ವಿಶ್ವಕಪ್ ಕ್ರಿಕೆಟ್ ಹುಚ್ಚಿಗೆ ಮೊದಲ ಬಲಿ
ಬೆಂಗಳೂರು, ಮಾ. 29: ವಿಶ್ವಕಪ್ ಕ್ರಿಕೆಟ್ ಹುಚ್ಚಿಗೆ ಮೊದಲ ಬಲಿ ಬಿದ್ದಿದೆ. ಆದರೆ, ಸತ್ತಿರುವುದು ಯಾವುದೇ ಕ್ರಿಕೆಟ್ ಪ್ರೇಮಿಯಲ್ಲ. ತನ್ನದಲ್ಲದ ತಪ್ಪಿಗೆ ಜ್ಯೋಗಿಷ್ಯ ನುಡಿಯುವ ಗಿಳಿಯೊಂದು ಪ್ರಾಣ ಕಳೆದುಕೊಂಡಿದೆ. ಭಾರತ ಹಾಗೂ ಪಾಕಿಸ್ತಾನ ಸೆಮಿಫೈನಲ್ ಪಂದ್ಯವನ್ನು ಯಾರು ಗೆಲ್ಲಲಿದ್ದಾರೆ ಎಂಬ ಪ್ರಶ್ನೆಗೆ ಪಾಕಿಸ್ತಾನ ಕಾರ್ಡ್ ಎತ್ತುವ ಮೂಲಕ ಭವಿಷ್ಯ ನುಡಿದದ್ದೇ ಅಪರಾಧವಾಗಿ ತನ್ನ ಮಾಲೀಕನ ಕೋಪಕ್ಕೆ ಆ ಗಿಳಿ ಗುರಿಯಾಗಿದೆ. ಅಲ್ಲದೆ, ಇದೇ 'ತಪ್ಪ'ನ್ನು ಮೂರು ಬಾರಿ ಪುನರಾವರ್ತನೆ ಮಾಡಿದ ಗಿಳಿಯ ಕೊರಳು ಹರಿದುಬಿದ್ದಿದೆ.
ಮಾಲಿ ಎಂಬ ಹೆಸರಿನ ಗಿಳಿಗೆ ಪಾಕಿಸ್ತಾನದ ಹಸಿರು ಬಣ್ಣ ಇಷ್ಟವಾಯಿತೋ ಏನೋ, ಪಾಕಿಸ್ತಾನದ ಪರ ನಿಂತು ಭಾರತ ಸೋಲಲಿದೆ ಎಂದು ಭವಿಷ್ಯ ಹೇಳಿತ್ತು. ಆದರೆ, ಗಿಳಿಯ ವರ್ತನೆಯಿಂದ ಅದರ ಮಾಲೀಕನಿಗೆ ಸಕತ್ ಕೋಪ ಉಂಟಾಗಿದೆ. ಈ ರೀತಿ ಭವಿಷ್ಯ ನುಡಿದರೆ ತನ್ನ ಹೊಟ್ಟೆಗೆ ಕಲ್ಲು ಬೀಳುವುದು ಗ್ಯಾರಂಟಿ ಎಂದುಕೊಂಡು ಗಿಳಿಗೆ ಮತ್ತೆ ತರಬೇತಿ ನೀಡಿದ್ದಾನೆ. ಆದರೆ, ಗಿಳಿ ಮಾತ್ರ ತನ್ನ ಆಯ್ಕೆ ಪಾಕಿಸ್ತಾನ ಎಂದು ಸೂಚಿಸಿದೆ.
ಇದರಿಂದ ದಿಕ್ಕು ತೋಚದಂತಾದ ಅದರ ಮಾಲೀಕ ಪದೇ ಪದೇ ಗಿಳಿ ಭಾರತಕ್ಕೆ ಸೋಲು ಪಾಕ್ ಗೆ ಜಯ ಎಂದು ಸೂಚಿಸುತ್ತಿರುವುದನ್ನು ಕಂಡು, ಇನ್ನು ಇದಕ್ಕೆ ಗಿಳಿಯ ಸಾವೆ ಪರಿಹಾರ ಎಂದು ತೀರ್ಮಾನ ಮಾಡಿ ಅದರ ಕೊರಳನ್ನು ಲಟಕ್ ಎಂದು ಮುರಿದು ಎಸೆದಿದ್ದಾನೆ. ತನ್ನದಲ್ಲದ ತಪ್ಪಿಗೆ ಮೂಕ ಪ್ರಾಣಿ, ವಿಶ್ವಕಪ್ ಗಾಗಿ ಹುತಾತ್ಮನಾಗಿದೆ. ಪ್ರಾಣಿದಯಾ ಸಂಸ್ಥೆ ಏನು ಪ್ರತಿಕ್ರಿಯೆ ನೀಡುತ್ತದೆ ಎನ್ನುವುದನ್ನು ಕಾದುನೋಡುವುದೇ ಲೇಸು.