ಟಿಕೆಟ್ ಹಗರಣ : ಕುಂಬ್ಳೆ ವಿರುದ್ಧ ಮುಗಿಬಿದ್ದ ಶಾಸಕರು
ಬೆಂಗಳೂರು, ಮಾ. 2 : ಫೆಬ್ರವರಿ 27ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ವಿಶ್ವಕಪ್ ಏಕದಿವಸೀಯ ಪಂದ್ಯದಲ್ಲಿ ಟಿಕೆಟ್ ಗಳನ್ನು ಕಾಳಸಂತೆಯಲ್ಲಿ ಮಾರಲಾಗಿದ್ದು, ಈ ಹಗರಣದ ತನಿಖೆಯನ್ನು ವಿಧಾನಸಭೆ ಸಮಿತಿ ನಡೆಸಬೇಕೆಂದು ವಿಧಾನಸಭಾ ಸದಸ್ಯರು ಆಗ್ರಹಿಸಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣ ಸರಕಾರವೇ ಭೋಗ್ಯಕ್ಕೆ ನೀಡಿದ್ದರೂ, ಕ್ರಿಕೆಟಿಗ ಅನಿಲ್ ಕುಂಬ್ಳೆಯವರ ಅಧ್ಯಕ್ಷತೆಯಲ್ಲಿರುವ ಕರ್ನಾಟಕ ಕ್ರಿಕೆಟ್ ಮಂಡಳಿ ಜನಪ್ರತಿನಿಧಿಗಳನ್ನು ಕಡೆಗಣಿಸಿ ಅವಮಾನ ಮಾಡಿದ್ದಾರೆ ಎಂದು ಒಕ್ಕೊರಲಿನಿಂದ ಕೆಎಸ್ ಸಿಎಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಫೆ.24ರಂದು ಕ್ರಿಕೆಟ್ ಪ್ರೇಮಿಗಳ ಮೇಲೆ ನಡೆಸಲಾದ ಲಾಠಿ ಚಾರ್ಜ್ ಬಗ್ಗೆ ವಿಧಾನಮಂಡಲದಲ್ಲಿ ಪ್ರಸ್ತಾಪಿಸಿದ ಶಾಸಕ ನರೇಂದ್ರಬಾಬು ಅವರು, ಟಿಕೆಟ್ಟುಗಳನ್ನು ನ್ಯಾಯವಾಗಿ ವಿತರಣೆ ಮಾಡದೆ ಕಾಳಸಂತೆಯಲ್ಲಿ ಮಾರಲಾಗಿದೆ ಎಂದು ಆರೋಪಿಸಿದರು. ಇದಕ್ಕೆ ಸಂಪಂಗಿ ಮತ್ತು ಎಸ್ಆರ್ ವಿಶ್ವನಾಥ್ ಅವರೂ ದನಿಗೂಡಿಸಿದರು. ಸ್ಟೇಡಿಯಂ ಸರಕಾರದ ಸ್ವತ್ತಾಗಿದ್ದರಿಂದ ಸರಕಾರ ಈ ಘಟನೆಗೆ ಪ್ರತಿಕ್ರಿಯೆ ನೀಡಬೇಕೆಂದು ಆಗ್ರಹಿಸಿದರು.
ಪ್ರೇಕ್ಷಕರಿಗಾಗಿ 5 ಸಾವಿರ ಟಿಕೆಟ್ ಮಾರಬೇಕಿದ್ದರೂ, ಮಾರಲಾಗಿದ್ದು ಕೇವಲ ಸಾವಿರ ಟಿಕೆಟ್ ಮಾತ್ರ. ಉಳಿದವುಗಳನ್ನು ಬೇಕಾಬಿಟ್ಟಿ ದರದಲ್ಲಿ ಕಾಳಸಂತೆಯಲ್ಲಿ ಮಾರಲಾಗಿದೆ ಎಂದು ಆರೋಪಿಸಿದ ವಿಶ್ವನಾಥ್ ಅವರು, ಕೆಎಸ್ ಸಿಎ ಅಧ್ಯಕ್ಷ ಕುಂಬ್ಳೆ ಮತ್ತು ಕಾರ್ಯದರ್ಶಿ ಜಾವಗಲ್ ಶ್ರೀನಾಥ್ ಅವರೇ ಇದಕ್ಕೆಲ್ಲ ಹೊಣೆ ಹೊರಬೇಕೆಂದು ಆಗ್ರಹಿಸಿದರು. ಈ ಹಗರಣದ ತನಿಖೆಯಾಗಲೇಬೇಕೆಂದು ಅವರು ಒತ್ತಾಯಿಸಿದರು.
ಕಾಂಗ್ರೆಸ್ ಶಾಸಕ ಟಿಬಿ ಜಯಚಂದ್ರ ಅವರು, ಕೆಎಸ್ ಸಿಎಯನ್ನು ಹಿಡಿತದಲ್ಲಿಡಲು ಶಾಸನ ಸಮಿತಿಯಿಂದ ಮಾತ್ರ ಸಾಧ್ಯ. ಇಲ್ಲದಿದ್ದರೆ ಚಿನ್ನಸ್ವಾಮಿ ಕ್ರೀಡಾಂಗಣವನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸಿ ಎಂದು ಆಗ್ರಹಪಡಿಸಿದರು. ಇದರ ಬಗ್ಗೆ ಹೆಚ್ಚಿನ ಚರ್ಚೆ ಮತ್ತು ನಿರ್ಧಾರ ಗುರುವಾರ ನಡೆಯಬೇಕೆಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್ ಸುರೇಶ್ ಕುಮಾರ್ ಅವರು ಸಲಹೆ ನೀಡಿದರು. ಮಾರ್ಚ್ 3ರಂದು ಇದರ ಬಗ್ಗೆ ವಿಸ್ತೃತ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಸಭಾಧ್ಯಕ್ಷ ಕೆಜಿ ಬೋಪಯ್ಯ ತಿಳಿಸಿದರು.
ಮಾ.2ರಂದು ಇಂಗ್ಲೆಂಡ್ ಮತ್ತು ಐರ್ಲೆಂಡ್ ನಡುವೆ ನಡೆಯಲಿರುವ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ. ಫೆ.27ರಂದು ಭಾರತ ಮತ್ತು ಇಂಗ್ಲೆಂಡ್ ಪಂದ್ಯ ರೋಚಕವಾಗಿ ಟೈ ಆಗಿ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಿದ್ದರೂ, ಕಸದ ತೊಟ್ಟಿಯಾಗಿ ಮಾರ್ಪಟ್ಟಿತ್ತು. ಕ್ರಿಕೆಟ್ ಜೊತೆಗೆ ಕ್ರೀಡಾಂಗಣವನ್ನೂ ಕ್ರಿಕೆಟ್ ಮಂಡಳಿ ಸ್ವಚ್ಛವಾಗಿಡಬೇಕು ಎಂಬ ಕೂಗು ಸಾರ್ವಜನಿಕರಿಂದ ವ್ಯಕ್ತವಾಗಿತ್ತು. ಇಂದಿನ ಪಂದ್ಯದಲ್ಲಾದರೂ ಸ್ವಚ್ಛ ಕ್ರಿಕೆಟ್ ಗೆ ಹೆಸರಾಗಿರುವ ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಕ್ರೀಡಾಂಗಣವನ್ನು ಸ್ವಚ್ಛವಾಗಿರಿಸುವತ್ತ ಗಮನ ಹರಿಸುವರೆ?