ಯ ನುಡಿದಿದ್ದಾರೆ: ಶ್ರೀಲಂಕಾ ತಂಡ ಭರ್ಜರಿ ಪ್ರದರ್ಶನ ನೀಡಲಿದೆ. ಆದರೆ ಸಂಖ್ಯಾಶಾಸ್ತ್ರದ ಲೆಕ್ಕಾಚಾರದಂತೆ 'ಫೈನಲ್' ಗೆಲುವು ಭಾರತದ್ದೇ. ಮಧ್ಯಮ ಕ್ರಮಾಂಕದ ದಾಂಡಿಗರು ಅಷ್ಟೇನೂ ಉತ್ತಮ ಪ್ರದರ್ಶನ ತೋರುವುದಿಲ್ಲ. ಆದರೆ ಅದಕ್ಕೂ ಮುನ್ನ ಆರಂಭಿಕ ಸೆಹ್ವಾಗ್ ಮತ್ತು ತೆಂಡೂಲ್ಕರ್ ತಂಡಕ್ಕೆ ಜಯದ ಅಡಿಪಾಯ ಹಾಕಿಕೊಡುತ್ತಾರೆ. ಶ್ರೀಲಂಕಾ ಪರ ಲಸಿತ್ ಮಾಲಿಂಗ ಬೌಲಿಂಗ್ ಅರಿ ಭಯಂಕರವಾಗಿರುತ್ತದೆ. ಆದರೂ ಭಾರತ ಐವತ್ತೂ ಓವರ್ ಆಡಿ ಗೆಲುವು ದಕ್ಕಿಸಿಕೊಳ್ಳಲಿದೆ.