ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಿನುಗಿದ ಸಿನಿಮಾ ತಾರೆಗಳು
ಬೆಂಗಳೂರು, ಫೆ.27: ಭಾರತ ಮತ್ತು ಇಂಗ್ಲೆಡ್ ನಡುವಿನ ರೋಚಕ ಪಂದ್ಯವನ್ನು ಕಣ್ಣಾರೆ ಸವಿಯಲು ಭಾನುವಾರ(ಫೆ.27) ಸಿನಿಮಾ ತಾರೆಗಳು ಹಾಗೂ ರಾಜಕೀಯ ಗಣ್ಯರು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ದೌಡಾಯಿಸಿ ಬಂದದ್ದು ವಿಶೇಷವಾಗಿತ್ತು. ಪಂದ್ಯ ವೀಕ್ಷಿಸಿದವರಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯಿಲಿ ಪ್ರಮುಖರು.
ಸದಾ ರಾಜಕೀಯ ಜಂಟಾಟದಲ್ಲಿ ಮುಳುಗಿರುವ ಸಿದ್ದರಾಮಯ್ಯ , ಸಚಿವರಾದ ಜನಾರ್ದನ ರೆಡ್ಡಿ, ಶ್ರೀರಾಮುಲು ಹಾಗೂ ಮೋಟಮ್ಮ ಇಂದು ರಾಜಕೀಯ ಮರೆತು ಪಂದ್ಯ ವೀಕ್ಷಿಸಿದರು. ತಾವೇನು ಕಮ್ಮಿ ಎಂಬಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್, ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಎಸ್ ಕೆ ನಟರಾಜ್, ಗೃಹ ಸಚಿವ ಆರ್ ಅಶೋಕ್ ಕೂಡ ಪಂದ್ಯ ವೀಕ್ಷಿಸಲು ತಾ ಮುಂದು ನಾ ಮುಂದು ಎಂದು ಬಂದರು.
ಅದರಲ್ಲೂ ಸಿನಿಮಾ ತಾರೆಗಳಂತೂ ಮ್ಯಾಚ್ ಎಲ್ಲಿ ಮಿಸ್ ಆಗುತ್ತದೋ ಎಂಬಂತೆ ಎದ್ದು ಬಿದ್ದು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ದೌಡಾಯಿಸಿ ಬಂದರು. ಅವರಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ ಕೂಡ ಒಬ್ಬರು. ರೆಬಲ್ ಸ್ಟಾರ್ ಅಂಬರೀಷ್, ರಿಯಲ್ ಸ್ಟಾರ್ ಉಪೇಂದ್ರ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಪಂದ್ಯ ನೋಡಲು ಬಿರುಸಿನ ಹೆಜ್ಜೆ ಹಾಕಿಕೊಂಡು ಬಂದರು.
ಇವರೆಲ್ಲರ ಆಸೆ ಒಂದೇ ಇಂಗ್ಲೆಂಡನ್ನು ಭಾರತ ಮಣಿಸಲಿ ಎಂಬುದು. ಬಾಲಿವುಡ್ ವಲಯದಲ್ಲಿ ಜೋಡಿ ಹಕ್ಕಿಗಳು ಎಂದೇ ಗುರುತಿಸಿಕೊಂಡಿರುವ ವಿಜಯ ಮಲ್ಯ ಪುತ್ರ ಸಿದ್ಧಾರ್ಥ್ ಹಾಗೂ ಬೆಡಗಿ ದೀಪಿಕಾ ಪಡುಕೋಣೆ ಕೂಡ ಪಂದ್ಯದ ವೀಕ್ಷಣೆಗೆ ಬಂದಿದ್ದು. ಆದರೆ ಇವರಿಬ್ಬರೂ ಮಾಧ್ಯಮದವರಿಂದ ನುಣುಚಿಕೊಂಡು ಚಿನ್ನಸ್ವಾಮಿ ಸ್ಟೇಡಿಯಂ ಒಳಗೆ ಕಾಣೆಯಾದರು.