ಸವಣೂರಲ್ಲಿ ಸತ್ಯಬೋಧರ 226ನೇ ಆರಾಧನೆ
ನಗರದ ಶ್ರೀ ಸತ್ಯಬೋಧ ಸ್ವಾಮಿಗಳ ಮೂಲವೃಂದಾವನ ಸನ್ನಿಧಿಯಲ್ಲಿ ಮೂರು ದಿನಗಳ ಪರ್ಯಂತ ಜರುಗಿದ ಆರಾಧನಾ ಮಹೋತ್ಸವವನ್ನು, ಪಂ. ರಂಗಾಚಾರ್ಯ ಗುತ್ತಲ ಹಾಗೂ ಶ್ರೀಮಠದ ಪರ್ಯಾಯಸ್ಥರಾದ ಗುರುರಾಜಾಚಾರ್ಯ ರಾಯಚೂರ ಅವರ ನೇತೃತ್ವದಲ್ಲಿ ಕೈಗೊಳ್ಳಲಾಯಿತು.
ಆರಾಧನಾ ಮಹೋತ್ಸವದ ಅಂಗವಾಗಿ ಬೃಹತಿ ಸಹಸ್ರಯಾಗ, ಧನ್ವಂತರಿ ಹೋಮ, ಉದಯರಾಗ, ರಜತ ರಥೋತ್ಸವ, ಪಂಚಾಮೃತ, ಕ್ಷೀರಾಭಿಷೇಕ, ಸುವರ್ಣ ಕವಚ ಅಲಂಕಾರ, ಕನಕಾಭಿಷೇಕ, ಹಸ್ಥೋದಕ, ತೀರ್ಥ ಪ್ರಸಾದ ವಿತರಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದರು. ಪ್ರತಿನಿತ್ಯ ಸಂಜೆ ಪಂಡಿತರಿಂದ ಉಪನ್ಯಾಸ, ಪ್ರವಚನ, ಅಷ್ಟಾವಧಾನ ಸೇವಾ, ತೊಟ್ಟಿಲ ಪೂಜಾ, ಪಲ್ಲಕ್ಕಿ ಉತ್ಸವಗಳು, ಭಜನಾ ಕಾರ್ಯಕ್ರಮ ಜರುಗಿದವು.
ಗಾಯಕರಾದ ಮೈಸೂರಿನ ರಾಮಚಂದ್ರ ಅವರಿಂದ ದಾಸ ಸಾಹಿತ್ಯ ಕಾರ್ಯಕ್ರಮ ಹಾಗೂ ರಾಯಚೂರಿನ ಹರಿದಾಸ ಹವ್ಯಾಸ ಕಲಾವಿದರ ಸಂಘದ ಸದಸ್ಯರಿಂದ ಪ್ರದರ್ಶನಗೊಂಡ ದಾಸೋಹಂ ತವ ದಾಸೋಹಂ'' ಎಂಬ ನಾಟಕ ಪ್ರದರ್ಶನ ಆರಾಧನಾ ಮಹೋತ್ಸವದಲ್ಲಿ ಜನಾಕರ್ಷಣೆಯನ್ನು ಪಡೆದುಕೊಂಡವು. ನಾಡಿನ ಹಲವಾರು ಪಂಡಿತರು, ಸಹಸ್ರಾರು ಭಕ್ತ ಸಮೂಹ ಶ್ರೀ ಸತ್ಯಬೋಧರ ಆರಾಧನಾ ಮಹೋತ್ಸವದಲ್ಲಿ ಭಾಗಿಗಳಾಗಿದ್ದರು. ಪರ್ಯಾಯಸ್ಥರಾದ ಭೀಮಾಚಾರ್ಯ ರಾಯಚೂರ, ಗೋಪಾಲಾಚಾರ್ಯ ರಾಯಚೂರ ಕಾರ್ಯಕ್ರಮ ನಿರ್ವಹಿಸಿದರು.
ಶ್ರೀವಾದಿರಾಜರ ಆರಾಧನಾ : ಜ್ಞಾನಿವರೇಣ್ಯರಾದ ಶ್ರೀ ವಾದಿರಾಜ ಗುರುಸಾರ್ವಭೌಮರ ಆರಾಧನಾ ಮಹೋತ್ಸವವನ್ನು ಸವಣೂರಿನ ವಾದಿರಾಜ ಗುರುಗಳ ಮೃತ್ತಿಕಾ ವೃಂದಾವನ ಮಠದಲ್ಲಿ ಮಂಗಳವಾರ, ಮಾ.22ರಂದು ಕೈಗೊಳ್ಳಲಾಗುತ್ತದೆ. ಕಾರ್ಯಕ್ರಮದ ಅನ್ವಯ ಉದಯರಾಗ, ಅಷ್ಟೋತ್ತರ, ಪವಮಾನ ಹೋಮ, ಕ್ಷೀರಾಭಿಷೇಕ, ರಜತ ಪಾದುಕಾ ಸಮರ್ಪಣೆ, ಹಸ್ಥೋದಕ, ತೀರ್ಥಪ್ರಸಾದ ವಿತರಣೆ, ಭಜನಾ ಮಂಡಳಿಯಿಂದ ಹರಿ ಭಜನೆ, ಅಷ್ಟಾವಧಾನ ಸೇವೆಗಳು ನೆರವೇರಲಿದೆ. ರಾಮಾಚಾರ್ಯ ನಾಮಾವಳಿ ಅವರು ಆರಾಧನಾ ಮಹೋತ್ಸವವನ್ನು ನಿರ್ವಹಿಸಲಿದ್ದಾರೆ.