ಮೆಟ್ರಿ ಬಳಿ ಬೋನಿಗೆ ಬಿದ್ದ ನರಭಕ್ಷಕ ಚಿರತೆ
8 - 10 ವರ್ಷ ವಯಸ್ಸಿನ ಹೆಣ್ಣು ಚಿರತೆಯೊಂದು ಮೆಟ್ರಿ, ದೇವಲಾಪುರ ಸೇರಿದಂತೆ ವಿವಿಧ ಗ್ರಾಮಗಳ ಅಡವಿ ಪ್ರದೇಶಗಳಲ್ಲಿ ಸಂಚರಿಸುತ್ತಿತ್ತು. ನಾಯಿ, ಮೇಕೆಗಳನ್ನು ಬೇಟೆಯಾಡುತ್ತಿತ್ತು. ಅಲ್ಲದೇ, ಕಬ್ಬೇರು ಜಡಿಯಪ್ಪ ಎನ್ನುವಾತನ ಮೇಲೆ ಮಾರ್ಚ್ 10ರಂದು ಎರಗಿ ಗಾಯಗೊಳಿಸಿತ್ತು. ಕಬ್ಬೇರು ಜಡಿಯಪ್ಪನ ಮೇಲೆ ಚಿರತೆ ಎರಗಿ ಗಾಯಗೊಳಿಸಿದ ನಂತರ ಚಿರತೆಯನ್ನು ಹಿಡಿಯಲು ಯತ್ನಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಅಲ್ಲಲ್ಲಿ ಬೋನುಗಳನ್ನು ಇರಿಸಿ, ಚಿರತೆಗೆ ಪ್ರಿಯವಾದ ನಾಯಿಗಳನ್ನು ಕಟ್ಟಿಹಾಕಿತ್ತು. ಶುಕ್ರವಾರ ನಸುಕಿನಲ್ಲಿ ಆಹಾರ ಹುಡುಕಿಕೊಂಡು ಬಂದ ಚಿರತೆ ನಿರಾಯಾಸವಾಗಿ ಬೋನಿಗೆ ಸೇರಿದೆ.
ಚಿರತೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಪ್ರಯತ್ನ ಯಶಸ್ವಿಯಾಗಿದೆ. ಬೋನಿಗೆ ಸೇರಿದ ಚಿರತೆ ಹೆಣ್ಣು ಚಿರತೆಯಾಗಿದ್ದು ಮರಿಗಳಿಗೆ ಆಹಾರ ಹುಡುಕುತ್ತ ಈ ಅಡವಿಯನ್ನು ಪ್ರವೇಶಿಸಿತ್ತು. ಚಿರತೆ ಮರಿಗಳು ಕೂಡ ಈ ಗ್ರಾಮಗಳ ಸುತ್ತಲಿನ ಪ್ರದೇಶಗಳಲ್ಲಿ ಇರಬಹುದೆಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ.
ಮರಿಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಬದ್ಧವಾಗಿದೆ. ಮರಿಗಳನ್ನು ಹುಡುಕುವಲ್ಲಿ ಸಿಬ್ಬಂದಿ ಶ್ರಮಿಸುತ್ತಿದೆ. ಚಿರತೆ ಮರಿಗಳನ್ನು ಸಾರ್ವಜನಿಕರು ಎಲ್ಲಿಯಾದರೂ ಕಂಡಲ್ಲಿ ಇಲಾಖೆಗೆ ಮಾಹಿತಿ ನೀಡಬೇಕು ಎಂದು ದರೋಡಿ ಕರಡಿಧಾಮದ ಅಧಿಕಾರಿ ರವೀಂದ್ರ ಅವರು ಕೋರಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳಾದ ಶಕುಂತಲ, ಎಂ.ಎನ್. ಕಿರಣ್, ದೇವಕ್ಕನವರ್, ಕುಮಾರ್ ಚಿರತೆಯನ್ನು ಹಿಡಿಯುವಲ್ಲಿ ಶ್ರಮಿಸಿದ್ದಾರೆ. ಬೋನು ಸೇರಿರುವ ಚಿರತೆ ಶುಕ್ರವಾರವೇ ದಾಂಡೇಲಿ ವಲಯಾರಣ್ಯ ಪ್ರದೇಶಕ್ಕೆ ರವಾನೆಯಾಗಿದೆ.