ನೀರಾಗೂ ಪೇಜಾವರ ಮಠಕ್ಕೂ ಏನು ಲಿಂಕ್?
ನೀರಾ ರಾಡಿಯಾ ಜೊತೆ ಹೇಳಿಕೊಳ್ಳುವಂತಹ ಸಂಬಂಧ ಇಲ್ಲ ಎಂದಿದ್ದ ಪೇಜಾವರಶ್ರೀ ಈ ಬೆಳವಣಿಗೆ ಯಿಂದ ಇರಿಸುಮುರಿಸಿಗೆ ಒಳಗಾಗಿದ್ದಾರೆ. ಇದೀಗ ಪೇಜಾವರ ಮಠಕ್ಕೆ ಸಂಬಂಧ ಪಟ್ಟ ಹಲವಾರು ಟ್ರಸ್ಟ್ಗಳಿಗೆ ನೀರಾ ರಾಡಿಯಾ ಯಥೇಚ್ಛ ಹಣ ಸಲ್ಲಿಸಿರುವುದು ಬೆಳಕಿಗೆ ಬಂದಿದೆ. ಮಠದ ಚಿರಾಸ್ತಿ, ಚರಾಸ್ತಿ ಅಭಿವೃದ್ಧಿಗೆ ರಾಡಿಯಾ ಕೊಡುಗೆ ಅಪಾರ.
ಆರಂಭದಲ್ಲಿ ನೀರಾ ಹೆಸರು ಪೇಜಾವರ ಮಠದೊಂದಿಗೆ ತಳುಕು ಹಾಕಿಕೊಂಡಾಗ 'ಮಠದ ಭಕ್ತರಲ್ಲಿ ಅವರೂ ಕೂಡಾ ಒಬ್ಬರೂ ಇದಕ್ಕಿಂತ ಹೆಚ್ಚಿನ ಸಂಬಂಧವಿಲ್ಲ" ಎಂದು ವಿಶ್ವೇಶ ತೀರ್ಥರು ಹೇಳಿದ್ದರು. ನಂತರ ನೀರಾ ರಾಡಿಯಾ ನನಗೆ ಚೆನ್ನಾಗಿ ಗೊತ್ತಿದ್ದವರು. ಅವರು ಮಠದ ಭಕ್ತೆ. ಹಲವಾರು ರೀತಿಯ ಸಹಾಯವನ್ನು ಮಾಡಿದ್ದಾರೆ ಎಂದು ಹೇಳಿದ್ದರು.
ಬೇರೆ ಬೇರೆ ಹೆಸರುಗಳಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ, ಬೇರೆ ಬೇರೆ ಉದ್ದೇಶಗಳಲ್ಲಿ ಮಠದ ಟ್ರಸ್ಟ್ ಗಳಿಗೆ ಹಣ ಸಂದಾಯವಾಗಿದೆ. ನೀರಾ ರಾಡಿಯಾ ಪೇಜಾವರ ಮಠಕ್ಕೆ ಲಕ್ಷಾಂತರ ಬೆಲೆ ಬಾಳುವ ಮೂರು ಕಾರುಗಳನ್ನು ಕೊಟ್ಟಿದ್ದಾರೆ ಎಂಬ ವಿಷಯವೂ ಬಹಿರಂಗಗೊಂಡಿದೆ. ರಾಡಿಯಾ ಕೊಟ್ಟಿರುವ ವಾಹನಗಳಲ್ಲಿ ಒಂದು ಇನೋವಾ, ಟೆಂಪೋ ಟ್ರಾವೆಲರ್ಸ್ ಸೇರಿದಂತೆ ಒಟ್ಟು ಆರು ಕಾರುಗಳಿದ್ದು, ಇನ್ನೂ ಹತ್ತಾರು ವಾಹನಗಳು ಸೇರಿದೆ ಎನ್ನಲಾಗಿದೆ. ಇನ್ನೂ ಕೆಲವು ವಾಹನಗಳು ರಾಜ್ಯ ಬಿಜೆಪಿ ನಾಯಕರುಗಳಿಗೆ ಮಠದ ಕಡೆಯಿಂದ ಉಡುಗೊರೆಯಾಗಿ ಸಿಕ್ಕಿದೆ ಎಂಬ ವಿಷಯವೂ ಹೊರಬಿದ್ದಿದೆ.
ಈ ಹಿಂದೆ ಬಿಜೆಪಿ ಪ್ರಭಾವಿ ನಾಯಕ ಅನಂತ್ ಕುಮಾರ್ ಅವರು ವಿಮಾನಯಾನ ಸಚಿವರಾಗಿದ್ದಾಗ ನೀರಾ ರಾಡಿಯಾ ಪರಿಚಯಿಸಿದ್ದೇ ಪೇಜಾವರ ಶ್ರೀಗಳು ಎಂಬ ಮಾಹಿತಿ ಹೊರ ಬಿದ್ದಿತ್ತು. ನಂತರ ದೆಹಲಿಯಲ್ಲಿರುವ ವಸಂತ್ ಕುಂಜ್ ಭೂಮಿ ಕೂಡಾ ರಾಡಿಯಾ ನೀಡಿದ್ದು ಎಂಬ ಆರೋಪ ಎದುರಾಗಿತ್ತು. ಆದರೆ, ಎರಡನ್ನೂ ಅಲ್ಲಗೆಳೆದಿದ್ದ ವಿಶ್ವೇಶ ತೀರ್ಥ ಸ್ವಾಮೀಜಿಗಳು, ದೆಹಲಿಯ ಭೂಮಿ ರಾಮ ವಿಠಲ ಶಿಕ್ಷಣ್ ಸೇವಾ ಸಮಿತಿಗೆ ಸೇರಿದ್ದು, ರಾಡಿಯಾಗೂ ಮಠಕ್ಕೂ ಅಂಥ ಸಂಪರ್ಕವಿಲ್ಲ ಎಂದಿದ್ದರು.