ಮೊಹಾಲಿ ಪಿಚ್ ವೇಗಿಗಳಿಗೆ ನೆರವು, ಶೋಯಿಬ್ ಖುಷಿ
ಮೊಹಾಲಿ, ಮಾ.27: ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸೆಮಿಫೈನಲ್ ಪಂದ್ಯಕ್ಕೆ ಮೊಹಾಲಿ ಪಿಚ್ ಸಿದ್ಧವಾಗಿದೆ. ಉಭಯ ತಂಡಗಳು ಅಭ್ಯಾಸ ನಿರತರಾಗಿದ್ದು, ಮೊಹಾಲಿ ಪಿಚ್ ಆರಂಭದಲ್ಲಿ ಬ್ಯಾಟಿಂಗ್ ಗೆ ನೆರವಾದರೂ, ಹಗಲು ರಾತ್ರಿ ಪಂದ್ಯದಲ್ಲಿ ರಾತ್ರಿ ವೇಳೆ ವೇಗದ ಬೌಲಿಂಗಿಗೆ ಹೆಚ್ಚಿನ ಸಹಕಾರಿಯಾಗಲಿದೆ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಕ್ಯೂರೇಟರ್ ದಲ್ಜೀತ್ ಸಿಂಗ್ ಹೇಳಿದ್ದಾರೆ.ಈ ನಡುವೆ ಪಾಕಿಸ್ತಾನ ಶೋಯಿಬ್ ಅಖ್ತರ್ ಅವರನ್ನು ಆಡಿಸಲಿ ಎಂದು ಮಾಜಿ ಕ್ರಿಕೆಟ್ಟಿಗ ವಾಸಿಂ ಅಕ್ರಂ ಸಲಹೆ ನೀಡಿದ್ದಾರೆ. ಟೀಂ ಇಂಡಿಯಾಕ್ಕೆ ವೇಗಿಗಳ ಆಯ್ಕೆ ಪಿಚ್ ಸ್ಥಿತಿ ನೋಡಿದ ಮೇಲೆ ಬದಲಾಗುವ ಸಾಧ್ಯತೆಯಿದೆ. ಹೊನಲು ಬೆಳಕಿನಲ್ಲಿ ಚೆಂಡು ಹೆಚ್ಚು ಸ್ವಿಂಗ್ ಪಡೆದುಕೊಳ್ಳಲಿದೆ. ಈ ಪಿಚ್ ವೇಗ ಮತ್ತು ಚೆಂಡು ಹೆಚ್ಚು ಪುಡಿತಗೊಳ್ಳಲು ಅವಕಾಶವಿದೆ.
ಐರ್ಲೆಂಡ್ ಮತ್ತು ವಿಂಡೀಸ್ ನಡುವಿನ ಪಂದ್ಯಕ್ಕೆ ಬಳಸಿದ ಪಿಚ್ನ್ನೇ ಸೆಮಿಫೈನಲಿಗೂ ಬಳಸಲಾಗುವುದು ಎಂದು ದಲ್ಜೀತ್ ಹೇಳಿದ್ದಾರೆ. ಪಿಚ್ ನಲ್ಲಿರುವ ಹುಲ್ಲನ್ನು ಸಣ್ಣದಾಗಿ ಕತ್ತರಿಸಲಾಗಿದ್ದು, ಹೆಚ್ಚು ಇಬ್ಬನಿ ಹಿಡಿದಿಟ್ಟುಕೊಳ್ಳದಂತೆ ನೋಡಿಕೊಳ್ಳಲಾಗಿದೆ. ಕಳೆದ ಮೂರು ದಿನದಿಂದ ಪಿಚ್ ಗೆ ನೀರು ಹನಿಸಿಲ್ಲ. ಬ್ಯಾಟ್ ಮನ್ಸ್ ಗಳಿಗೆ ಸಹಾಯಕವಾಗುವ ಪಿಚ್ ರೂಪಿಸುವಂತೆ ಬೋರ್ಡ್ ಸಲಹೆ ಮೇರೆಗೆ ಅಗತ್ಯ ಬಿದ್ದರೆ ಪಿಚ್ ನ ತೇವವನ್ನು ಹಿರಲಾಗುವುದು ಎಂದು ದಲ್ಜೀತ್ ಹೇಳಿತ್ತಾರೆ.
ಅಖ್ತರ್ ಆಡಲೇಬೇಕು : ಸೆಮಿಫೈನಲ್ ಪಂದ್ಯಕ್ಕೆ ಪಾಕ್ ತಂಡ ಶೊಯೇಬ್ ಗೆ ಅವಕಾಶ ನೀಡಬೇಕು ಎಂದು ಪಾಕ್ ಮಾಜಿ ನಾಯಕ ಹಾಗೂ ಮಾಜಿ ವೇಗಿ ವಾಸೀಂ ಅಕ್ರಂ ಹೇಳಿದ್ದಾರೆ. ಭಾರತ ವಿರುದ್ದ ಉತ್ತಮ ದಾಖಲೆ ಹೊಂದಿರುವ ಅಖ್ತರ್ ವೇಗದ ಪಿಚ್ ನ ಲಾಭ ಪಡೆಯಬಹುದು. ಅವರಿಗೆ ಉಮರ್ ಗುಲ್ ಹಾಗೂ ರಜಾಕ್ ಸಾಥ್ ನೀಡಲಿ ಎಂದಿದ್ದಾರೆ. ಅಖ್ತರ್ ಸೇರ್ಪಡೆಯಾದರೆ ವಹಬ್ ರಿಯಾಜ್ ಹೊರಗುಳಿಯಬೇಕಾಗುತ್ತದೆ.
ಸ್ಪಿನ್ನರ್ ಗಳನ್ನು ಆರಿಸುವ ಮುನ್ನ ಪಿಚ್ ಬಗ್ಗೆ ಮಾಹಿತಿ ಇದ್ದರೆ ಒಳ್ಳೆಯದು. ಅಫ್ರಿದಿ ತಂಡದಲ್ಲಿ ಭಾರಿ ಬದಲಾವಣೆ ಮಾಡದಿದ್ದರೆ ಒಳಿತು. ಪಾಕಿಸ್ತಾನ ವಿರುದ್ಧ ಭಾರತ ಫೆವರಿಟ್ ತಂಡ. ಆದರೂ ಪಾಕ್ ತೀವ್ರ ಸ್ಪರ್ಧೆ ಒಡ್ಡಲಿದೆ. ಭಾರತ ಪಾಕ್ ಪಂದ್ಯ ಯಾವಾಗಲೂ ರೋಚಕತೆಯಿಂದ ಕೂಡಿರುತ್ತದೆ ಎಂದು ಅಕ್ರಂ ಅಭಿಪ್ರಾಯಪಟ್ಟಿದ್ದಾರೆ.