ಅಬ್ಬಾ, ಕೊನೆಗೂ ಯಡಿಯೂರಪ್ಪ ರಾಜೀನಾಮೆ
ನಿಷ್ಠರು ನೀಡಿದ ಮಾಹಿತಿಯಿಂದ ಕಂಗಾಲಾದಂತೆ ಕಂಡುಬಂದ ಯಡಿಯೂರಪ್ಪ ಅವರು ಸೀದಾ ಗಾಳಿ ಆಂಜನೇಯ ದೇವಸ್ಥಾನಕ್ಕೆ ತೆರಳಿದರು. ಅಲ್ಲಿ ದೇವರಿಗೆ ಸಾಷ್ಟಾಂಗ ನಮಸ್ಕಾರ ಹಾಕಿ, ಐದು ನಿಮಿಷ ಏಕಾಂತದಲ್ಲಿ ಧ್ಯಾನಿಸತೊಡಗಿದರು. ಆ ಸಂದರ್ಭದಲ್ಲಿ ಟಿವಿ ಮಾಧ್ಯಮಗಳು ಅವರನ್ನು ಸುತ್ತುವರಿದವಾದರೂ ಯಡಿಯೂರಪ್ಪ ಅದಕ್ಕೆ ನಯವಾಗಿಯೇ ಅವಕಾಶ ನಿರಾಕರಿಸಿದರು. ಬಳಿಕ, ಟಿವಿ ಕ್ಯಾಮೆರಾಗಳ ಕಣ್ಣು ತಪ್ಪಿಸಿ ನೇರವಾಗಿ ರಾಜ್ಯಪಾಲರ ಅಂಗಳದಲ್ಲಿ ಕಾಣಿಸಿಕೊಂಡ ಯಡಿಯೂಪ್ಪ ಅವರು ರಾಜ್ಯಪಾಲ ಭಾರದ್ವಾಜ್ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು.
ಭೇಟಿ ವೇಳೆ 'ಹೇಗಾದರೂ ಮಾಡಿ ತಮ್ಮನ್ನು ಉಳಿಸಿಕೊಳ್ಳಿ' ಎಂದು ಯಡಿಯೂರಪ್ಪ ರಾಜ್ಯಪಾಲರನ್ನು ಅಂಗಲಾಚಿದರು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರು ರಾಜ್ಯಪಾಲರ ನಿವಾಸದಲ್ಲಿ ಮರೆಯಲ್ಲಿ ನಿಂತು ತಮ್ಮ ಪುತ್ರ ಕುಮಾರಸ್ವಾಮಿ ಅವರೊಂದಿಗೆ ಗಹನ ಚರ್ಚೆಯಲ್ಲಿ ತೊಡಗಿರುವುದು ಕಂಡುಬಂದಿತು. ಇದನ್ನು ಗಮನಿಸಿದ ಯಡಿಯೂರಪ್ಪ, ತಮ್ಮ ಪದಚ್ಯುತಿಗೆ ದೇವೇಗೌಡರದೇ ಕಿತಾಪತಿಯೊ ಅಥವಾ ತಮ್ಮ ನಂತರ ಮಗನ ಪಟ್ಟಾಭಿಷೇಕಕ್ಕೆ ರಾಜ್ಯಪಾಲರನ್ನು ಭೇಟಿಯಾಗಲು ಬಂದಿದ್ದಾರೋ ಎಂಬ ಗೊಂದಲದಲ್ಲಿದ್ದಂತೆ ಭಾಸವಾಯಿತು.
ಆ ವೇಳೆಗೆ ಅವರ ನಿಷ್ಠರು ಪ್ರತ್ಯಕ್ಷರಾಗಿ ಪರಿಸ್ಥಿತಿ ಕೈಮೀರಿದೆ. ಎಲ್ಲ ದೇವ ಲೀಲೆ ಎಂದು ಉಸುರತೊಡಗಿದರು. 'ತಮಗಾಗಿ ಯಾರೋ ಸರಿಯಾದ ಖೆಡ್ಡಾ ತೋಡಿದ್ದಾರೆ. ಇನ್ನು ಬೇರೆ ದಾರಿ ಇಲ್ಲ' ಎಂದು ಪರಿಭಾವಿಸಿದ ಯಡಿಯೂರಪ್ಪ ಅವರು ರಾಜೀನಾಮೆ ಒಗಾಯಿಸಿ, ತಮ್ಮ ಆಪ್ತ ಸಚಿವರಾದ ಶೋಭಾ ಕರಂದ್ಲಾಜೆ ಅವರ ಮನೆಯತ್ತ ತೆರಳಿದ್ದಾರೆ ಎಂದು ಮೂಲಗಳು ಹೇಳಿವೆ. ತಾಜಾ ಮಾಹಿತಿಗಾಗಿ ಕಾಯಲಾಗುತ್ತಿದೆ.
ಈ ಮಧ್ಯೆ, ಯಡಿಯೂರಪ್ಪ ಅವರ ನಿಷ್ಠಾವಂತ ಸಚಿವ ಸುರೇಶ್ ಕುಮಾರ್ ಅವರು ಪರಿಸ್ಥಿತಿಯನ್ನು ವಿವರಿಸಿ, 'ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಈ ಗಾಳಿ ಸುದ್ದಿಯ ಹಿಂದೆ ಯಾರದೋ ಕುತಂತ್ರ ಅಡಗಿದೆ. ಇಂದಿಗೂ ಯಡಿಯೂರಪ್ಪ ಅವರೇ ನಾಡಿನ ಮಖ್ಯಮಂತ್ರಿ. ಇದರಲ್ಲಿ ಯಾವುದೇ ಅನುಮಾನ ಇಲ್ಲ' ಎಂದು ಎಲ್ಲ ಮಾಧ್ಯಮಗಳಿಗೂ, ವಿಶೇಷವಾಗಿ ಈ ಸುದ್ದಿಯನ್ನು ಶ್ರದ್ಧೆಯಿಂದ ಪ್ರಕಟಿಸಿದ ದಟ್ಸ್ ಕನ್ನಡ ಬಳಗಕ್ಕೆ ಇ-ಮೇಲ್ ಮಾಡಿ ತಿಳಿಸಿದ್ದಾರೆ! ಹ.. ಹ್ಹ .. ಹ್ಹಾ...!