ಖಾಕಿಗಳ ಭದ್ರಕೋಟೆಯಲ್ಲಿ ವಾಂಖೆಡೆ ಬಂದಿ
ಮುಂಬೈ, ಮಾ. 29: ವಿಶ್ವಕಪ್ 2011 ರ ಅಂತಿಮ ಹಣಾಹಣಿಗೆ ಸಜ್ಜಾಗಿರುವ ವಾಂಖೆಡೆ ಕ್ರೀಡಾಂಗಣ ಈಗ ಖಾಕಿಗಳ ಭದ್ರಕೋಟೆಯಲ್ಲಿ ಬಂದಿಯಾಗಿದೆ. ಉಗ್ರರ ದಾಳಿ ಭೀತಿಯಿರುವ ಹಿನ್ನೆಲೆಯಲ್ಲಿ ಇಡೀ ಸ್ಟೇಡಿಯಂ ಸುತ್ತ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ. ಮುಂಬೈ ಪೊಲೀಸರ ಜತೆಗೆ, ಭಾರತೀಯ ಸೇನೆ ಅನುಮಾನಾಸ್ಪದ ವ್ಯಕ್ತಿಗಳ ವಿರುದ್ಧ ಹದ್ದಿನ ಕಣ್ಣಿಟ್ಟಿದೆ.
ವಿಶ್ವಕಪ್ ಪಂದ್ಯದ ಮೇಲೆ ದಾಳಿ ನಡೆಸುವ ಸಂಚುಕೋರ ಪಾಕಿಸ್ತಾನದಲ್ಲಿ ಸಿಕ್ಕಿಬಿದ್ದ ನಂತರ ಮುಂಬೈ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಸಂಭಾವ್ಯ ದಾಳಿ, ಅನಾಹುತ ತಡೆಯುವ ನಿಟ್ಟಿನಲ್ಲಿ ಭಾರತೀಯ ಸೇನೆಯ ಸಹಾಯ ಕೋರಿದ್ದಾರೆ. ಸ್ಟೇಡಿಯಂ ಸುತ್ತಾ 184 ಸಿಸಿಟಿವಿ ಕೆಮೆರಾಗಳನ್ನು ಅಳವಡಿಸಲಾಗಿದೆ. ಸೆಮಿಫೈನಲ್ ಹಾಗೂ ಫೈನಲ್ ಪಂದ್ಯದ ವಿಡಿಯೋ ಚಿತ್ರೀಕಣಕ್ಕೆ ನಿರ್ಬಂಧ ಹೇರಲಾಗಿದೆ. ನಕಲಿ ಪತ್ರಕರ್ತರ ಮೇಲೆ ತೀವ್ರ ನಿಗಾ ಇರಿಸಲಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮುಂಬೈ ಪೊಲೀಸ್ ವಕ್ತಾರ ರಾಜ್ ಕುಮಾರ್ ವಟ್ಕಾರ್, ಉಗ್ರರ ಬೆದರಿಕೆ ಹಿನ್ನಲೆಯಲ್ಲಿ ಸೇನೆ ಹಾಗೂ ಎನ್ಎಸ್ಜಿ ಪಡೆಗಳ ಸಹಾಯ ಪಡೆದಿದ್ದೇವೆ ಎಂದರು. ಪಂದ್ಯ ಮುಗಿಯುವವರೆಗೂ ವಾಂಖೆಡೆ ಸುತ್ತಮುತ್ತಲಿನ ಸ್ಥಳವನ್ನು ವಿಮಾನ ಹಾರಾಟ ನಿಷಿದ್ಧ ವಲಯ ಎಂದು ಘೋಷಿಸಲಾಗಿದೆ. ಈ ಎಚ್ಚರಿಕೆಯನ್ನು ಧಿಕ್ಕರಿಸಿ, ಯಾವುದೇ ವಿಮಾನ ಹಾರಾಟ ನಡೆಸಿದಲ್ಲಿ ಅದನ್ನು ಹೊಡೆದುರುಳಿಸುವ ಅಧಿಕಾರ ಕೂಡ ವಾಯುಸೇನೆಗೆ ನೀಡಲಾಗಿದೆ. ಇದೇ ರೀತಿ ನೌಕಾದಳಕ್ಕೂ ಸಮುದ್ರ ವ್ಯಾಪ್ತಿಯಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ.
ಎನ್ಎಸ್ಜಿ ಕಮಾಂಡೋ ಹಾಗೂ ಫೋರ್ಸ್ ಒನ್ ಕಮಾಂಡೋಗಳನ್ನು ಸ್ಟೇಡಿಯಂನ ಭದ್ರತೆಗೆ ನಿಯೋಜಿಸಿದ್ದು, ಯಾವುದೇ ಕ್ಷಣದಲ್ಲಿ ಉಗ್ರರ ದಾಳಿ ನಡೆದಲ್ಲಿ ಅದನ್ನು ಯಶಸ್ವಿಯಾಗಿ ತಡೆಯಲು ಸಜ್ಜಾಗಿರುವಂತೆ ಸೂಚಿಸಲಾಗಿದೆ.
ಬಯೋಮೆಟ್ರಿಕ್ ಐಡಿ ಕಾರ್ಡ್ : ಹೆಚ್ಚಿನ ಭದ್ರತೆಗಾಗಿ ಮುಂಬೈ ನಗರ ಪೊಲೀಸ್ ಹೆಲಿಕಾಪ್ಟರ್ನ್ನು ಕೂಡ ಬಳಸಿಕೊಳ್ಳಲಿದೆ. ಪಂದ್ಯ ನಡೆಯುವ ಸಂದರ್ಭದಲ್ಲಿ ವಿಪತ್ತು ನಿರ್ವಹಣಾ ಪಡೆಯನ್ನು ನೀಡುವಂತೆ ಮುಂಬೈ ಪೊಲೀಸ್ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಹಾಗೆ ಪಂದ್ಯದ ಸಮಯದಲ್ಲಿ ಕೇವಲ 70 ವಿವಿಐಪಿ ಹಾಗೂ ವಿಐಪಿ ವಾಹನಗಳಿಗೆ ಮಾತ್ರ ಕ್ರೀಡಾಂಗಣಕ್ಕೆ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಉನ್ನತ ಪೊಲೀಸ್ ಅಧಿಕಾರಿಗಳ ವಾಹನ ಹೊರತು ಪಡಿಸಿ ಮತ್ತುಳಿದ ಯಾವುದೇ ಪೊಲೀಸ್ ವಾಹನಗಳಿಗೂ ಕ್ರೀಡಾಂಗಣ ಪ್ರವೇಶವಿಲ್ಲ.
ಪೊಲೀಸ್ ಅಧಿಕಾರಿಗಳಿಗೆ ಬಯೋಮೆಟ್ರಿಕ್ ಐಡೆಂಟಿಟಿ ಕಾರ್ಡ್ಗಳನ್ನು ನೀಡಲಾಗಿದೆ. ಕ್ರೀಡಾಂಗಣದ ಸುತ್ತಲೂ ಹಾಗೂ ಒಳಗೆ ಬಿಗಿ ಬಂದೋಬಸ್ತ್ ಮಾಡಲಾಗಿದೆ. ವಿಶ್ವಕಪ್ಗೆ ಉಗ್ರರ ದಾಳಿಯ ಮತ್ತೊಂದು ಮಾಹಿತಿ ಲಭಿಸುತ್ತಿದ್ದಂತೆ ಕಳೆದ ನಾಲ್ಕು ದಿನಗಳಿಂದ ಮುಂಬೈನ ಗಲ್ಲಿಗಳಲ್ಲಿ ಹಾಗೂ ಮುಂಬೈ ಸಮೀಪದ ಜಿಲ್ಲೆಗಳಲ್ಲಿ ಶೋಧ ಕಾರ್ಯ ನಡೆಸುತ್ತಿದೆ.