ಚಿರತೆ ಅಪಘಾತದಿಂದ ಸತ್ತಿಲ್ಲ; ಹೊಡೆದು ಸಾಯಿಸಲಾಗಿದೆ
ಬೆಂಗಳೂರು, ಮಾ. 8: ಹೊರವಲಯದ ನೈಸ್ ರಸ್ತೆಯಲ್ಲಿ ಚಿರತೆ ಸಾವಿಗೀಡಾಗಿರುವುದು ಅಪಘಾತದಿಂದಲ್ಲ. ಅದೊಂದು ವ್ಯವಸ್ಥಿತ ಹತ್ಯೆ ಎನ್ನಲಾಗಿದೆ. ನೈಸ್ ರಸ್ತೆ ಬಳಿ ಚಿರತೆ ಸತ್ತುಬಿದ್ದಿರುವುದು ಕಳೆದ 10 ದಿನಗಳಲ್ಲಿ ಇದು ಎರಡನೇ ಬಾರಿ. ಬನ್ನೇರುಘಟ್ಟ ಮುಖ್ಯರಸ್ತೆಯ ನೈಸ್ ರಸ್ತೆ ಬಳಿ ಭಾನುವಾರ ರಾತ್ರಿ ದೊರೆತ ಒಂದು ವರ್ಷದ ಹೆಣ್ಣು ಚಿರತೆಯ ಶವಪರೀಕ್ಷೆ ನಡೆಸಿರುವ ಬನ್ನೇರುಘಟ್ಟ ಜೈವಿಕ ಉದ್ಯಾನದ ವೈದ್ಯ ಡಾ. ಚಿಟ್ಟಿಯಪ್ಪ ಈ ಆತಂಕಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಚಿರತೆ ಅಪಘಾತದ ಗಾಯಗಳಿಂದ ಮೃತಪಟ್ಟಿಲ್ಲ. ಬಲವಾದ ಪೆಟ್ಟುಗಳನ್ನು ಹೊಡೆದು ಅದನ್ನು ಸಾಯಿಸಲಾಗಿದೆ. ಅದಕ್ಕೆ ಹಣೆಯಲ್ಲಿ ಗಾಯವಾಗಿದೆ. ಅದಕ್ಕಿಂತ ಮಿಗಿಲಾಗಿ ಚಿರತೆಯ ಬಲ ಮುಂಗಾಲಿನ ಮೂಳೆ ಮುರಿದಿದೆ. ಅಲ್ಲದೆ ಶ್ವಾಸಕೋಶಕ್ಕೂ ಪೆಟ್ಟಾಗಿದೆ. ಯಾರೋ ಅಕ್ರಮವಾಗಿ ಸಾಕಿಕೊಂಡಿರಬೇಕು. ಚಿರತೆಯ ಪುಂಡಾಟಿಕೆ ನಿಯಂತ್ರಿಸಲು ಹೊಡೆದಾಗ ಬಲವಾದ ಪೆಟ್ಟು ಬಿದ್ದು ಅಸುನೀಗಿರಬಹುದು ಎಂದು ವೈದ್ಯ ಚಿಟ್ಟಿಯಪ್ಪ ವಿವರಿಸಿದ್ದಾರೆ. ಈ ಮಧ್ಯೆ, ಚಿರತೆಯ ಕೆಲವು ಅಂಗಾಂಗಳನ್ನು ಹೆಬ್ಬಾಳದ ಪಶುವೈದ್ಯ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು ವರದಿ ಇನ್ನೂ ಬಂದಿಲ್ಲ.
ಚಿರತೆ ಅಪಘಾತದಿಂದ ಸತ್ತಿಲ್ಲ. ಒಂದಷ್ಟು ಜನ ಸೇರಿಕೊಂಡು ಹತ್ಯೆ ಮಾಡಿಲ್ಲ. ಆದರೂ ಚಿರತೆ ಸಾವನ್ನಪ್ಪಿದೆ. ಆದ್ದರಿಂದ ಯಾರಾದರೂ ಚಿರತೆಯನ್ನು ಸಾಕುತ್ತಿದ್ದರೇ ಎಂಬ ಅನುಮಾನ ಮೂಡಿದೆ. ಒಂದು ವರ್ಷ ತುಂಬಿದ ಚಿರತೆಯ ಪುಂಡಾಟಿಕೆ ಸಹಜ. ಅದನ್ನು ನಿಯಂತ್ರಸಿಲು ಹೋದಾಗಲು ಹಣೆ ಮೇಲೆ ಹೊಡೆದ ಪೆಟ್ಟಿಗೆ ಸಾವನ್ನಪ್ಪಿರಬೇಕು ಎಂಬ ಸಂಶಯ ಮೂಡಿದೆ. ಕೆಲವೇ ದಿನಗಳಲ್ಲಿ ಎರಡನೇ ಬಾರಿಗೆ ಎರಡು ಚಿರತೆಗಳು ಈ ರೀತಿ ಮೃತಪಟ್ಟಿದ್ದರೂ ಅರಣ್ಯ ಸಂರಕ್ಷಣಾಧಿಕಾರಿಗಳು ಮೌನವಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.