ನಗರದಲ್ಲಿ ಇನ್ನೂ ಹೆಚ್ಚಾಗಲಿ ಮಳೆ ಸುಗ್ಗಿ ಕೇಂದ್ರ
ಮಳೆ ನೀರು ಕೊಯ್ಲು ಪದ್ಧತಿ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸದುದ್ದೇಶದಿಂದ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಈ ಥೀಮ್ ಪಾರ್ಕ್ನ್ನು ನಿರ್ಮಾಣ ಮಾಡಲಾಗಿದೆ. ಮಳೆ ನೀರು ಕೊಯ್ಲು ಬಗ್ಗೆ ಪ್ರಾತ್ಯಕ್ಷಿಕೆಗಳನ್ನು ತೋರಿಸಲು ವ್ಯವಸ್ಥೆಯಿದೆ. 'ತುಂತುರು" ಮಾಹಿತಿ ಕೇಂದ್ರ ವ್ಯವಸ್ಥೆ, ನೀರು ಸರಬರಾಜು ಹಾಗೂ ತ್ಯಾಜ್ಯ ನೀರು ಸಂಸ್ಕರಣೆ ಸಂಬಂಧದ ಮಾದರಿಗಳನ್ನು ರೂಪಿಸಲಾಗಿದೆ.
ಮಾಹಿತಿ ಕೇಂದ್ರವು 70 ಆಸನಗಳ ಸುಸಜ್ಜಿತ ಥಿಯೇಟರ್ ಒಳಗೊಂಡಿದ್ದು, ನೀರಿಗೆ ಸಂಬಂಧಿಸಿದ ಕಿರು ಚಿತ್ರಗಳನ್ನು ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಬಯಲು ರಂಗಮಂದಿರವನ್ನು ಇಲ್ಲಿ ಸುಸಜ್ಜಿತ ನಿರ್ಮಿಸಲಾಗಿದ್ದು, ಸಂಗೀತ ಹಾಗೂ ಇನ್ನಿತರ ಉಪಕರಣಗಳ ಪ್ರದರ್ಶನ ನಡೆಯುವ ವ್ಯವಸ್ಥೆ ಮಾಡಲಾಗಿತ್ತು.
ಮಳೆ ನೀರು ಕೊಯ್ಲು, ಅಳವಡಿಕೊಯ್ಲಿಗೆ ಅವಶ್ಯಕವಾದ ಫಿಲ್ಟರ್ ಹಾಗೂ ಇನ್ನಿತರ ಉಪಕರಣಗಳ ಪ್ರದರ್ಶನವಿದೆ. ಥೀಮ್ ಪಾರ್ಕ್ನಲ್ಲಿ ತರಬೇತಿ ಹೊಂದಿದ ಪ್ಲಂಬರ್ಸ್ ಪಟ್ಟಿ ಮಳೆ ನೀರು ಕೊಯ್ಲಿಗೆ ಸಂಬಂಧಿಸಿದ ಪುಸ್ತಕಗಳು ಲಭ್ಯ. ಇದಲ್ಲದೆ, ಸಹಾಯ ಕೇಂದ್ರವನ್ನು ಪ್ರಾರಂಭಿಸಿದ್ದು, ಸಾರ್ವಜನಿಕ ಸಮಸ್ಯೆಗಳಿಗೆ ದೂರವಾಣಿ ಮೂಲಕ ಪರಿಹಾರ ನೀಡಲಾಗುತ್ತದೆ. ವಾರಕ್ಕೊಮ್ಮೆ ನಿಗದಿತ ದಿನದಂದು ಸಾರ್ವಜನಿಕರಿಗೆ ತಜ್ಞರಿಂದ ಮಾರ್ಗದರ್ಶನ ನೀಡಲಾಗುತ್ತದೆ.
ಸರ್ಕಾರದ ಮಾತು ಕೇಳಿ: ನಗರದಲ್ಲಿನ 24 ಸಾವಿರ ಮನೆಗಳಲ್ಲಿ ಮಳೆನೀರು ಸಂಗ್ರಹ ಪದ್ದತಿಯನ್ನು ಅಳವಡಿಸಿಕೊಳ್ಳಲಾಗಿದೆ. ಈ ಸಂಖ್ಯೆ 5 ಲಕ್ಷಕ್ಕೆ ಹೆಚ್ಚಾಗಬೇಕು. ಈ ಮೂಲಕ ಮಳೆ ನೀರನ್ನು ಸಂರಕ್ಷಣೆ ಹಾಗೂ ನೀರನ್ನು ಮಿತವಾಗಿ ಬಳಸಬೇಕು. ಸರ್ಕಾರ ಮಳೆ ಕೊಯ್ಲು ಯೋಜನೆ ಜಾರಿಗೆ ತಂದಿದೆ ಆದರೆ, ಸಾರ್ವಜನಿಕರಿಗೆ ಇದರ ಬಗ್ಗೆ ಸರಿಯಾದ ಅರಿವಿಲ್ಲ. ಈ ಮಾಹಿತಿ ಕೇಂದ್ರಕ್ಕೆ ಬಂದರೆ ಮಳೆಕೊಯ್ಲಿನ ಅಗತ್ಯತೆಯ ಅರಿವಾಗುತ್ತದೆ. ಎಲ್ಲರೂ ಮಳೆಕೊಯ್ಲು ಪದ್ಧತಿ ಅಳವಡಿಸಿಕೊಂಡರೆ ಸುಮಾರು 250 ರಿಂದ 350 ಕೋಟಿ ರು ಉಳಿತಾಯ ಸಾಧ್ಯವಿದೆ ಎಂದು ಗೃಹ ಸಚಿವ ಆರ್.ಅಶೋಕ್ ಕರೆ ನೀಡಿದರು.