ಕೇರಳ ಚುನಾವಣೆ: ಜೈಲಿಂದಲೇ ಮದನಿ ಕಾರುಬಾರು
ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಬೇಕು? ಪ್ರಚಾರ ಹೇಗೆ ಮಾಡಬೇಕು? ಬಿ ಫಾರಂ 'ರಾಜಕೀಯ' ಮಾಡುವುದು ಹೇಗೆ? ಕೊನೆಗೆ ಚುನಾವಣೆಯಲ್ಲಿ ನಿರಾಯಾಸವಾಗಿ ಗೆಲ್ಲೋದು ಹೇಗೆ ಎಂಬೆಲ್ಲ ರಾಜಕೀಯ ತಂತ್ರಗಾರಿಕೆಯನ್ನು ಜೈಲಿನಲ್ಲಿದ್ದುಕೊಂಡೇ ಹೆಣೆಯುತ್ತಿದ್ದಾನೆ. ಎಲ್ಲವೂ ಅವನಿಚ್ಛೆಯಂತೆ ನಡೆಯುತ್ತಿದೆಯಾದರೂ ಅವನ ಮೊಬೈಲ್ ಕೈಕೊಟ್ಟಿದೆ. ಪಾತಕಿಗೆ ಜೈಲಿನಲ್ಲಿ ಮೊಬೈಲ್ ಸೇವೆ ಇಲ್ಲವಾಗಿದೆ.
ಈ ಹಿಂದೆ ಎರಡು ಬಾರಿ ಮದನಿ ಜೈಲಿಂದಲೇ ಪ್ರಚಾರ ನಡೆಸಿದ್ದಾನೆ. ಒಮ್ಮೆ ಪ್ರತ್ಯಕ್ಷವಾಗಿ ಪ್ರಚಾರ ನಡೆಸಿದ್ದಾನೆ. ಆದರೆ ಈ ಬಾರಿ ಬೆಂಗಳೂರು ಜೈಲೇ ಮದನಿ ಸಾರಥ್ಯದ ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ (ಪಿಡಿಪಿ) ಪಕ್ಷದ ಚುನಾವಣೆ ಆಟಕ್ಕೆ ಪ್ರಧಾನ ಕಚೇರಿ. ಕೇರಳದಿಂದ ದಿನವೂ ಅವನ ಕಟ್ಟಾಳುಗಳು ಬಂದು ಹೋಗುತ್ತಿದ್ದಾರೆ. ಸುಮಾರು ಒಂದು ತಿಂಗಳಿಂದ ಈ ಕಾರುಬಾರು ಅಬಾಧಿತವಾಗಿ ನಡೆದಿದೆ. ಏಪ್ರಿಲ್ 13ರಂದು ಚುನಾವಣೆಯಲ್ಲಿ ಪಿಡಿಪಿ ಅಭ್ಯರ್ಥಿಗಳು 25 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಜತೆಗೆ ಎಲ್ಡಿಎಫ್ ಜತೆ ಮೈತ್ರಿಯೂ ಮಾಡಿಕೊಂಡಿದೆ.
ಮದನಿ ಪತ್ನಿ ಸೂಫಿ ಕೇರಳದಲ್ಲಿ ಪಕ್ಷವನ್ನು ಮುನ್ನಡೆಸುತ್ತಿದ್ದಾಳೆ. ಆದರೆ ಪತಿಯ ಸಲಹೆ, ಸೂಚನೆಯಿಲ್ಲದೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಮೂರು ದಿನಕ್ಕೊಮ್ಮೆ ಪಕ್ಷದ ಬೆಂಬಲಿಗರೊಂದಿಗೆ ಪರಪ್ಪನ ಜೈಲಿಗೆ ಎಂಟ್ರಿ ಹಾಕುತ್ತಾಳೆ. 1994ರಿಂದ ಚುನಾವಣೆಗೆ ನಿಲ್ಲುತ್ತಿರುವ ಪಿಡಿಪಿ ಇದುವರೆಗೆ ಒಂದೂ ಸ್ಥಾನ ಗೆದ್ದಿಲ್ಲ. ಆದರೆ ಇತರೆ ಪಕ್ಷಗಳ ಸೋಲು ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ.