ಅರುಣಾಗೆ ಮರಣಭಿಕ್ಷೆ ಹಾಕುವುದಕ್ಕೆ ಕೋರ್ಟ್ ನಕಾರ
ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿ ಕಳೆದ 37 ವರ್ಷಗಳಿಂದ ಕರ್ನಾಟಕದ ಅರುಣಾ ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ಅಕ್ಷರಶಃ ಮುದುಡಿದ ತಾವರೆಯಾಗಿ ಹಾಸಿಗೆ ಹಿಡಿದಿದ್ದಾರೆ. ಅರುಣಾಗೆ ಈಗ 64 ವರ್ಷ ವಯಸ್ಸಾಗಿದೆ. ಶಿವಮೊಗ್ಗದ ಹಳದಿಪುರದ ಅರುಣಾ ಶಾನಭಾಗ್ ಇದೇ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಈ ಆಸ್ಪತ್ರೆಯ ಒಬ್ಬ ವಾರ್ಡ್ ಬಾಯ್ 1973ರಲ್ಲಿ ಅರುಣಾ ಮೇಲೆ ಪೈಶಾಚಿಕವಾಗಿ ಮುಗಿಬಿದ್ದು, ಅವಳ ಬಾಳನ್ನು ನಾಶ ಮಾಡಿದ್ದ.
ಹಾಸಿಗೆ ಹಿಡಿದಿರುವ ಅರುಣಾಗೆ ಆಸ್ಪತ್ರೆಯ ದಾದಿಯರು ಸಂಪೂರ್ಣ ಶುಶ್ರೂಶೆಯಲ್ಲಿ ತೊಡಗಿದ್ದಾರೆ. ಅರುಣಾ ಇನ್ನು ಬದುಕಿರುವುದು ಬೇಡ. ಆದ್ದರಿಂದ ದಾದಿಯರು ಅವಳಿಗೆ ಆರೈಕೆ ಮಾಡುವುದನ್ನು ನಿಲ್ಲಿಸಲಿ. ಅವಳಿಗೆ ಜೀವನ್ ಮುಕ್ತಿ ಕಲ್ಪಿಸಿ ಎಂದು ಪಿಂಕಿ ನ್ಯಾಯಾಲಯದ ಮೊರೆಹೋಗಿದ್ದರು. ವಾದ-ಪ್ರತಿವಾದ (ಸರಕಾರ) ಆಲಿಸಿದ ಬಳಿಕ ನ್ಯಾಯಾಲಯ ಕಳೆದ ಬುಧವಾರ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ರೋಗಿ ಸ್ವತಃ ದಯಾಮರಣ ಬೇಡುವುದು ಮತ್ತು ರೋಗಿಯ ಪರ ಬೇರೊಬ್ಬರು ಮನವಿ ಮಾಡುವುದರ ನಡುವೆ ಸೂಕ್ಷ್ಮ ವ್ಯತ್ಯಾಸವಿದೆ. ಇಲ್ಲಿ ನೈತಿಕ ಹಕ್ಕುಗಳು ಮುಖ್ಯವಾಗುತ್ತವೆ ಎಂದು ಪ್ರತಿವಾದಿಸಲಾಗಿತ್ತು.