ಇನ್ಫಿ ಉದ್ಯೋಗಿ ಲಕ್ಕಿ, ಕದ್ದ ಮೊಬೈಲ್ ವಾಪಸ್
ಸಿಲ್ ಸಿಲಾ ಉತ್ತುಪ್ ನೀಡಿದ ದೂರಿನ ಮೇರೆಗೆ ಕಾರ್ಯ ಪ್ರವೃತ್ತರಾದ ಕದ್ರಿ ಪೊಲೀಸ್ ಠಾಣೆ ಅಪರಾಧ ಪತ್ತೆದಳದವರು ಇಬ್ಬರು ಯುವಕರನ್ನು ಬಂಧಿಸಿ, ಒಂದು ಬೈಕು, 5 ಸಾವಿರ ರು ಮೌಲ್ಯದ ನೋಕಿಯಾ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ. ಸಿಕ್ಕಿ ಬಿದ್ದ ಕಳ್ಳರಿಬ್ಬರ ವಯಸ್ಸು ಇನ್ನೂ 20 ದಾಟಿಲ್ಲ. ಒಬ್ಬ ಬಿಜೈ ಕಾಪಿ ಕಾಡ್ ಅಪಾರ್ಟ್ ಮೆಂಟ್ ವೊಂದರ ನಿವಾಸಿ ಮನೀಶ್ ಶೆಟ್ಟಿ(19) ಅಲಿಯಾಸ್ ಮನು ಇನ್ನೂ ಪಿಯೂಸಿ ವಿದ್ಯಾರ್ಥಿ. ಮತ್ತೊಬ್ಬ ಕೊಂಚಾಡಿ ದೇರೆಬೈಲು ಮಂದಾರಬೈಲು ನಿವಾಸಿ ಲೊಯ್ ವೇಗಸ್(18) ಈಗಾಗಲೆ ಬೈಕು ಕದ್ದು ಉರ್ವ ಪೊಲೀಸ್ ಠಾಣೆಯಲ್ಲಿ ಹೆಸರು ದಾಖಲಿಸಿದ್ದಾನೆ.
ಘಟನೆ ನಡೆದಿದ್ದು ಹೀಗೆ: ಇನ್ಫೋಸಿಸ್ ನಲ್ಲಿ ಕೆಲಸ ಮುಗಿಸಿಕೊಂಡು ರಾತ್ರಿ ಬೆಂದೂರ್ ವೆಲ್ ನಲ್ಲಿರುವ ತನ್ನ ಪಿಜಿ ಕಡೆಗೆ ಸಿಲ್ ಸಿಲಾ(23) ನ ನಡೆದುಕೊಂಡು ಹೋಗುತ್ತಿದ್ದಳು. ಇದೇ ವೇಳೆಗೆ ಬೈಕಿನಿಂದ ಬಂದ ಈ ಇಬ್ಬರು ಯುವಕರು ಆಕೆ ಕುತ್ತಿಗೆ ಕೈ ಹಾಕಿದ್ದಾರೆ. ಚಿನ್ನದ ಚೈನು ಏನಾದರೂ ಸಿಗುವ ಆಸೆ ಇಟ್ಟುಕೊಂಡಿದ್ದ ಇವರ ಕೈಗೆ ಸಿಕ್ಕಿದ್ದು ಮೊಬೈಲ್ ಫೊನ್. ಸಿಲ್ ಸಿಲಾ ಸಾಕಷ್ಟು ತಿಕ್ಕಾಟ ನಡೆಸಿ ಮೈ ಕೈ ಗಾಯ ಮಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿ ದೂರಿತ್ತಿದ್ದಾಳೆ.
ಕದ್ರಿ ಇನ್ಸ್ಪೆಕ್ಟರ್ ನಿರಂಜನೇ ರಾಜ್ ಅರಸ್ ಅವರ ತಂಡಕ್ಕೆ ಈ ಕೇಸ್ ನಲ್ಲಿ ಯಶ ಸಿಗಲು ಮತ್ತೊಂದು ಕಾರಣವಿದೆ. ಕದ್ದ ಬೈಕು ಬಳಸಿದ ಪೆದ್ದ ಯುವಕರು ಮೊಬೈಲ್ ಫೋನ್ ಕದ್ದು ಸಿಕ್ಕಿಬಿದ್ದಿದ್ದಾರೆ. ಸಾಮಾನ್ಯವಾಗಿ ಮೊಬೈಲ್ ಫೋನ್ ಕಳುವಾದರೆ, ಮತ್ತೆ ಸಿಗುವುದೇ ಅಪರೂಪ. ಆದರೆ, ಕಳುವಾದ ನೋಕಿಯಾ ಮೊಬೈಲ್ ಫೋನ್ ವಾರದಲ್ಲೇ ಕೈ ಸೇರಿದ್ದು ಸಿಲ್ ಸಿಲಾ ಅದೃಷ್ಟ ಎನ್ನಬಹುದು.