ಹೇಮಾಮಾಲಿನಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ
ಅನರ್ಹಗೊಂಡ ಶಾಸಕರು ಇಲ್ಲಿ ಕೂಡ ಮತ ಹಾಕಲು ಸಾಧ್ಯವಾಗದ್ದರಿಂದ ಹೇಮಾಮಾಲಿನಿ ಗೆಲುವು ನಿರೀಕ್ಷಿತವಾಗಿತ್ತು. ಇಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ ನಾಲ್ಕು ಗಂಟೆಯವರೆಗೆ ನಡೆದ ಮತದಾನದಲ್ಲಿ ಹೇಮಾಮಾಲಿನಿ ಪರ 106 ಮತಗಳು ಬಂದರೆ, ಮರುಳಸಿದ್ದಪ್ಪ 94 ಮತಗಳನ್ನಷ್ಟೇ ಗಳಿಸಲು ಯಶಸ್ವಿಯಾದರು. 5 ಮತಗಳು ಕುಲಗೆಟ್ಟವು.
ಡಾ. ಎಂ. ರಾಜಶೇಖರ ಮೂರ್ತಿ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಹೇಮಾಮಾಲಿನಿ ಸ್ಪರ್ಧಿಸಿದ್ದರು. ಈ ಸ್ಥಾನಕ್ಕೆ ಕನ್ನಡೇತರ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಕ್ಕೆ ಸಾಂಸ್ಕೃತಿಕ ಮತ್ತು ಸಾರ್ವಜನಿಕ ವಲಯದಿಂದ ಭಾರೀ ಪ್ರತಿರೋಧ ವ್ಯಕ್ತವಾಗಿತ್ತು. ಜ್ಞಾನಪೀಠ ಪ್ರಶಸ್ತಿ ವಿಜೇತ ನಾಟಕಕಾರ ಗಿರೀಶ್ ಕಾರ್ನಾಡ್ ಮತ್ತು ಬರಗೂರು ರಾಮಚಂದ್ರಪ್ಪ ಸೇರಿದಂತೆ ಸಾಹಿತಿಗಳೆಲ್ಲ ಒಕ್ಕೊರಲಿನಿಂದ ಹೇಮಾಮಾಲಿನಿ ಅವರ ಸ್ಪರ್ಧೆಯನ್ನು ವಿರೋಧಿಸಿದ್ದರು.
ಬಿಜೆಪಿಯಲ್ಲಿಯೇ ಹೇಮಾಮಾಲಿನಿ ಅವರ ಸ್ಪರ್ಧೆಗೆ ಅಸಮಾಧಾನವಿತ್ತು. ಮಾಜಿ ಕೇಂದ್ರ ಸಚಿವ ವಿ. ಧನಂಜಯ ಕುಮಾರ್ ಅವರು ಸಮರ್ಥ ಅಭ್ಯರ್ಥಿ ಎಂದು ಒಂದು ವಲಯದಿಂದ ಮಾತು ಕೇಳಿಬಂದಿತ್ತು. ಕೊನೆಗೆ ಧನಂಜಯ ಕುಮಾರ್ ಅವರು ಕಣದಿಂದ ಹಿಂದೆ ಸರಿಯಬೇಕಾಯಿತು.
ಗೆದ್ದ ನಂತರ ಖುಷಿಯನ್ನು ಪತ್ರಕರ್ತರೊಂದಿಗೆ ಹಂಚಿಕೊಂಡ ಹೇಮಾಮಾಲಿನಿ, "ನಾನು ಕನ್ನಡೇತರ ಎಂದು ನನ್ನನ್ನು ವಿರೋಧಿಸಿದ್ದು ಇನ್ನೂ ವಿಚಿತ್ರ ಎನಿಸುತ್ತಿದೆ. ಕಲಾವಿದೆ ಎಲ್ಲರಿಗೂ ಸೇರಿದವಳು. ಕರ್ನಾಟಕದ ಬಡಜನತೆ, ಮಕ್ಕಳು ಮತ್ತು ರೈತರಿಗಾಗಿ ಯಾವುದೇ ರೀತಿ ರಾಜ್ಯಸಭೆಯಲ್ಲಿ ಹೋರಾಡಲು ನಾನು ಸಿದ್ಧ" ಎಂದು ಹೇಳಿದ ಅವರು ತನ್ನನ್ನು ಬೆಂಬಲಿಸಿದ ಬಿಜೆಪಿಗೆ ಧನ್ಯವಾದ ಹೇಳಿದರು.
ಸ್ಪರ್ಧಿಸುವ ಮುನ್ನ ಶೋಲೆ ಚಿತ್ರಕ್ಕಾಗಿ ರಾಮನಗರದಲ್ಲಿ ತಾವು ಕಳೆದ ದಿನಗಳನ್ನು ನೆನೆಸಿಕೊಂಡಿದ್ದ ಹೇಮಾಮಾಲಿನಿ, ರಾಮನಗರದ ಅಭಿವೃದ್ಧಿಗಾಗಿಯೂ ಶ್ರಮಿಸುವುದಾಗಿ ನುಡಿದಿದ್ದರು.