ಕಾಶಿಯಲ್ಲಿ ಕನ್ನಡ ಕಂಪು ಬೀರಿದ ವಾರ್ತೆ
ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಹೊರನಾಡ ಕನ್ನಡಿಗರಿಗೆ ಕನ್ನಡದ ಅಭಿರುಚಿಯನ್ನು ಬೆಳೆಸುವ ಮತ್ತು ಇತರ ಭಾಷೆಗಳ ಜನತೆಗೆ ಕನ್ನಡ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದಿಂದ ವಾರ್ತಾ ಇಲಾಖೆಯ, ನವದೆಹಲಿಯ ಕರ್ನಾಟಕ ವಾರ್ತಾ ಕೇಂದ್ರವು ಕಾಶಿ ಕನ್ನಡ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಉತ್ಸವವನ್ನು ಜಂಗಮವಾಡಿ ಮಠದ ಡಾ.ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಾರ್ತಾ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ರಮೇಶ್ ಝಳಕಿ ಮಾತನಾಡಿ, ಕನ್ನಡದ ಸಂಸ್ಕೃತಿ ಮತ್ತು ಸರ್ಕಾರದ ಜನಪರ ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ಇತರ ರಾಜ್ಯಗಳಲ್ಲೂ ಪರಿಚಯಿಸಬೇಕೆಂಬ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಹಲವಾರು ದಶಕಗಳಿಂದ ಸರ್ವೋಜನಃ ಸುಖಿನೋ ಭವಂತು ಎಂಬಂತೆ ಸಮಾಜದ ಎಲ್ಲ ವರ್ಗಗಳ ಜನತೆಯ ಕಲ್ಯಾಣಕ್ಕೆ ಶ್ರಮಿಸುತ್ತಿರುವ ಕಾಶಿಯ ಜಂಗಮವಾಡಿ ಮಠದ ಕಾರ್ಯ ಅನನ್ಯ ಎಂದು ಜಂಗಮವಾಡಿ ಮಠದ ಕಾರ್ಯವನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ವಾರ್ತಾ ಇಲಾಖೆ ನಿರ್ದೇಶಕ ಡಾ.ಮುದ್ದುಮೋಹನ್, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಯಲ್ಲೆ ರಾಜ್ಯ ಸರ್ಕಾರದ ಜನಪರ ಯೋಜನೆಗಳಾದ ಸಂಧ್ಯಾ ಸುರಕ್ಷಾ, ಭಾಗ್ಯಲಕ್ಷ್ಮೀ, ಸೈಕಲ್ ವಿತರಣೆ ಹೀಗೆ ಹತ್ತಾರೂ ಯೋಜನೆಗಳ ಬಗ್ಗೆ ಜನತೆಗೆ ಮಾಹಿತಿ ನೀಡಬೇಕು ಹಾಗೂ ದೇಶದಲ್ಲೇ ಅಭಿವೃದ್ಧಿಯ ನಕ್ಷೆಯಲ್ಲಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕ ರಾಜ್ಯದ ಅಭಿವೃದ್ಧಿಯ ಚಿತ್ರಣವನ್ನು ಹೊರನಾಡ ಕನ್ನಡಿಗರಿಗೆ ಮತ್ತು ಇತರ ಭಾಷೆಗಳ ಜನತೆಗೆ ಪರಿಚಯಿಸಬೇಕೆಂಬುದು ವಾರ್ತಾ ಇಲಾಖೆ ಉದ್ದೇಶ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಆರ್ಶೀವಚನ ನೀಡಿದ ಡಾ.ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಅವರು, ಪ್ರತಿಯೊಬ್ಬರೂ ಮಾತೃಭಾಷೆ ಮತ್ತು ಮಾತೃಭೂಮಿಯನ್ನು ಸದಾ ಗೌರವಿಸಬೇಕು ಎಂದರು. ಕಾಶಿಯ ಜಂಗಮವಾಡಿ ಮಠವು ಸಹಿಷ್ಠುತ ಮನೋಭಾವದ ಸಂಕೇತ. ಜಂಗಮವಾಡಿ ಮಠಕ್ಕೆ ಮೊಘಲ ಸಾಮ್ರಾಜ್ಯದ ಅಕ್ಬರ್, ಷಹಜಹಾನ್, ಔರಂಗಜೇಬ್, ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ದಾನ ನೀಡಿದ್ದಾರೆ. ಇಂತಹ ಜಂಗಮವಾಡೀ ಮಠದಲ್ಲಿ ವಾರ್ತಾ ಇಲಾಖೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸ ತಂದಿದೆ ಎಂದು ಅರ್ಶೀವಚನದಲ್ಲಿ ತಿಳಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಕಾಶಿಪೀಠದ ವಿದ್ಯಾರ್ಥಿಗಳಿಂದ ವೇದಘೋಷ ಮತ್ತು ಸಿದ್ದಾಂತ ಶಿವಮಣಿ ಮಂಗಲಶ್ಲೋಕ ಪಠಿಸಿದರು. ಇದಕ್ಕೂ ಮೊದಲು ಮಠದ ಭಕ್ತಾಧಿಗಳಾದ ಉಕ್ರೇನ್ ದೇಶದ ಯೂಲಿಯ ರಷ್ಯಾ ದೇಶದ ತತ್ಸಾನಾ ಇವರುಗಳು ಕನ್ನಡದಲ್ಲಿ ವಚನ ಪಠಿಸುವ ಮೂಲಕ ಸಭಿಕರ ಗಮನ ಸೆಳೆದರು. ವೇದಿಕೆಯಲ್ಲಿ ಅಬ್ಬೆ ತುಮಕೂರಿನ ಶ್ರೀ ಶಿವಚಾರ್ಯ ರತ್ನ ಗಂಗಾಧರ ಮಹಾಸ್ವಾಮೀಜಿ ಮತ್ತು ಕಾಶಿ ಕನ್ನಡ ಸಂಘದ ಅಧ್ಯಕ್ಷ ವಿಶ್ವನಾಥ್ ರಾವ್, ಜಂಗಮವಾಡೀ ಮಠದ ಡಾ.ಕೆ.ಬಿ. ಗೌಡರ್ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಜಿ.ಎಸ್.ವೆಂಕಟೇಶ್ ರಾವ್ ಅವರು ಸ್ವಾಗತಿಸಿದರೆ, ಪ್ರೊಫೆಸರ್ ಪಿ.ಎಸ್ ಬ್ಯಾಡಗಿ ನಿರೂಪಿಸಿದರು, ನವದೆಹಲಿಯ ಕರ್ನಾಟಕ ವಾರ್ತಾ ಕೇಂದ್ರದ ಪ್ರಭಾರ ಉಪ ನಿರ್ದೇಶಕ ಎಲ್.ಪಿ. ಗಿರೀಶ್ ಅವರು ವಂದಿಸಿದರು.