ಒಬ್ಬ ವಿದ್ಯಾರ್ಥಿ ಸುತ್ತ 15 ಪರೀಕ್ಷಾ ಸಿಬ್ಬಂದಿ!
ಓರ್ವ ಶಿಕ್ಷಕ, ಶಾಲೆ ತುಂಬ ಮಕ್ಕಳು ಇರುವ ಶಾಲೆಗಳ ಸುದ್ದಿ ಓದಿದವರಿಗೆ ಇದು ವಿಶೇಷ ಸುದ್ದಿ. ಇದೇನಿದು ಆಶ್ಚರ್ಯ. ಪರೀಕ್ಷೆ ಬರೆಯುವ ಓರ್ವ ವಿದ್ಯಾರ್ಥಿಗಾಗಿ ಸರ್ಕಾರ ಇಷ್ಟೆಲ್ಲಾ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆಯೇ? ಪ್ರಶ್ನಿಸಬೇಡಿ. ಈ ಪ್ರಸಂಗ ನಡೆದಿರುವುದು ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದ ಷಾಮಿಯಾಚಂದ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ. ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರ. ಮಂಗಳವಾರ ಹಿಂದಿ ಪರೀಕ್ಷೆ ನಡೆದಿದೆ. ಈ ಪರೀಕ್ಷೆಗೆ ಹಾಜರಾಗಿದ್ದು ಇರ್ಫಾನ್ ಎನ್ನುವ ವಿದ್ಯಾರ್ಥಿ ಮಾತ್ರ.
ಇರ್ಫಾನ್ ರಾಷ್ಟ್ರೀಯ ಭಾಷೆ ಹಿಂದಿ ಪರೀಕ್ಷೆ ಬರೆಯುತ್ತಿದ್ದಾಗ ಆತನ ಸುತ್ತಲೂ ಇದ್ದವರು, ಒಬ್ಬರು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷರು, ಮೊತ್ತೋರ್ವರು ಸಹ ಅಧೀಕ್ಷಕರು, ಓರ್ವರು ಉತ್ತರ ಪತ್ರಿಕೆ ವಿತರಕರು, ಜಾಗೃತದಳದ ಇಬ್ಬರು ಅಧಿಕಾರಿಗಳು, ಓರ್ವ ಕೊಠಡಿ ಮೇಲ್ವಿಚಾರಕರು, ನಾಲ್ವರು ಪ್ರಶ್ನೆಪತ್ರಿಕೆ ವಿತರಕರು, ಓರ್ವ ಪೊಲೀಸ್ ಪೇದೆ, ಇಬ್ಬರು ಗುಮಾಸ್ತರು ಮತ್ತು ಓರ್ವ ಜವಾನ. ಒಟ್ಟು 15 ಸಿಬ್ಬಂದಿ.
ಕಾಲೇಜಿನ ಪ್ರಾಂಶುಪಾಲ ಬಿ. ಓಬಳೇಶು ಅವರು, ಓರ್ವ ವಿದ್ಯಾರ್ಥಿ ಮಾತ್ರ ಪಿಯುಸಿಯಲ್ಲಿ ಹಿಂದಿಯನ್ನು ವಿಷಯವಾಗಿ ಅಭ್ಯಾಸ ಮಾಡಿದ್ದಾನೆ. ಓರ್ವನೇ ಪರೀಕ್ಷೆ ಬರೆಯುತ್ತಿದ್ದಾನೆ. ಪಿಯುಸಿ ಮಂಡಲಿಯ ಪರೀಕ್ಷಾ ವಿಭಾಗದ ನೀತಿಗಳ ಪ್ರಕಾರವೇ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಸಿಬ್ಬಂದಿ ಸಂಖ್ಯೆ ಮುಖ್ಯವಲ್ಲ' ಎನ್ನುತ್ತಾರೆ.
ವಿದ್ಯಾರ್ಥಿ ಇರ್ಫಾನ್ ರಾಷ್ಟ್ರಭಾಷೆ ಹಿಂದಿ ಕಲಿಕೆಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಕುಗ್ಗುತ್ತಿದೆ. ನಾನು ಒಬ್ಬನೇ ಹಿಂದಿ ಪಠ್ಯ ಕಲಿತು ಪರೀಕ್ಷೆ ಬರೆದಿದ್ದೇನೆ. ಸಿಬ್ಬಂದಿ ಎಷ್ಟಿದ್ದರೇನು? ಬರೆಯುವ ಪರೀಕ್ಷೆ ಬಂದಷ್ಟು ಬರೆದಿದ್ದೇನೆ. ಹೆಮ್ಮೆ ಅನಿಸುತ್ತಿದೆ. ಖುಷಿ ಆಗುತ್ತಿದೆ' ಎಂದು ಹರ್ಷ ವ್ಯಕ್ತಪಡಿಸುತ್ತಾನೆ.