ಬಾಬಾಬುಡಾನ್ಗಿರಿಯಲ್ಲಿ ಉರುಸ್ ಗೆ ಬನ್ನಿ
ಉರುಸ್ ಕಾರ್ಯಕ್ರಮದ ಮೊದಲ ದಿನ ಭಕ್ತಾದಿಗಳಿಗೆ ಗಿರಿಯಲ್ಲಿ ಗುಹೆ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದ ಅವರು, ಉರುಸ್ ಸಂದರ್ಭದಲ್ಲಿ ಭಕ್ತಾದಿಗಳ ಅನುಕೂಲಕ್ಕೆ ಪ್ರಸಾದ ವಿತರಣೆಗೆ ವ್ಯವಸ್ಥೆ, ಗಂಜಿ ಕೇಂದ್ರಗಳು, ತಾತ್ಕಾಲಿಕ ಶೆಡ್ ವ್ಯವಸ್ಥೆ, ಕುಡಿಯುವ ನೀರು ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.
ಬಾಬಾಬುಡಾನ್ಗಿರಿಗೆ ಹೋಗುವ ರಸ್ತೆ ಕುಸಿದಿರುವುದರಿಂದ ಘನ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ. ಉರುಸ್ ಆಚರಣೆ ಸಂದರ್ಭದಲ್ಲಿ ಚಿಕ್ಕಮಗಳೂರು ಹಾಗೂ ತರಿಕೆರೆ ಕಡೆಯಿಂದ ದೊಡ್ಡ ಸರಕು ವಾಹನಗಳನ್ನು ನಿಷೇಧಿಸಲಾಗಿದೆ. ಗುಹೆಯಿಂದ ಸುಮಾರು 3 ಕಿ.ಮೀ ವ್ಯಾಪ್ತಿಯವರೆಗೂ(ಗಿರಿಯಿಂದ ಹೊನ್ನಮ್ಮನ ಹಳ್ಳದ ವರೆಗೂ) ಎಲ್ಲ ರೀತಿಯ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಕುಮಾರ್ ವಿವರಿಸಿದರು.
ಮೂರು ದಿನಗಳ ಕಾಲ ನಡೆಯುವ "ಸಂದಲ್ ಉರುಸ್"ನಲ್ಲಿ ರಾಜ್ಯದ ವಿವಿಧೆಡೆಯಿಂದ ಹಾಗೂ ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. ಮೊದಲ ದಿನ ಫಕೀರರು ಗೋರಿಗಳಿಗೆ ಗಂಧ ಲೇಪಿಸಿ, ವಿವಿಧ ವಿಧಿ ವಿಧಾನ ನೆರವೇರಿಸಿದರು. ಗೋರಿಗಳಿಗೆ ಲೇಪಿಸುವ ಗಂಧವನ್ನು ಬಡಾಮಕಾನ್ ಮಸೀದಿ ಹಾಗೂ ಅತ್ತಿಗುಂಡಿ ಗ್ರಾಮದಲ್ಲಿ ತಯಾರಿಸಲಾಗುತ್ತದೆ. ಭಕ್ತರು ತಾವು ತಂದಿದ್ದ ಹೂವು, ಸಕ್ಕರೆ, ತೆಂಗಿನಕಾಯಿಗಳನ್ನು ಅರ್ಪಿಸಿ, ಗಂಧ ಲೇಪಿಸುತ್ತಾರೆ. ನಂತರ ಜಿಲ್ಲಾಡಳಿತ ವತಿಯಿಂದ ಭಕ್ತರಿಗೆ ಪ್ರಸಾದ ನೀಡಲಾಗುತ್ತಿದೆ.