ಮೈಸೂರಿನಲ್ಲಿ ಸಂಸದ ವಿಶ್ವನಾಥ್ ಕಚೇರಿಗೆ ಮುತ್ತಿಗೆ
ಮೈಸೂರು, ಫೆ. 26 : ಮೈಸೂರಿನ ಲೋಕನಾಯಕನಗರದಲ್ಲಿ ನೆಲೆಸಿರುವ ಕುಟುಂಬಗಳನ್ನು ಯಾವುದೇ ರೀತಿಯ ನೊಟೀಸ್ ನೀಡದೆ ಜಿಲ್ಲಾಡಳಿತ ತೆರವುಗೊಳಿಸಲಾಗುತ್ತಿದ್ದು ಇದನ್ನು ಕೂಡಲೇ ನಿಲ್ಲಿಸುವಂತೆ ಒತ್ತಾಯಿಸಿ ಸಂಸದ ಎಚ್. ವಿಶ್ವನಾಥ್ ಅವರ ಕಚೇರಿಗೆ ಮುತ್ತಿಗೆ ಹಾಕಿದ ನಿವಾಸಿಗಳು ಬಳಿಕ ಮನವಿ ಸಲ್ಲಿಸಿದರು.
ಸುಮಾರು 40 ವರ್ಷದ ಹಿಂದೆ ವಿಶ್ವನಾಥ್ ಎಂಬುವರು ಸುಮಾರು 60 ನಿವೇಶನಗಳನ್ನು ಮಾರಾಟ ಮಾಡಿದ್ದು, ಇದರಲ್ಲಿ ಹಲವರು ಮನೆಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಆದರೆ ಜಿಲ್ಲಾಡಳಿತ ಈ ಜಾಗ ಸರ್ಕಾರಕ್ಕೆ ಸೇರಿದೆ ಎಂಬ ಕಾರಣ ನೀಡಿ ಇಲ್ಲಿರುವ ಕೆಲವು ಮನೆಗಳನ್ನು ತೆರವುಗೊಳಿಸಿದೆ. ಇದರಿಂದ ಆ ಕುಟುಂಬಗಳು ಸೂರು ಕಳೆದುಕೊಂಡು ಬೀದಿಗೆ ಬಿದ್ದಿವೆ.
ಯಾವುದೇ ರೀತಿಯ ನೊಟೀಸ್ ನೀಡದೆ ಮನೆ ತೆರವುಗೊಳಿಸಲು ಮುಂದಾಗಿರುವ ಜಿಲ್ಲಾಡಳಿತದ ಕ್ರಮದಿಂದ ನಿವಾಸಿಗಳು ಆತಂಕಗೊಂಡಿದ್ದಾರಲ್ಲದೆ, ಸೂರು ಕಳೆದುಕೊಂಡು ಬೀದಿಗೆ ಬೀಳುವ ಪರಿಸ್ಥಿತಿ ಒದಗಿಬಂದಿರುವುದರಿಂದ ಭಯಭೀತರಾಗಿದ್ದಾರೆ. ಸದ್ಯಕ್ಕೆ ಯಾರಿಗೂ ಕಷ್ಟವನ್ನು ಹೇಳಿಕೊಳ್ಳಲಾಗದ ಪರಿಸ್ಥಿತಿ ಎದುರಾಗಿದೆ.
ಕ್ಷೇತ್ರದ ಶಾಸಕ ಶಂಕರಲಿಂಗೇಗೌಡರು ಅನರ್ಹಗೊಂಡಿದ್ದಾರೆ. ಉಸ್ತುವಾರಿ ಸಚಿವರಾದ ರಾಮದಾಸ್ರವರು ಕೈಗೆ ಸಿಗುತ್ತಿಲ್ಲ. ಜಿಲ್ಲಾಧಿಕಾರಿ ಹರ್ಷಗುಪ್ತಾರವರು ತಮ್ಮ ಮನವಿಯನ್ನು ಸ್ವೀಕರಿಸುತ್ತಿಲ್ಲ ಎಂದು ತಮ್ಮ ಅಳಲನ್ನು ನಿವಾಸಿಗಳು ವಿಶ್ವನಾಥ್ರವರ ಮುಂದೆ ತೋಡಿಕೊಂಡರು. ಇದೇ ಸಂದರ್ಭ ನೊಂದ ಕೆಲವರು ತಮ್ಮೊಂದಿಗೆ ತಂದಿದ್ದ ವಿಷವನ್ನು ಸೇವಿಸಿ ಆತ್ಮಹತ್ಯೆಗೂ ಮುಂದಾದರು. ಸಕಾಲದಲ್ಲಿ ಆಗಮಿಸಿದ ನಜರ್ಬಾದ್ ಠಾಣೆ ಪೊಲೀಸರು ಅದನ್ನು ವಿಫಲಗೊಳಿಸಿದರು. ಕೆಲವರು ವಿಶ್ವನಾಥ್ರವರ ಕಾಲಿಗೆ ಬಿದ್ದು ತಮ್ಮ ಮನೆಗಳನ್ನು ತೆರವುಗೊಳಿಸದಂತೆ ಬೇಡಿಕೊಳ್ಳುತ್ತಿದ್ದ ದೃಶ್ಯವೂ ಕಂಡು ಬಂತು.
ಮನವಿ ಸ್ವೀಕರಿಸಿದ ವಿಶ್ವನಾಥ್ರವರು ಸಂಬಂಧಿಸಿದವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದರಲ್ಲದೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸದರಾದರೂ ಸಾಧ್ಯವಾಗಲಿಲ್ಲ.
ಆಕ್ರೋಶ : ಜಿಲ್ಲಾಧಿಕಾರಿ ಹರ್ಷಗುಪ್ತಾರವರು ಉದ್ದಟತನದಿಂದ ವರ್ತಿಸುತ್ತಿದ್ದು, ಬಡವರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರು ಆರೋಪಿಸಿದರು. ನಾವು ನೀಡುವ ಮನವಿಯನ್ನು ಪರಿಶೀಲಿಸದೆ ಕಸದಬುಟ್ಟಿಗೆ ಹಾಕುತ್ತಾರೆ. ಇಂತಹ ಜಿಲ್ಲಾಧಿಕಾರಿಯನ್ನು ಕೂಡಲೇ ವರ್ಗಾವಣೆಗೊಳಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.