ತಿಪ್ಪೆಗುಂಡಿಯಾದ ಚಿನ್ನಸ್ವಾಮಿ ಸ್ಟೇಡಿಯಂ
ಬೆಂಗಳೂರು, ಫೆ. 28 : ನಿನ್ನೆ ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ಭಯಂಕರ ರೋಚಕವಾಗಿತ್ತು. ಮನೆಯಲ್ಲಿ, ಹೋಟೆಲುಗಳಲ್ಲಿ ಕುಳಿತು ಕಾಫಿನೋ, ಬೀರೋ ಹೀರುತ್ತ ಕ್ರಿಕೆಟ್ ನೋಡಿದವರಿಗಿಂತ ಕ್ರೀಡಾಂಗಣಕ್ಕೆ ಹೋಗಿ ಆಟ ನೋಡಿದವರೇ ಭಾಗ್ಯಶಾಲಿಗಳು. ಟಿಕೆಟ್ ಪಡೆಯೋಕೆ ಒಂದೆರಡು ಲಾಠಿ ಓಟು ತಿಂದು, ನೂಕುನುಗ್ಗಲುಗಳಲ್ಲಿ ಹಗ್ಗಜಗ್ಗಾಡಿ ಅಂಗಿ ಹರಿದು ಕೊಂಡರೂ ಪರವಾಗಿಲ್ಲ.
ಕೋಲ್ಕತ್ತದಿಂದ ಎತ್ತಂಗಡಿಯಾಗಿ ಅನಾಯಾಸವಾಗಿ ಬೆಂಗಳೂರಿಗೆ ಹಾರಿದ ಗ್ರೂಪ್ ಬಿ ಪಂದ್ಯದ ಚೆಂಡು ಬೆಂಗಳೂರಿಗೆ ಹಾರಿದುದು ಕರ್ನಾಟಕ ಕ್ರಿಕೆಟ್ ಅಭಿಮಾನಿಗಳಿಗೆ ನಿಜಕ್ಕೂ ಬೋನಸ್ ಮಜಾನೇ ಸರಿ. ಕ್ರಿಕೆಟ್ ಮಾರಮ್ಮನ ಜಾತ್ರೆಯಲ್ಲಿ ನೀಲಿ ಅಂಗಿ ಹಾಕಿಕೊಂಡು ಸ್ಟೇಡಿಯಂನಲ್ಲಿ ಚೀರಿಕೊಂಡವನೇ ಅರ್ಧ ಜಾಣ.
ನೀವು ನಿಜಕ್ಕೂ ಪೂರಾ ಜಾಣರಾಗಿದ್ದರೆ ಮತ್ತೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮತ್ತೆ ಹೋಗುವುದಿಲ್ಲ. ಬರೀ ಗಲೀಜು. ಸ್ಟೇಡಿಯಂನಲ್ಲಿ ಎಲ್ಲೆಂದರಲ್ಲಿ ಬಳಸಿ ಬಿಸಾಕಿದ ಪ್ಲಾಸ್ಟಿಕ್ಕು, ಶೌಚಾಲಯಗಳಲ್ಲಿ (He and She) ಧೂಮಪಾನಿಗಳ ಕಾಟ, ಊಟದ ಪೊಟ್ಟಣಗಳ ಚಿನ್ನಾರಿ ಕಾಗದ, ಖಾಲಿ ಪೆಪ್ಸಿ ಕೋಕ್ ಬಾಟಲುಗಳ ಸ್ವರ್ಗವಾಗಿತ್ತು ನಮ್ಮ ಬೆಂಗಳೂರು. [ಗ್ಯಾಲರಿ ನೋಡಿರಿ]
ಕ್ರಿಕೆಟ್ ಆಟದ ವಿಶ್ವಾಸಾರ್ಹತೆ ಹೆಚ್ಚಿಸುವ ನಿಟ್ಟಿನಲ್ಲಿ ESPN ಚಾನಲ್ಲಿನಲ್ಲಿ ಒಂದು ಉಚಿತ ಜಾಹಿರಾತು ಓಡುತ್ತಿದೆ. ಮ್ಯಾಚ್ ಫಿಕ್ಸಿಂಗ್, ಉದ್ದೀಪನ ಔಷಧಿ ಬಳಕೆ ಮತ್ತು ಬೆಟ್ಟಿಂಗ್ ಮುಂತಾದ ಹಾವಳಿಯಿಂದ ಕ್ರಿಕೆಟ್ ಪಂದ್ಯವನ್ನು ರಕ್ಷಿಸಬೇಕೆನ್ನುವುದು ಆ ಜಾಹಿರಾತಿನ (Keep Cricket Clean) ಸಂದೇಶ. ಸಾಮಾಜಿಕ ತಿಳಿವಳಿಕೆಗೆ ಮುಡಿಪಾದ ಈ ಜಾಹಿರಾತಿಗೆ ಸ್ವಾಗತ. ಇದರ ಜತೆಗೆ keep your stadiums clean ಎಂಬೋ ಜಾಹಿರಾತನ್ನು ಅಳವಡಿಸುವುದು ಅಗತ್ಯ.
ಬೆಂಗಳೂರಿನಲ್ಲಿ ಇನ್ನೂ ನಾಲಕ್ಕು ಪಂದ್ಯಗಳು ನಡೆಯುವುದು ಬಾಕಿ ಇದೆ. ಆ ಪಂದ್ಯಗಳ ಸಮಯದಲ್ಲಿ ಶುಚಿ ಕಾಪಾಡಲು ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಈ ಮೂಲಕ ಜಾವಗಲ್ ಶ್ರೀನಾಥ್ ಮತ್ತು ಅನಿಲ್ ಕುಂಬ್ಳೆಗೆ ತಿಳಿಯಪಡಿಸಲಾಗಿದೆ. ಜತೆಗೆ, ಟಿಕೆಟ್ ವಿತರಿಸುವ ಕ್ರಮದಲ್ಲಿ ಜಾಗರೂಕತೆಯಿಂದ ವ್ಯವಸ್ಥೆ ಮಾಡದಿದ್ದರೆ ಅವರಿಬ್ಬರೂ ಹೀನಾ ಮಾನಾ ಬೈಯಿಸಿಕೊಳ್ಳುವುದು ಖಂಡಿತಾ ಎಂದು ಎಚ್ಚರಿಸಲಾಗಿದೆ.