ಮುಖ್ಯಮಂತ್ರಿ ತವರಲ್ಲಿ ಅರಣ್ಯ ನಾಶ ಅವ್ಯಾಹತ
ಇದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ತವರೂರು. ನಾಡಿನ ಅಸಂಖ್ಯಾತ ಕವಿ, ಸಾಹಿತಿಗಳು, ಹೋರಾಟಗಾರರ ಜನ್ಮಸ್ಥಳ. ಆದರೆ ಶಿವಮೊಗ್ಗದ ಅರಣ್ಯಗಳ ಸ್ಥಿತಿ ನೋಡಿದರೆ ಈಗಿನ ಸುಡು ಬಿಸಿಲಿಗೆ ಕಾರಣೀಭೂತರಾದ ಅರಣ್ಯಾಧಿಕಾರಿಗಳು, ಕಾಡುಗಳ್ಳರ ಸ್ಪಷ್ಟ ಚಿತ್ರಣ ಸಿಗುತ್ತದೆ. ಎಲ್ಲದಕ್ಕೂ ಅಧಿಕಾರಿಗಳೇ ಹೊಣೆ ಎಂದು ಆರೋಪ ಮಾಡಲಾಗದಿದ್ದರೂ ಪ್ರಸ್ತುತ ಸ್ಥಿತಿಗೆ ಕಾಡುಗಳ್ಳ ಅಧಿಕಾರಿಗಳು, ಪ್ರಜೆಗಳು, ಪ್ರಭುಗಳು ಹಾಗೂ ಆಡಳಿತದ ಚಕ್ರವ್ಯೂಹದ ಕದಂಬ ಬಾಹುಗಳ ರುದ್ರ ನರ್ತನ ಕಣ್ಣಿಗೆ ರಾಚುತ್ತದೆ.
ಆಯನೂರು, ಕುಂಸಿ ಗ್ರಾಮಸ್ಥರಿಂದ ಅರಣ್ಯನಾಶದ ಬಗ್ಗೆ ಹಲವು ದೂರುಗಳು ಆಗಾಗ ಬರುತ್ತಿದ್ದರೂ, ಅರಣ್ಯ ಭೂಮಿಯನ್ನು ಬೇಲಿಹಾಕಿ ಸಾಗುವಳಿ ನಡೆಸುತ್ತಿರುವ ಅಕ್ರಮ ಸಾಗುವಳಿದಾರಿಗೆ ಅಡ್ಡಿ ಪಡಿಸುವ ಪ್ರಾಮಾಣಿಕ ಅಧಿಕಾರಿಗಳಿಗೆ ತೊಂದರೆ ಕೊಡಬಾರದು, ಇಲ್ಲಿ ಮನುಷ್ಯನ ಸ್ವಾರ್ಥಕ್ಕಿಂತ ಅರಣ್ಯ ಉಳಿಸಿ ಬೆಳೆಸುವುದು ಮುಖ್ಯ ಎಂದು ಮಾದ್ಯಮದವರು ಸಾಮಾನ್ಯವಾಗಿ ಅರಣ್ಯ ಪ್ರದೇಶದ ಒಳಹೊಕ್ಕು ವರದಿ ಮಾಡಲು ಹಿಂದೇಟು ಹಾಕುತ್ತಾರೆ. ಆದರೆ ಒಳಹೊಕ್ಕು ನೋಡಿದಾಗ ಜನರ ಪಾಲು ಶೇ.10 ಇದ್ದರೆ ಅಧಿಕಾರಿಗಳ ಹಾಗೂ ಮರಗಳ್ಳರ ಲಾಬಿ ಶೇ.90ರಷ್ಟು ಅರಣ್ಯ ಲೂಟಿ ಮಾಡುತ್ತಿದೆ.
ಸಾಮಾಜಿಕ ಅರಣ್ಯೀಕರಣದ ಹೆಸರಿನಲ್ಲಿ ಸರ್ಕಾರದ ಹಣವನ್ನು ಲೂಟಿ ಮಾಡುವ ಪರಿ. ಕಾಡುಗಳ್ಳರಿಗೆ ಬೇಕಾಬಿಟ್ಟಿ ಮರ ಕಡಿತಕ್ಕೆ ಸಹಾಯ. ಅಕ್ರಮವಾಗಿ ಸಾಗಣಿಕೆ, ಶೇಖರಣೆ ಮತ್ತು ಮಾರಾಟ, ಇವೆಲ್ಲಾ ಅವ್ಯಾಹತವಾಗಿ ಆಯನೂರು ಅರಣ್ಯ ವಲಯದಲ್ಲಿ ನಡೆಯುತಿದ್ದು, ಶೇ.50ರಷ್ಟು ಮರಗಳು ನಾಶವಾಗಿದೆ. ಇದಕ್ಕೆಲ್ಲ ಅರಣ್ಯ ಅಧಿಕಾರಿಗಳೇ ಕಾರಣ ಎಂದು ಕುಂಸಿ ಹಾಗೂ ಚೋರಡಿ ಗ್ರಾಮಸ್ಥರು ಆರೋಪಿಸಿದ್ದಾರೆ. ಇದರಲ್ಲಿ ಈಗಿನ ಆಯನೂರು ಅರಣ್ಯ ವಲಯ ಅಧಿಕಾರಿ ರಾಮನಾಯ್ಕ ಪಾಲೂ ಇದೆ ಎಂದು ಆರೋಪಿಸುತ್ತಾರೆ.
ಅಧಿಕಾರಿಯನ್ನೂ ಕೇಳಿದಾಗ, ಇಲ್ಲಿ ನೀವು ನೋಡಿರುವ ಮರಗಳಿಗೆ ಎಲ್ಲಾ ದಾಖಲೆಗಳೂ ಇವೆ. ಲಕ್ಷಾಂತರ ಸಸಿಗಳನ್ನು ಬೆಳೆಸುವಾಗ ಸ್ವಲ್ಪ ಮಟ್ಟಿನ ಸಸಿಗಳು ಒಣಗುವುದು ಸಾಮಾನ್ಯ. ಎಲ್ಲಾ ಕಾನೂನು ಬದ್ದವಾಗಿದೆ. ಅರಣ್ಯ ಭೂಮಿ ವಶಪಡಿಸಲು ಹೋಗಿದ್ದೇ ನಮ್ಮ ಮೇಲಿನ ಅರೋಪ ಬರಲು ಕಾರಣ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಗ್ರಾಮಸ್ಥರು ಮತ್ತು ಅರಣ್ಯಾಧಿಕಾರಿಗಳ ನಡುವಿನ ಸಂಘರ್ಷ ಅರಣ್ಯನಾಶದ ಸಂಚನ್ನು ಬಯಲಿಗೆಳೆದಿದೆ.
ಖಾಸಗಿ ಜಾಗದಲ್ಲೂ ಇರುವ ಬೃಹತ್ ಮರಗಳು ಪಾಣಿಯಲ್ಲಿ ನಮೂದಿಸದೇ ಇದ್ದರೆ ಅದು ಕೂಡಾ ಕೂಡಲೇ ಅಪೋಶನಗೊಳ್ಳುತ್ತವೆ. ಒಟ್ಟಿನಲ್ಲಿ ಇಡೀ ಕುಂಶಿ, ಚೋರಡಿ ಆಯನೂರಿನ ಅರಣ್ಯ ಕಳ್ಳ ಅಧಿಕಾರಿಗಳ ಪಾಲು ಇವಿಷ್ಟು ಗ್ರಾಮಸ್ಥರ ಆರೋಪ. ಇದಕ್ಕೆ ಹಿರಿಯ ಅರಣ್ಯಧಿಕಾರಿಗಳು ಏನ್ನನ್ನುತ್ತಾರೆ?