ಗುಂಡ್ಯದಲ್ಲಿ ಹೊಸ ಸರ್ವೆ, ಅರಣ್ಯ ನಾಶ ತಡೆ: ಶೋಭಾ
ರಾಜ್ಯದ ವಿವಿಧ ವಿದ್ಯುತ್ ಯೋಜನೆಗಳಿಗೆ ಕೇಂದ್ರದ ಪರಿಸರ ಇಲಾಖೆಯ ಅನುಮತಿಯ ಪಡೆಯುವ ಹಿನ್ನೆಲೆಯಲ್ಲಿ ಕೇಂದ್ರದ ಅರಣ್ಯ ಸಚಿವ ಜೈರಾಮ್ ರಮೇಶ್ರನ್ನು ಶೋಭಾ ಕರಂದ್ಲಾಜೆ ಭೇಟಿ ಮಾಡಿದ್ದರು. ಗುಂಡ್ಯ ಯೋಜನೆಗೆ ಶೇ.50ರಷ್ಟು ಅರಣ್ಯ ಪ್ರದೇಶವನ್ನು ಕಡಿಮೆಗೊಳಿಸಿದರೆ ಅನುಮತಿ ನೀಡುವ ಕುರಿತು ಚಿಂತನೆ ನಡೆಸುವುದಾಗಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ಸರ್ವೆ ಕಾರ್ಯ ನಡೆಸಲಾಗುವುದು ಎಂದು ಸಚಿವೆ ಸ್ಪಷ್ಟಪಡಿಸಿದರು.
ಹೊಂಗಡಹಳ್ಳಡ್ಯಾಂ ನಿರ್ಮಿಸುವುದರಿಂದ ಅಪಾರ ಪ್ರಮಾಣದ ಅರಣ್ಯ ಪ್ರದೇಶ ನಾಶವಾಗುತ್ತದೆ. ಶಿರಾಡಿ ಘಾಟ್, ಕೆಂಪು ಹೊಳೆ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿನ ಜೀವ ವೈವಿಧ್ಯತೆ ಧಕ್ಕೆ ಉಂಟಾಗಲಿದೆ ಎಂದು ಪರಿಸರವಾದಿಗಳು ಪ್ರಸ್ತಾವಿತ ಗುಂಡ್ಯಾ ವಿದ್ಯುತ್ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸುಮಾರು 160 ಹೆಕ್ಟೇರ್ ಪ್ರದೇಶ ಮುಳುಗಡೆಯಾಗಲಿದ್ದು, ಶೇ.50 ರಷ್ಟು ನಾಶವನ್ನು ತಗ್ಗಿಸಿದರೂ ಉಂಟಾಗುವ ನಷ್ಟವನ್ನು ಲೆಕ್ಕಿಸಲು ಸಾಧ್ಯವಿಲ್ಲ ಎಂದು ಪರಿಸರವಾದಿಗಳು ಪ್ರತಿಕ್ರಿಯಿಸಿದ್ದಾರೆ.
ಲೋಡ್ ಶೆಡ್ಡಿಂಗ್ ಜಾರಿ ಮಾಡಿಲ್ಲ : ಗ್ರಾಮೀಣ ಪ್ರದೇಶದಲ್ಲಿ 4ರಿಂದ 6 ಗಂಟೆಗಳ ಕಾಲ ಸಿಂಗಲ್ ಫೇಸ್ ವಿದ್ಯುತ್ ನೀಡಲಾಗುತ್ತಿದೆ. ಅದೇ ರೀತಿ ನಗರ ಪ್ರದೇಶದಲ್ಲಿ ವಿದ್ಯುತ್ ಪೂರೈಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿರುವುದರಿಂದ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿಲ್ಲ. ಕೆಲವು ಕಡೆ ತಾಂತ್ರಿಕ ದೋಷಗಳಿಂದ ವಿದ್ಯುತ್ ಕೈಕೊಡಬಹುದು. ಬೆಸ್ಕಾಂ ಹಾಗೂ ಇತರೆ ಪ್ರಸರಣ ಕೇಂದ್ರಗಳ ಸಹಾಯವಾಣಿಗೆ ಕರೆ ಮಾಡಿ ಸಹಾಯ ಪಡೆಯಬಹುದು ಎಂದರು.