ಪೊಲೀಸ್ ಬಲವೋ, ನಿತ್ಯಾನಂದನ ದೈವಬಲವೋ?
ಸಿಓಡಿ ಪೊಲೀಸರ ತನಿಖೆಗೆ ಸಹಕಾರ ನೀಡಲಿಲ್ಲ ಮತ್ತು ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಆಶ್ರಮದ ಮೂವರು ಭಕ್ತರನ್ನು ಬಿಡದಿ ಪೊಲೀಸರು ಬಂದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಧ್ಯಾನ ಪೀಠದಲ್ಲಿ ಸುದ್ದಿಗೋಷ್ಠಿ ನಡೆಸಿದ ನಿತ್ಯಾನಂದ, ಆಶ್ರಮದ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಗಟ್ಟಬೇಕು ಮತ್ತು ಈ ಪ್ರಕರಣದ ಸಂಚುಕೋರರನ್ನು ಬಂಧಿಸಿ ಸತ್ಯವನ್ನು ಹೊರತರಬೇಕು ಎಂದು ಮನವಿ ಮಾಡಿದರು.
ಸಿಓಡಿ ಪೊಲೀಸರು ಸ್ಥಳೀಯ ಪೊಲೀಸರ ನೆರವಿನೊಂದಿಗೆ, ಮಾಧ್ಯಮಗಳಿಗೆ ಸುಳ್ಳು ಸುದ್ದಿಗಳನ್ನು ನೀಡುವ ಮೂಲಕ ಆಶ್ರಮಕ್ಕೆ ಕೆಟ್ಟ ಹೆಸರು ತರುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದ ನಿತ್ಯಾನಂದ, ಸಿಓಡಿ ಪೊಲೀಸರ ತನಿಖೆಗೆ ಆಶ್ರಮ ಯಾವಾಗಲೂ ಸಹಕಾರ ನೀಡುತ್ತಾ ಬಂದಿದೆ ಎಂದರು. ತನಿಖೆ ಕಾನೂನು ಬದ್ದವಾಗಿರಬೇಕು ಎಂದಷ್ಟೇ ಕೋರಿದ್ದೇವೆ. ಅದರಂತೆ ಬುಧವಾರ ಸಂಜೆ ತಮ್ಮ ಆಶ್ರಮಕ್ಕೆ ತನಿಖೆ ನಡೆಸಲು ಬಂದ ಸಿಓಡಿ ಡಿವೈಎಸ್ಪಿ ರಾಮಲಿಂಗಪ್ಪ ಅವರಿಂದ ಲಿಖಿತ ಮಾಹಿತಿ ಕೋರಿದಾಗ ಮಲೇಷಿಯಾ ಮೂಲದ ಭಕ್ತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು.
ದೈವಶಕ್ತಿ ತೋರುತ್ತೇವೆ : ಸಿಓಡಿ ಡಿವೈಎಸ್ಪಿ ರಾಮಲಿಂಗಪ್ಪ ನಿಮ್ಮ ಆಶ್ರಮಕ್ಕೆ ಬಂದು ಪೊಲೀಸ್ ಶಕ್ತಿ ಎನೆಂಬುದನ್ನು ತೋರಿಸುತ್ತೇನೆ ಎಂದು ಧಮಕಿ ಹಾಕಿದ್ದರು. ಆದರೆ ನಮಗೆ ರಾಜಕೀಯ ಬಲವಾಗಿ ಹಣಬಲವಾಗಲಿ ಇಲ್ಲ, ಬದಲಿಗೆ ದೈವ ಬಲವಿದ್ದು, ದೈವಶಕ್ತಿ ಏನೆಂಬುದನ್ನು ತೋರಿಸುತ್ತೇವೆ ಎಂದು ನಿತ್ಯಾನಂದ ಸವಾಲು ಹಾಕಿದರು. ಈ ಘಟನೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಆದರೆ, ಸಿಓಡಿ ಪೊಲೀಸರು ಬಿಡದಿ ಠಾಣೆಯಲ್ಲಿ ಭಕ್ತರ ವಿರುದ್ದ ದೂರು ನೀಡಿದ್ದಾರೆ. ಆಶ್ರಮ ಭಕ್ತರನ್ನು ಬಂಧಿಸಿದ್ದಾರೆ. ಅಲ್ಲದೆ, ತಪ್ಪು ಮಾಡದ ಆಶ್ರಮದ ಭಕ್ತರು ತಪ್ಪು ಮಾಡದಿದ್ದರೂ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರ ವಿರುದ್ದ ಕಿಡಿಕಾರಿದರು.
ತಮ್ಮ ಮತ್ತು ಆಶ್ರಮದ ವಿರುದ್ದ ತಮಿಳುನಾಡು ಪೊಲೀಸರು, ಆದಾಯ ತೆರಿಗೆ ಇಲಾಖೆ, ಫೆಮಾ ಸಂಸ್ಥೆ, ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಸಿಓಡಿಯೂ ಸೇರಿದಂತೆ 9 ಇಲಾಖೆಗಳು ಸಂಚು ನಡೆಸಿದವು. ಎಂಟು ಇಲಾಖೆಗಳಿಗೆ ಏನು ಮಾಡಲು ಸಾಧ್ಯವಾಗದೆ ಹಿಂದೆ ಸರಿದವು. ಸಿಓಡಿ ಮಾತ್ರ ತಮ್ಮ ಮತ್ತು ಆಶ್ರಮದ ವಿರುದ್ದ ಪ್ರತಿದಿನ ಸಂಚು ರೂಪಿಸುತ್ತಲೇ ಇದೆ. ಸಾಕ್ಷ್ಯಾಧಾರಗಳು ದೊರಕದ ಹಿನ್ನೆಲೆಯಲ್ಲಿ ತನ್ನ ವಿರುದ್ದ ಇಲ್ಲಸಲ್ಲದ ಆರೋಪ ಮಾಡುತ್ತಲೇ ಇದೆ ಎಂದು ಆರೋಪಿಸಿದರು.
ಉಪವಾಸ ಸತ್ಯಾಗ್ರಹ : ತಾವೂ ಸೇರಿದಂತೆ ತಮ್ಮ ಆಶ್ರಮ ವಾಸಿಗಳ ವಿರುದ್ದ ಹೂಡಲಾಗಿರುವ ಪ್ರಕರಣಗಳನ್ನು ಹಿಂದಕ್ಕೆ ಪಡೆಯಬೇಕು. ನಮ್ಮ ಮೇಲೆ ನಡೆಯುತ್ತಿರುವ ಧಾರ್ಮಿಕ ದೌರ್ಜನ್ಯವನ್ನು ಸರ್ಕಾರ ತಪ್ಪಿಸಬೇಕಿದೆ. ದೌರ್ಜನ್ಯವನ್ನು ವಿರೋಧಿಸಿ ಆಶ್ರಮವಾಸಿಗಳು ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ. ಸತ್ಯಾಗ್ರಹ ನಡೆಸುವ ಸ್ಥಳವನ್ನು ಇನ್ನು 48 ಗಂಟೆಗಳಲ್ಲಿ ನಿರ್ಧರಿಸುವುದಾಗಿ ತಿಳಿಸಿದರು. ಈಗಾಗಲೇ ವಿದೇಶಗಳಲ್ಲಿರುವ ಆಶ್ರಮದ ಭಕ್ತರು ಪೊಲೀಸರ ದೌರ್ಜನ್ಯದ ವಿರುದ್ದ ಸತ್ಯಾಗ್ರಹ ಆರಂಭಿಸಿದ್ದಾರೆ ಎಂದು ಹೇಳಿದರು.
ಭಕ್ತರಿಗೆ ಜಾಮೀನು : ಸಿಓಡಿ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಬಂದನಕ್ಕೊಳಪಟ್ಟು ನ್ಯಾಯಾಂಗ ಬಂಧನದಲ್ಲಿದ್ದ ಆಶ್ರಮದ ಭಕ್ತರಾದ ನಿತ್ಯ ಸಚ್ಚಿದಾನಂದ, ನಿತ್ಯಾದಯಾನಂದ, ಸಂತೋಷ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ರೂಪಾ ಜಾಮೀನು ನೀಡಿದ್ದಾರೆ. ರಾಮಕೃಷ್ಣಪ್ರಸಾದ್ ಎಂಬುವರು 25 ಸಾವಿರ ರೂಪಾಯಿ ಬಾಂಡ್ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.