ನೇತ್ರಾವತಿ ನದಿ ತಿರುವು ಮಾರಕವಲ್ಲ: ಬೊಮ್ಮಾಯಿ
ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ನೀರಾವರಿ ಸಚಿವ ಬಸವರಾಜ್ ಬೊಮ್ಮಾಯಿ, ಈ ಯೋಜನೆಗೆ ಸಂಬಂಧಪಟ್ಟಂತೆ ತಜ್ಞರ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಈ ವಿಚಾರದಲ್ಲಿ ಸರ್ಕಾರ ಕೆ.ಸಿ.ರೆಡ್ಡಿ ವರದಿ ಕಾರ್ಯಗತಗೊಳಿಸಲು ಬದ್ಧವಾಗಿದ್ದು, ಈ ಸಂಬಂಧ ಪ್ರಸಕ್ತ ಬಜೆಟ್ನಲ್ಲಿ 200 ಕೋಟಿ ಮೀಸಲಿರಿಸಲಾಗಿದೆ ಎಂದು ಹೇಳಿದರು.
ನದಿ ತಿರುವು ಯೋಜನೆ ಬಗ್ಗೆ ಈಗಾಗಲೇ ಎನ್ಆರ್ಎಸ್ ಈ ಸರ್ವೆ ನಡೆಸಲಾಗಿದೆ. ಡಿಪಿಆರ್ ಟೆಂಡರ್ ಸಹ ಕರೆಯಲಾಗಿದ್ದು, ಪರಿಸರ ಇಲಾಖೆ ಮತ್ತು ತಜ್ಞರ ಅಭಿಪ್ರಾಯ ಪಡೆದುಕೊಳ್ಳಲಾಗುತ್ತಿದೆ. ಅಲ್ಲದೆ ಎತ್ತಿನಹೊಳೆ ಯೋಜನೆಗೆ ಒಂದಿಂಚು ಭೂಮಿ ಕಬಳಿಸುವುದಿಲ್ಲ ಮತ್ತು ಒಂದು ಗಿಡ ಕೂಡಾ ನಾಶ ಮಾಡುವುದಿಲ್ಲ ಎಂಬ ಭರವಸೆಯನ್ನು ಬೊಮ್ಮಾಯಿ ನೀಡಿದರು.
ಪರಿಸರಕ್ಕೆ ಹಾನಿಕಾರಕವಲ್ಲ: ನದಿ ತಿರುವು ಯೋಜನೆ ವೈಜ್ಞಾನಿಕ ಕ್ರಮದಲ್ಲಿ ನಡೆಯಲಿದ್ದು, ಪರಿಸರ ನಾಶ ಪಡಿಸಲ್ಲ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಈ ಯೋಜನೆ ಜಾರಿಗೆ ಪ್ರಯತ್ನಿಸಲಾಗುವುದು. ಎಲ್ಲ ವಿಚಾರಗಳಲ್ಲಿ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಪರಿಸರ ತಜ್ಞರೊಡನೆ ಚರ್ಚೆ ನಡೆಸಿ ನಂತರ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಜನರ ಹಿತಕ್ಕೆ ಧಕ್ಕೆ ತರುವ ಯೋಜನೆಯನ್ನು ಸರ್ಕಾರ ಕೈಗೊಂಡಿಲ್ಲ ಎಂದು ಸಚಿವ ಬೊಮ್ಮಾಯಿ ಹೇಳಿದರು.