ಕರ್ನಾಟಕದ ಶ್ರೀಕುಮಾರ್ ಗೆ ಸಿವಿಸಿ ಪಟ್ಟ?
ಏಕೆಂದರೆ ಕೇಂದ್ರ ಸರಕಾರ ತನ್ನ ದುಸ್ಸಾಹಸವನ್ನು ಪುನರಾವರ್ತಿಸದೆ ಉತ್ತಮ ವ್ಯಕ್ತಿಗಳಿಗಾಗಿ ಹುಡುಕಾಟ ನಡೆಸಿದರೆ, ಜತೆಗೆ ಐಎಎಸ್ ಲಾಬಿಗೆ ಮಣಿಯದಿದ್ದರೆ ನಿವೃತ್ತ ಐಪಿಎಸ್ ಶ್ರೀಕುಮಾರ್ ಅವರಿಗೆ ಆ ಹುದ್ದೆ ಒಲಿಯಬಹುದು. ಅಂದಹಾಗೆ ಶ್ರೀಕುಮಾರ್ ಸಿವಿಸಿಯ ಹಾಲಿ ಸದಸ್ಯ. ಈಗಿರುವ ಸದಸ್ಯರ ಪೈಕಿ ಸೇವಾ ಅನುಭವದಲ್ಲಿ ಹಿರಿಯರು ಕೂಡ. ಶುದ್ಧ ಹಸ್ತರೂ ಹೌದೆಂಬ ಮಾತಿದೆ. ಇನ್ನೊಂದು ಸಾಧ್ಯತೆ ಎಂದರೆ ಶ್ರೀಕುಮಾರ್ ಅವರನ್ನು ತಕ್ಷಣಕ್ಕೆ ಹಂಗಾಮಿ ಮುಖ್ಯಸ್ಥರನ್ನಾಗಿ ನೇಮಿಸಿ, ಬಳಿಕ ಉಳಿದ ವಿಷಯಗಳತ್ತ ಸರಕಾರ ಗಮನಹರಿಸಬಹುದು. ಸಿವಿಲ್ ಸೇವೆಯ ಅಧಿಕಾರಿಗಳನ್ನು ಮಾತ್ರ ನೇಮಕ ಮಾಡಬೇಕೆಂಬ ನಿಯಮವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿರುವುದರಿಂದ ನಿಧಾನವಾಗಿಯಾದರೂ ದಕ್ಷರು ಮತ್ತು ಶುದ್ಧಹಸ್ತರನ್ನು ಸಿವಿಸಿ ಸ್ಥಾನದಲ್ಲಿ ಕುಳ್ಳಿರಿಸುವ ಮೂಲಕ ಹೋದ ಮಾನವನ್ನು ಮರಳಿಗಳಿಸಲು ಟೀಮ್ ಮನ್ಮೋಹನ್ ಸಿಂಗ್ ಯತ್ನಿಸಬಹುದು.
ಶ್ರೀಕುಮಾರ್ ಆಯ್ಕೆಯಾದರೆ ಸಿವಿಸಿಗೆ ನೇಮಕಗೊಂಡ ಮೊದಲ ಕನ್ನಡಿಗ ಎಂಬ ಹೆಮ್ಮೆಗೆ ಪಾತ್ರರಾಗಲಿದ್ದಾರೆ. ತಮಿಳುನಾಡಿಗೆ ಸೇರಿದ ಅವರು ಕರ್ನಾಟಕದಲ್ಲಿಯೇ ನೆಲೆಸಿದ್ದು, 30 ವರ್ಷ ಕಾಲ ಇಲ್ಲಿಯೇ ಸೇವೆ ಸಲ್ಲಿಸಿದ್ದಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ತನಿಖೆ ಮುಖ್ಯಸ್ಥರಾಗಿ, ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳದ ಐಜಿಪಿಯಾಗಿ ಅವರ ಸೇವಾತತ್ಪರತೆ ಶ್ಲಾಘನೀಯ.