ಹಾಲಪ್ಪ ಅತ್ಯಾಚಾರ ಕೇಸ್ ಮಾ.31ರೊಳಗೆ ಮುಗಿಸಿ
ಮಾರ್ಚ್ ತಿಂಗಳ ಅಂತ್ಯದೊಳಗೆ ಅಹಾರ ಮತು ನಾಗರಿಕ ಪೂರೈಕೆ ಖಾತೆ ಮಾಜಿ ಸಚಿವ ಹರತಾಳು ಹಾಲಪ್ಪ ಅವರ ವಿರುದ್ಧದ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಸಿಐಡಿ ಡಿಐಜಿ ಚರಣ್ ರೆಡ್ಡಿ ನ್ಯಾಯಲಯಕ್ಕೆ ತಿಳಿಸಿದ್ದಾರೆ. ಈ ನಡುವೆ ರಾಜ್ಯದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ಅತ್ಯಾಚಾರ, ಲೈಂಗಿಕ ಕಿರುಕುಳ ಮುಂತಾದ ಪ್ರಕರಣಗಳ ಮೇಲ್ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯ ಪೊಲೀಸ್ ಇಲಾಖೆಗೆ ಹೈಕೋರ್ಟ್ ನ್ಯಾಯಮೂರ್ತಿ ಜೆಎಸ್ ಖೆಹರ್ ಹಾಗೂ ನ್ಯಾಯಮೂರ್ತಿ ಎಎಸ್ ಬೋಪಣ್ಣ ಅವರಿದ್ದ ಪೀಠ ಆದೇಶ ನೀಡಿದೆ.
ಸ್ನೇಹಿತ ವೆಂಕಟೇಶ ಮೂರ್ತಿ ಅವರ ಪತ್ನಿ ಚಂದ್ರಾವತಿಯ ಮೇಲೆ ಅತ್ಯಾಚಾರ ಎಸೆಗಿದ ಆರೋಪದ ಮೇಲೆ ಸಚಿವರಾಗಿದ್ದ ಹಾಲಪ್ಪನವರು ಮೇ 2, 2010 ರಂದು ರಾಜೀನಾಮೆ ನೀಡಿದ್ದರು. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ರಾಜ್ಯ ಮಾನವ ಹಕ್ಕುಗಳ ಆಯೋಗ ಆದೇಶಿಸಿತ್ತು. ಆದರೆ, ಸರ್ಕಾರ ಹಾಲಪ್ಪ ಅವರ ಬೆನ್ನಿಗೆ ನಿಂತು, ಈ ಕ್ರಮವನ್ನು ಕೋರ್ಟ್ ನಲ್ಲಿ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ಸಿಐಡಿ ತನಿಖೆ ನಡೆದರೂ ಒಂದು ದಿನ ಕೂಡಾ ಜೈಲಿನ ಮುಖ ನೋಡದೆ ಶ್ರೀಮಾನ್ ಹಾಲಪ್ಪ ಅವರು ಹಾಲಪ್ಪ ಅನಾರೋಗ್ಯದ ನೆಪವೊಡ್ಡಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಜಂಪ್ ಮಾಡುತ್ತಾ ಜಾಮೀನು ಪಡೆದು ತಮ್ಮ ಊರಿಗೆ ತೆರಳಿದ್ದು ಕೇಸ್ ನ ಹಿಸ್ಟರಿ.