ಎಲ್ಲರ ಕನ್ನಡ ಓದುಕೂಟಕ್ಕೆ ತಪ್ಪದೇ ಬನ್ನಿ
ನುಡಿಯೆನ್ನುವುದು ಒಂದು ಜನಾಂಗದ ಸಂಸ್ಕೃತಿ, ಇತಿಹಾಸ, ಬದುಕುಗಳಿಗೆ ಹಿಡಿದ ಕನ್ನಡಿ. ಸಮಾಜವೊಂದರ ಏಳಿಗೆಯ ಜೀವನಾಡಿ ಅದರ ನುಡಿ. ಪ್ರಪಂಚದ ಮುಂದುವರೆದ ಜನಾಂಗಗಳೆಲ್ಲಾ ತಮ್ಮ ಕಲಿಕೆ, ದುಡಿಮೆಗಳನ್ನು ತಾಯ್ನುಡಿಯ ಸುತ್ತಲೇ ಕಟ್ಟಿಕೊಂಡಿರುವುದನ್ನು ಮುಂದುವರೆದ ದೇಶಗಳನ್ನು ನೋಡಿ ತಿಳಿಯಬಹುದು. ಕನ್ನಡಿಗರ ಏಳಿಗೆಗೂ ಕನ್ನಡವೇ ಸಾಧನ. ಆದರೆ ಕನ್ನಡ ನುಡಿಯು ಇಂದು ಕನ್ನಡಿಗರ ಕಲಿಕೆ ಬದುಕುಗಳನ್ನು ಕಟ್ಟಿಕೊಡಲು ಮತ್ತಷ್ಟು ಶಕ್ತವಾಗಬೇಕಾಗಿದೆ. ಹಾಗಾಗಲು, ನಮ್ಮ ನುಡಿಯ ವೈಜ್ಞಾನಿಕ ಅಧ್ಯಯನವೂ ವೇಗ ಪಡೆದುಕೊಳ್ಳಬೇಕಾಗಿದೆ ಎನ್ನುವ ಉದ್ದೇಶವಿಟ್ಟುಕೊಂಡು, ಕನ್ನಡ ನುಡಿಯ ವೈಜ್ಞಾನಿಕ ಅಧ್ಯಯನಕ್ಕೆ ಉತ್ತೇಜನ ನೀಡುವ ಸಲುವಾಗಿ ಈ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ.
ಈ ಓದುಕೂಟಕ್ಕೆಂದೇ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ, ಕರ್ನಾಟಕದ ನಾನಾ ವಿಶ್ವವಿದ್ಯಾಲಯಗಳಲ್ಲಿ ಭಾಷಾ ಅಧ್ಯಯನದಲ್ಲಿ ತೊಡಗಿರುವ ಉತ್ಸಾಹಿಗಳು, ನಾಡಿನ ಹಿರಿಯ ಭಾಷಾವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧಗಳನ್ನು ಸಿದ್ಧಪಡಿಸಿದ್ದು, ಸದರಿ ಸಮ್ಮೇಳನದಲ್ಲಿ ಆಯ್ದಪ್ರಬಂಧಗಳನ್ನು ಮಂಡಿಸಲಾಗುತ್ತದೆ. ಅತ್ಯುತ್ತಮ ಪ್ರಬಂಧಗಳಿಗೆ ಬಹುಮಾನ ನೀಡುವ ಕಾರ್ಯಕ್ರಮವೂ ಇದೆ. ಈ ಮೂಲಕ ಕನ್ನಡದ ವೈಜ್ಞಾನಿಕ ಅಧ್ಯಯನ ಕ್ಷೇತ್ರದಲ್ಲೊಂದು ಹೊಸ ಅಧ್ಯಾಯವನ್ನು ಆರಂಭಿಸಲು ಮುಂದಾಗುತ್ತಿದ್ದೇವೆ. ಹಾಗೆಯೇ, ಭಾಷಾ ವಿಜ್ಞಾನದಲ್ಲಿ ಆಗಬೇಕಾದ ಕೆಲಸಗಳೇನು, ಅಧ್ಯಯನ ಮಾಡುವ ರೀತಿ ಎಂತಹುದು, ಸಂಶೋಧನೆಯಲ್ಲಿ ತೊಡಗಿಕೊಳ್ಳುವುದು ಹೇಗೆ ಎಂಬಿತ್ಯಾದಿ ಮಾಹಿತಿಯನ್ನು ಭಾಷಾ ವಿಜ್ಞಾನದ ವಿಧ್ಯಾರ್ಥಿಗಳಿಗೆ ಈ ಸಮ್ಮೇಳನ ಕೊಡಲಿದೆ.
ಕನ್ನಡಿಗರ ಏಳಿಗೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾದ ಈ ಕಾರ್ಯಕ್ರಮಕ್ಕೆ ತಮ್ಮನ್ನು ಈ ಮೂಲಕ ಆಹ್ವಾನಿಸುತ್ತಿದ್ದೇವೆ. ಈ ಕಾರ್ಯಕ್ರಮಕ್ಕೆ ಬರುವವರು ಮುಂಚೆಯೇ ನೋಂದಾಯಿಸಿಕೊಳ್ಳಬೇಕಾಗಿರುವುದರಿಂದ ತಮ್ಮ ವಿವರಗಳನ್ನು [email protected] ವಿಳಾಸಕ್ಕೆ ಮಿಂಚೆ ಕಳಿಸುವ ಮೂಲಕ ಖಚಿತಪಡಿಸಬೇಕಾಗಿ ಕೇಳಿಕೊಳ್ಳುತ್ತೇವೆ. ಬರುವ ಶುಕ್ರವಾರ ಅಂದರೆ 18ನೇ ಮಾರ್ಚ್ ನೋಂದಾಯಸಿಕೊಳ್ಳಲು ಕೊನೆಯ ದಿನವಾಗಿದೆ.
ಗಮನಿಸಿ: ಈ ಕಾರ್ಯಕ್ರಮಕ್ಕೆ ಮೊದಲೇ ನೋಂದಾಯಿಸಿಕೊಂಡವರಿಗೆ ಮಾತ್ರವೇ ಅವಕಾಶವಿರುವ ಕಾರಣ, ತಪ್ಪದೇ ತಮ್ಮ ಬರುವಿಕೆಯನ್ನು ಮೇಲೆ ಕೊಟ್ಟ ವಿಳಾಸಕ್ಕೆ ಮಿಂಚೆ ಕಳಿಸುವಮೂಲಕ ನಿಕ್ಕಿ ಮಾಡಿಕೊಳ್ಳಿ.