ಚಿತ್ರದುರ್ಗದಲ್ಲಿ ವೀರಸೌಧಕ್ಕೆ 23 ಲಕ್ಷ ರು. ಬಿಡುಗಡೆ
ಚಿತ್ರದುರ್ಗ ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸಂಘವು ಚಿತ್ರದುರ್ಗದಲ್ಲಿ ವೀರಸೌಧ ಹಾಗೂ ಗಾಂಧಿ ಭವನ ನಿರ್ಮಾಣಕ್ಕೆ ದಶಕಗಳಿಂದ ಹೋರಾಟ ನಡೆಸುತ್ತಾ ಬಂದಿತ್ತು. ಅದರಂತೆ ಸರ್ಕಾರದಿಂದ ಫೆಬ್ರವರಿ 28, 2000ರಲ್ಲಿ 53 ಲಕ್ಷ ರು.ಗಳಿಗೆ ಆಡಳಿತಾತ್ಮಕ ಮಂಜೂರಾತಿ ದೊರೆತು 30 ಲಕ್ಷ ರು. ಬಿಡುಗಡೆ ಮಾಡಲಾಗಿತ್ತು. ನಂತರ ಉಳಿದ 23 ಲಕ್ಷ ರು. ಹಣದ ಬಿಡುಗಡೆಗಾಗಿ ಚಿತ್ರದುರ್ಗ ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಸದಸ್ಯರು ಹಲವಾರು ವರ್ಷಗಳಿಂದ ಅನೇಕ ಬಾರಿ ಪ್ರಯತ್ನಿಸಿದರೂ ಕಾರಣಾಂತರದಿಂದ ಹಣ ಬಿಡುಗಡೆಯಾಗಿರಲಿಲ್ಲ.
ಈ ಬಿಡುಗಡೆಯಾಗಿರುವ ಹಣವನ್ನು ನಮ್ಮ ದೇಶಕ್ಕೆ ಸ್ವಾತಂತ್ರ್ಯ ತರಲು ನಡೆಸಿದ ಜಿಲ್ಲಾ ಹೋರಾಟದ ಹಿನ್ನೆಲೆಯಲ್ಲಿ ಮತ್ತು ಇಂದಿನ ಯುವ ಪೀಳಿಗೆಗೆ ನಮ್ಮ ಸ್ವಾತಂತ್ರ್ಯದ ಮಹತ್ವದ ಅರಿವು ಮೂಡಿಸಲು ವೀರಸೌಧ ಹಾಗೂ ಗಾಂಧಿ ಭವನ ಕಾಮಗಾರಿಗೆ ಬಳಸಲು ಸ್ವಾತಂತ್ರ್ಯ ಹೋರಾಟಗಾರರ ಸಂಘ ನಿರ್ಧರಿಸಿದೆ.
ಸ್ವಾತಂತ್ರ್ಯ ಹೋರಾಟಗಾರರ ಸಂಘದ ಸದಸ್ಯರು ಇತ್ತೀಚಿಗೆ ಲೋಕಸಭಾ ಸದಸ್ಯರಾದ ಜನಾರ್ಧನ ಸ್ವಾಮಿರವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದರು. ಸ್ವಾತಂತ್ರ್ಯ ಹೋರಾಟಗಾರರ ಮನವಿಯನ್ನು ಸ್ವೀಕರಿಸಿ, ಹಲವಾರು ವರ್ಷಗಳಿಂದ ತಡೆ ಹಿಡಿದಿರುವ ಹಣವನ್ನು ಬಿಡುಗಡೆಮಾಡಲು ಸರ್ಕಾರವನ್ನು ಕೋರಲಾಗಿತ್ತು. ಕೋರಿಕೆಯಂತೆ ಸರ್ಕಾರ ತಕ್ಷಣ ಜಾರಿಗೆ ಬರುವಂತೆ 23 ಲಕ್ಷ ರು.ಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಬಿಡುಗಡೆ ಮಾಡಿದೆ, ಎಂದು ಸಂಸದರಾದ ಜನಾರ್ಧನ ಸ್ವಾಮಿಯವರು ತಿಳಿಸಿದ್ದಾರೆ.
ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ನಿನ್ನೆ ಸಂಸದ ಜನಾರ್ಧನ ಸ್ವಾಮಿಯವರನ್ನು ಚಿತ್ರದುರ್ಗದಲ್ಲಿ ಭೇಟಿ ಮಾಡಿ ತಮ್ಮ ಬಹು ದಿನದ ಬೇಡಿಕೆಯನ್ನು ಈಡೇರಿಸಿದ್ದಕ್ಕಾಗಿ ಹರ್ಷ ವ್ಯಕ್ತಪಡಿಸಿ ಅವರಿಗೂ ಮತ್ತು ಮುಖ್ಯಮಂತ್ರಿಗಳಾದ ಯಡಿಯೂರಪ್ಪರವರಿಗೂ ತಮ್ಮ ಧನ್ಯವಾದಗಳನ್ನು ತಿಳಿಸಿದರು.