ಸೋಂಕುಪೀಡಿತರೇ, ನಿಮಗಿಲ್ಲ ಮೆಟ್ರೊ ರೈಲು ಪ್ರಯಾಣ ಭಾಗ್ಯ
ಹೀಗ್ಯಾಕೆ ಅಂದರೆ ನಗರದಲ್ಲಿ ನಮ್ಮ ಮೆಟ್ರೊ ರೈಲು ಪ್ರಯಾಣದ ವೇಳೆ ಪ್ರಯಾಣಿಕರು ಅನುಸರಿಸಬೇಕಾದ ನಿಯಮಗಳ ಕುರಿತು ಸರಕಾರ ಅಧಿಸೂಚನೆ ಹೊರಡಿಸಿದ್ದು, ಪ್ರಯಾಣಿಕರ ಸುರಕ್ಷತೆಗೆ ಹೆಚ್ಚು ಒತ್ತು ನೀಡಿದೆ. ತಲಾ 15 ಕೆಜಿಗಿಂತ ಹೆಚ್ಚು ಲಗೇಜ್ ಕೊಂಡೊಯ್ಯುವಂತಿಲ್ಲ. ಸೋಂಕು ರೋಗ ಪೀಡಿತರು ಮೆಟ್ರೋದಲ್ಲಿ ಪ್ರಯಾಣಿಸುವಂತಿಲ್ಲ ಎಂದು ಸೂಚಿಸಲಾಗಿದೆ. ಪ್ರಯಾಣಿಕರು ತಮ್ಮೊಡನೆ 15 ಕೆಜಿಗಿಂತ ಹೆಚ್ಚು ಭಾರವಿರದ ಲಗೇಜನ್ನು ಒಯ್ಯಬಹುದು. ಇನ್ನು, ಹೆಚ್ಚು ಭಾರದ ವಸ್ತು ಸಾಗಿಸಲು ಪೂರ್ವಾನುಮತಿ ಪಡೆಯಬೇಕಾಗುತ್ತದೆ. ಆಸಿಡ್, ಶಸ್ತ್ರಾಸ್ತ್ರ, ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ ಹಾಗೂ ವಿಕಿರಣಕಾರಕ ವಸ್ತುಗಳನ್ನು ತೆಗೆದುಕೊಂಡು ಹೋಗುವುದು ಅಪರಾಧವಾಗುತ್ತದೆ.
ರಕ್ತ, ಶವ, ಪ್ರಾಣಿ, ಪಕ್ಷಿಗಳ ಸಾಗಣೆಯನ್ನೂ ನಿರ್ಬಂಧಿಸಲಾಗಿದೆ. ಮೆಟ್ರೊ ರೈಲು ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯ ಮತ್ತು ಕೇಂದ್ರ ಆರಕ್ಷಕರು, ಎನ್ ಸಿಸಿ, ಅರೆ ಸೇನಾ ಪಡೆಯ ಯೋಧರಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದ್ದು, ಮೇಲಿನ ನಿಯಮಗಳೆಲ್ಲ ಸಾಮಾನ್ಯ ಪ್ರಯಾಣಿಕರಿಗೆ ಮಾತ್ರ ಅನ್ವಯಿಸುತ್ತದೆ. ಇನ್ನು, ಚಿಕುನ್ ಗುನ್ಯಾ, ಚಿಕನ್ ಪಾಕ್ಸ್ , ಕಾಲರಾ, ದಡಾರ ಸೇರಿದಂತೆ ಸೋಂಕುರೋಗ ಪೀಡಿತರು ಮೆಟ್ರೊ ರೈಲಿನಲ್ಲಿ ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ.