ಸಂಸತ್ತು: ವಿಕಿಲೀಕ್ಸ್ ಆರೋಪ ಅಲ್ಲಗೆಳೆದ ಪ್ರಧಾನಿ
ವಿಕಿಲೀಕ್ಸ್ ನ ಸತ್ಯಾಸತ್ಯತೆ ಬಗ್ಗೆ ಪ್ರಶ್ನಿಸಿದ ಪ್ರಧಾನಿ, ವಿಕಿಲೀಕ್ಸ್ ವರದಿಯನ್ನು ದೃಢೀಕರಿಸಲಾಗಿಲ್ಲ. 2008ರಲ್ಲಿ ನಡೆದಿದೆ ಎನ್ನಲಾದ ಓಟಿಗಾಗಿ ನೋಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದೀಯ ಸಮಿತಿ ತನಿಖೆ ನಡೆಸಿಯಾಗಿದೆ. ಸಮಿತಿ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ. ಯುಪಿಎ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದು ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದು ಸಹಜ. ಆದರೆ, ವಿಶ್ವಾಸಮತ ಯಾಚನೆಯಲ್ಲಿ ಸಂದರ್ಭದಲ್ಲಿ ಯುಪಿಎಗೆ ಸಂಪೂರ್ಣ ಬಹುಮತ ಲಭಿಸಿದೆ.
2008ರ ಜುಲೈ 22 ರಂದು ನಡೆದಿದ್ದ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಸರ್ಕಾರ ಉಳಿಸಿಕೊಳ್ಳಲು ಆರ್ ಎಲ್ ಡಿ ಸಂಸದರಿಗೆ ಸುಮಾರು 60 ಕೋಟಿ ಲಂಚ ನೀಡಲಾಗಿದೆ ಎಂದು ವಿಕಿಲೀಕ್ಸ್ ವರದಿ ಮಾಡಿತ್ತು. ಅಲ್ಲದೆ, ಪ್ರಣಬ್ ಮುಖರ್ಜಿಯವರನ್ನು ಹಣಕಾಸು ಸಚಿವರನ್ನಾಗಿ ಆಯ್ಕೆ ಮಾಡಿರುವುದರಲ್ಲಿ ಇರುವ ರಾಜಕೀಯ ತಂತ್ರದ ಬಗ್ಗೆ ಕೂಡಾ ವಿಕಿಲೀಕ್ಸ್ ಪ್ರಶ್ನಿಸಿತ್ತು. ಭಾರತದ ಆರ್ಥಿಕ ನೀತಿಗಳು, ಸಚಿವರುಗಳ ಬದಲಾವಣೆ, ಸಚಿವರುಗಳ ನೇಮಕ, ಇತರ ಆಂತರಿಕ ವಿಚಾರಗಳ ಕುರಿತು ಅಮೆರಿಕಕ್ಕೆ ಇರುವ ನಿಲುವೇನು ಎಂಬುದರ ಬಗ್ಗೆ ವಿಕಿಲೀಕ್ಸ್ ಮಾಹಿತಿ ನೀಡಿತ್ತು. ನೈತಿಕತೆ ಕಳೆದುಕೊಂಡಿರುವ ಯುಪಿಎ ಸರ್ಕಾರ, ಪ್ರಜಾಪ್ರಭುತ್ವವನ್ನು ಬಲಿ ಕೊಟ್ಟಿದೆ. ಮನಮೋಹನ್ ಸಿಂಗ್ ರಾಜೀನಾಮೆ ನೀಡಬೇಕು ಎಂದು ವಿಪಕ್ಷಗಳು ಆಗ್ರಹಿಸಿದ್ದವು.