ಕೂಡ್ಲಿಗಿ ಬೆಂಕಿ ಆಕಸ್ಮಿಕ : ಭಾರೀ ಆಸ್ತಿಪಾಸ್ತಿ ನಷ್ಟ
ಸೋಮವಾರ ಮಧ್ಯಾಹ್ನ ಏಕಾಏಕಿ ಅಗ್ನಿ ಆಕಸ್ಮಿಕ ಕಾಣಿಸಿಕೊಂಡಿದ್ದು 40 ಗುಡಿಸಲುಗಳು, 4 ಮನೆಗಳು, 5 ಕರುಗಳು, 3 ಎತ್ತುಗಳು, 109 ಬಣವೆಗಳು, 3 ಬಂಡಿಗಳು, 8 ಲಕ್ಷ ರುಪಾಯಿ ಮೌಲ್ಯದ ಆಹಾರಧಾನ್ಯಗಳು, ಬಟ್ಟೆಗಳು ಬೆಂಕಿಗೆ ಆಹುತಿ ಆಗಿವೆ. ನಿರಾಶ್ರಿತರಾಗಿರುವ 200ಕ್ಕೂ ಹೆಚ್ಚಿನ ಜನರಿಗೆ ಸ್ಥಳೀಯ ಶಾಲೆಯಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ.
ಕೂಡ್ಲಿಗಿ, ಕೊಟ್ಟೂರು, ಹರಪನಹಳ್ಳಿ, ಸಂಡೂರು ಹಾಗೂ ಹಗರಿಬೊಮ್ಮನಹಳ್ಳಿಗಳಿಂದ ಅಗ್ನಿಶಾಮಕ ವಾಹನಗಳು ಬಂದು ಬೆಂಕಿ ನಂದಿಸುವಲ್ಲಿ ಶ್ರಮಿಸಿದವು. ಆದರೆ, ಗಾಳಿಯು ವೇಗವಾಗಿ ಬೀಸುತ್ತಿದ್ದ ಕಾರಣ ಬೆಂಕಿ ವ್ಯಾಪಕವಾಗಿ ಹಬ್ಬಿ ನಷ್ಟದ ಪ್ರಮಾಣ ಹೆಚ್ಚಾಗಿದೆ. ಜನರ ಸಾವು - ನೋವು ಸಂಭವಿಸಿಲ್ಲ ಎಂದು ತಹಸೀಲ್ದಾರ್ ವೀರಮಲ್ಲಪ್ಪ ಪೂಜಾರ್ ತಿಳಿಸಿದ್ದಾರೆ.
ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಕನ್ನಡತೇರು' ಕಾರ್ಯಕ್ರಮಕ್ಕೆ ತಯಾರಾಗುತ್ತಿದ್ದ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡರು. ಬಳ್ಳಾರಿ ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಅವರು ಸೋಮವಾರ ಸಂಜೆ ವೇಳೆಗೆ ಭೇಟಿ ನೀಡಿ, ನಿರಾಶ್ರಿತರಿಗೆ ತತ್ಕ್ಷಣದ ಪರಿಹಾರ, ಆಶ್ರಯ, ಆಹಾರ, ರಾತ್ರಿಯ ವಸತಿ, ಆರೋಗ್ಯ ಕುರಿತು ಸೂಕ್ತ ಅಗತ್ಯ ಕ್ರಮಗಳನ್ನು ಕೈಗೊಂಡರು.