ಪ್ರಧಾನಿ ಸಿಂಗ್ ವಿರುದ್ಧ ತಿರುಗಿಬಿದ್ದ ಅಸ್ಸಾಂಜ್
ವಿಡಿಯೋ: ಪ್ರಧಾನಿ ಮಾತು ಸಮರ್ಪಕವಾಗಿಲ್ಲ
2008ರ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಯಾರಿಗೂ ಲಂಚ ನೀಡಿಲ್ಲ. ವಿಕಿಲೀಕ್ಸ್ ದಾಖಲೆಯಿಂದ ಏನನ್ನೂ ಸಾಬೀತು ಪಡಿಸಲು ಸಾಧ್ಯವಿಲ್ಲ. ವಿಕಿಲೀಕ್ಸ್ ನ ಸತ್ಯಾಸತ್ಯತೆ ಬಗ್ಗೆ ಪ್ರಶ್ನಿಸಿದ ಪ್ರಧಾನಿ, ವಿಕಿಲೀಕ್ಸ್ ವರದಿಯನ್ನು ದೃಢೀಕರಿಸಲಾಗಿಲ್ಲ. ವಿಕಿಲೀಕ್ಸ್ ಪ್ರಕಟಿಸಿದಂತೆ ವೋಟಿಗಾಗಿ ನೋಟು ಕ್ರಿಯೆಗೆ ಕಾಂಗ್ರೆಸ್ ನ ಯಾವ ವ್ಯಕ್ತಿಯನ್ನು ನಾನು ನಿಯುಕ್ತಿಗೊಳಿಸಿಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ಮಾ.18ರಂದು ರಾಜ್ಯ ಸಭೆಯಲ್ಲಿ ಸ್ಪಷ್ಟಪಡಿಸಿದ್ದರು.
ವಿಕಿಲೀಕ್ಸ್ ನ ಸತ್ಯಾಸತ್ಯತೆ ಬಗ್ಗೆ ಪ್ರಶ್ನಿಸಿರುವ ಪ್ರಧಾನಿ, ತಮ್ಮ ಪಕ್ಷದಲ್ಲಿ ಭ್ರಷ್ಟರ ಇರುವಿಕೆಯನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಂತ್ತಾಗಿದೆ. ವಿಕಿಲೀಕ್ಸ್ ಕೇಬಲ್ಸ್ ನಲ್ಲ್ಲಿರುವುದು ಕೇವಲ ಅಭಿಪ್ರಾಯ ಸಂಗ್ರಹವಲ್ಲ. ಯುಎಸ್ ರಾಯಭಾರಿಗಳು, ಉನ್ನತ ಅಧಿಕಾರಿಗಳಿಂದ ಸಿಕ್ಕ ವರದಿ ಆಧಾರಿತವಾಗಿದೆ. ಲಂಚ ಪ್ರಕರಣದ ಬಗ್ಗೆ ನೀಡಿರುವ ವಿಕಿಲೀಕ್ಸ್ ಮಾಹಿತಿ ತಪ್ಪು ಎನ್ನುವುದಾದರೆ ಅದಕ್ಕೆ ಯುಎಸ್ ಅಧಿಕಾರಿಗಳೇ ಉತ್ತರಿಸಬೇಕಾಗುತ್ತದೆ.
ಹಿರಿಯ ಕಾಂಗ್ರೆಸ್ ನಾಯಕರಿಂದ ಯುಎಸ್ ರಾಯಭಾರಿ ಕಚೇರಿಗೆ ಹರಿದು ಬಂದ ಮಾಹಿತಿಯಂತೆ ಅಜಿತ್ ಸಿಂಗ್ ಅವರ ರಾಷ್ಟೀಯ ಲೋಕ್ ದಳ(RLD) ಪಕ್ಷದ ನಾಲ್ವರು ಸಂಸದರಿಗೆ ಸುಮಾರು 100 ಕೋಟಿ ರು.ವರೆಗೂ ಲಂಚದ ಹಣ ಸಂದಾಯವಾಗಿದೆ. ಹಾಗಾಗಿ ವಿಶ್ವಾಸಮತದಲ್ಲಿ ಮನಮೋಹನ್ ಸಿಂಗ್ ಸುಲಭವಾಗಿ ಗೆಲ್ಲಲು ಸಾಧ್ಯವಾಗಿದೆ.
ವಿಕಿಲೀಕ್ಸ್ ನಿಂದ ಹೊರಬಿದ್ದಿರುವ ಸತ್ಯ ಎಲ್ಲರಿಗೂ ತಿಳಿದಿರುವ ಓಪನ್ ಸೀಕ್ರೇಟ್ ಆಗಿರುವುದರಿಂದ, ಯುಪಿಎ ಸರ್ಕಾರಕ್ಕೇನೂ ಬಾಧಕವಿಲ್ಲ. ಆದರೆ, ಉತ್ತಮ ಮುತ್ಸದ್ಧಿ ಎಂದು ಹೆಸರು ಗಳಿಸಿದ್ದ ಮನಮೋಹನ್ ಸಿಂಗ್ ಅವರ ರಾಜಕೀಯ ಜೀವನದಲ್ಲಿ ಕಪ್ಪುಚುಕ್ಕೆಯಾಗಿ ಕಾಣಿಸಿಕೊಳ್ಳಲಿದೆ. ಇದು ಆರ್ಥಿಕವಾಗಿ ಕೂಡಾ ಪರಿಣಾಮ ಬೀರಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.